ಕನ್ನಡದಲ್ಲಿ ಸಂಕ್ರಾಂತಿ ಶುಭಾಶಯ ಕೋರಿ ಮನಗೆದ್ದ ಅನುಷ್ಕಾ ಶೆಟ್ಟಿ
ಕನ್ನಡತಿಯಾದರೂ ತೆಲುಗು, ತಮಿಳು ಸಿನಿಮಾ ರಂಗದಲ್ಲಿ ದೊಡ್ಡ ಖ್ಯಾತಿ ಗಳಿಸಿದ, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ ನಟಿ ಅನುಷ್ಕಾ ಶೆಟ್ಟಿ ಮತ್ತೆ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.
ಒಂದೂ ಕನ್ನಡ ಸಿನಿಮಾದಲ್ಲಿ ನಟಿಸದೇ ಇದ್ದರೂ ಸಹ ಅನುಷ್ಕಾ ಶೆಟ್ಟಿ ತನ್ನ ಮಾತೃಭಾಷೆಯ ಮೇಲೆ ಪ್ರೀತಿ ಹಾಗೆಯೇ ಉಳಿಸಿಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಫೇಸ್ಬುಕ್ನಲ್ಲಿ ಶುಭಾಶಯ ಕೋರಿರುವ ನಟಿ ಅನುಷ್ಕಾ ಶೆಟ್ಟಿ , 'ಎಲ್ಲಾರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು' ಎಂದು ಕನ್ನಡದಲ್ಲಿ ಬರೆದಿದ್ದಾರೆ. ಇದೇ ಸಂದೇಶವನ್ನು ಇಂಗ್ಲೀಷ್ನಲ್ಲಿ ಸಹ ಬರೆದು, ತಮ್ಮದೇ ಒಂದು ಸುಂದರ ಚಿತ್ರವನ್ನು ಪ್ರಕಟಿಸಿದ್ದಾರೆ.

ಕನ್ನಡದ ಶುಭಾಶಯ ಕೋರುತ್ತಿರುವುದು ಇದು ಮೊದಲಲ್ಲ
ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಶುಭಾಶಯ ಕೋರುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆ ಸಹ ಹಲವು ಹಬ್ಬಗಳಿಗೆ ಕನ್ನಡದಲ್ಲಿಯೇ ಶುಭಾಶಯ ಕೋರಿದ್ದರು ಅನುಷ್ಕಾ. ಈ ಹಿಂದೆ ದಸರಾ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಕೋರಿದ್ದರು.

ಮಂಗಳೂರಿನ ಚೆಲುವೆ ಅನುಷ್ಕಾ ಶೆಟ್ಟಿ
ಮಂಗಳೂರಿನ ಚೆಲುವೆಯಾದ ಅನುಷ್ಕಾ ಶೆಟ್ಟಿ, ಬೆಂಗಳೂರಿನ ಮೌಂಟ್ ಕಾರ್ಮಲ್ ನಲ್ಲಿ ಬಿಸಿಎ ಮಾಡಿದ್ದರು. ಬೆಂಗಳೂರಿನಲ್ಲಿಯೇ ಯೋಗ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದ ಅನುಷ್ಕಾ ಶೆಟ್ಟಿ, ಮೊದಲಿಗೆ ಕನ್ನಡ ಸಿನಿಮಾ ಮಿಸ್ ಕ್ಯಾಲಿಫೋರ್ನಿಯಾ ದಲ್ಲಿ ನಟಿಸಬೇಕಿತ್ತು. ಆದರೆ ಆ ಅವಕಾಶ ಬೇರೆಯವರ ಪಾಲಾಯಿತು. ಆ ನಂತರ ಅನುಷ್ಕಾ ಕನ್ನಡದಲ್ಲಿ ನಟಿಸಲು ಸಾಧ್ಯವಾಗಲೇ ಇಲ್ಲ.

ಸ್ಪಷ್ಟವಾಗಿ ಕನ್ನಡ ಹಾಗೂ ತುಳು ಮಾತನಾಡುತ್ತಾರೆ ಅನುಷ್ಕಾ
ಸ್ಪಷ್ಟವಾಗಿ ಕನ್ನಡ ಹಾಗೂ ತುಳು ಮಾತನಾಡುವ ಅನುಷ್ಕಾ ಶೆಟ್ಟಿ, ಹಲವಾರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಹುಟ್ಟೂರಿನಲ್ಲಿರುವ ತಂದೆ-ತಾಯಿಯ ಭೇಟಿಗೆ ಹಲವು ಬಾರಿ ಆಗಮಿಸುತ್ತಿರುತ್ತಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಳ್ಳುತ್ತಾರೆ ಅನುಷ್ಕಾ ಶೆಟ್ಟಿ.

ಮಹೇಶ್ ಬಾಬು ಜೊತೆ ಅನುಷ್ಕಾ ನಟನೆ
ಅನುಷ್ಕಾ ಶೆಟ್ಟಿ ಕೊನೆಯದಾಗಿ 'ನಿಶ್ಯಬ್ಧಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ತಮಿಳಿನ ಪೊನ್ನಿಯಂ ಸೆಲ್ವಂ ನಲ್ಲಿ ಸಹ ಆಕೆ ನಟಿಸುವ ಸಾಧ್ಯತೆಗಳಿವೆ.


Click it and Unblock the Notifications











