ಚೆನ್ನಮಾಂಬೆ ಪಾತ್ರದಲ್ಲಿ ಸ್ವೀಟಿ; ಕನ್ನಡ ಚಿತ್ರದಲ್ಲಿ ಉಪೇಂದ್ರ ಜೊತೆ ಅನುಷ್ಕಾ ಶೆಟ್ಟಿ; ?
ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕೆಲ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸದೇ ಪರಭಾಷೆಯಲ್ಲಿ ನೇಮು ಫೇಮು ಗಳಿಸಿದ್ದಾರೆ. ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಕೂಡ ಈವರೆಗೆ ಒಂದು ಕನ್ನಡ ಚಿತ್ರದಲ್ಲಿ ನಟಿಸಿಲ್ಲ. ಆದರೆ ಕೆಲ ನಿರ್ಮಾಪಕರು, ನಿರ್ದೇಶಕರು ಆಕೆಯನ್ನು ಚಂದನವನಕ್ಕೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಪೋಷಕರಿಂದಲೂ ಒತ್ತಡ ಇದೆ.
ಆರಂಭದಲ್ಲಿ ಕನ್ನಡ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸುವ ಪ್ರಯತ್ನ ಮಾಡಿದ್ದರು. 'ಸೂಪರ್' ಸಿನಿಮಾ ಮೂಲಕ ತೆಲುಗಿನಲ್ಲಿ ಸಕ್ಸಸ್ ಕಂಡ ಬಳಿಕ ಮತ್ತೆ ಇತ್ತ ಮುಖ ಮಾಡಲಿಲ್ಲ. ತೆಲುಗು ಬಿಟ್ಟರೆ ಕೆಲ ತಮಿಳು ಸಿನಿಮಾಗಳಲ್ಲಿ ಕೂಡ ಸ್ವೀಟಿ ನಟಿಸಿದ್ದರು. ಒಂದೆರಡು ಕನ್ನಡ ಚಿತ್ರಕ್ಕೆ ಆಕೆಯ ಹೆಸರು ಕೇಳಿ ಬಂದರೂ ಯಾವುದೂ ನಿಜವಾಗಲಿಲ್ಲ. ಇದೀಗ ಬಹುನಿರೀಕ್ಷಿತ ಕನ್ನಡ ಚಿತ್ರವೊಂದಕ್ಕೆ ಸ್ವೀಟಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಉಪೇಂದ್ರ ಸೇರಿ ಘಟಾನುಘಟಿ ಕಲಾವಿದರು ಕೂಡ ಅ ಚಿತ್ರದಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ.

ನಾಡಪ್ರಭು ಕೆಂಪೇಗೌಡರ ಜೀವನವನ್ನಾಧರಿಸಿ ಕನ್ನಡದಲ್ಲಿ ಬಯೋಪಿಕ್ ಸಿನಿಮಾಗಳನ್ನು ಮಾಡುವ ಪ್ರಯತ್ನಗಳು ನಡೀತಿದೆ. ಒಂದ್ಕಡೆ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ. ಮತ್ತೊಂದು ಕಡೆ ಧನಂಜಯ್ ಹೀರೊ ಆಗಿ ಟಿ. ಎಸ್ ನಾಗಾಭರಣ ಕೂಡ ಕೆಂಪೇಗೌಡರ ಕಥೆಯನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಂದೇ ಕಥೆ ಆಧರಿಸಿ ಎರಡೂ ಸಿನಿಮಾ ಮಾಡುವ ಬಗ್ಗೆ ವಿವಾದ ಹುಟ್ಟಿಕೊಂಡಿದೆ. ಪ್ರಕರಣ ಸದ್ಯ ಕೋರ್ಟ್ ಮೆಟ್ಟಿಲೇರಿದೆ.
ಸಿಟಿ ಸಿವಿಲ್ ಕೋರ್ಟ್ ಹಾಗೂ ಫಿಲ್ಮ್ ಚೇಂಬರ್ನಲ್ಲಿ ಕಿರಣ್ ತೋಟಂಬೈಲ್ ಕೈ ಮೇಲಾಗಿದೆ. ಸದ್ಯ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಆದಷ್ಟು ಬೇಗ ನಮ್ಮ ಪರ ತೀರ್ಪು ಬರುತ್ತದೆ ಎಂದು ಕಿರಣ್ ವಿಶ್ವಾಸದಲ್ಲಿದ್ದಾರೆ. ಅಂದಹಾಗೆ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರವನ್ನು ದಿನೇಶ್ ಬಾಬು ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಕೆಂಪೇಗೌಡರ ಪಾತ್ರದಲ್ಲಿ ಉಪೇಂದ್ರ ನಟಿಸುವ ಸಾಧ್ಯತೆಯಿದೆ. ಅವರ ಜೊತೆ ಚರ್ಚೆ ಕೂಡ ನಡೀತಿದೆ. ಇನ್ನು ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ಶ್ರೀನಗರ ಕಿಟ್ಟಿ ಸೇರಿದಂತೆ ಹೆಸರಾಂತ ಕಲಾವಿದರನ್ನು ಆಯ್ಕೆ ಮಾಡುವ ಲೆಕ್ಕಾಚಾರ ನಡೀತಿದೆ.

ಚಿತ್ರದಲ್ಲಿ ಕೆಂಪೇಗೌಡರ ಪತ್ನಿ ಚೆನ್ನಮಾಂಬೆ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಜೊತೆ ಕಿರಣ್ ತೋಟಂಬೈಲ್ ಮಾತುಕತೆ ನಡೆಸುತ್ತಿದ್ದಾರೆ. ಅನುಷ್ಕಾ ಸಹೋದರ ನನ್ನ ಸ್ನೇಹಿತ. ಆಕೆಯ ಕುಟುಂಬಸ್ಥರು ಕೂಡ ಚಿತ್ರದಲ್ಲಿ ನಟಿಸುವಂತೆ ಹೇಳುತ್ತಿದ್ದಾರೆ. ಒಂದಾದರೂ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚುವಂತೆ ಕೇಳುತ್ತಿದ್ದಾರೆ. ಹಾಗಾಗಿ ಆಕೆ ನಟಿಸುವ ಸಾಧ್ಯತೆ ಹೆಚ್ಚಿದೆ ಎಂದು ಕಿರಣ್ ಫಿಲ್ಮಿಬೀಟ್ಗೆ ಪ್ರತಿಕ್ರಿಯಿಸಿದ್ದಾರೆ.
ಅರುಂಧತಿ, ದೇವಸೇನಾ, ರುದ್ರಮದೇವಿ ರೀತಿಯ ಪವರ್ಫುಲ್ ಪಾತ್ರಗಳಲ್ಲಿ ಸ್ವೀಟಿ ನಟಿಸಿ ಗೆದ್ದಿದ್ದಾರೆ. ಐತಿಹಾಸಿಕ ಪಾತ್ರಗಳಿಗೆ ಜೀವ ತುಂಬುವಲ್ಲಿ ಸಕ್ಸಸ್ ಕಂಡಿದ್ದಾರೆ. ಹಾಗಾಗಿ ಕೆಂಪೇಗೌಡರ ಜೀವನಾಧರಿತ ಚಿತ್ರದಲ್ಲಿ ಆಕೆ ನಟಿಸಿದರೆ ಚೆನ್ನಾಗಿರುತ್ತದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಅಭಿಮಾನಿಗಳು ಕೂಡ ಸ್ವೀಟಿ ಕನ್ನಡದಲ್ಲಿ ನಟಿಸಬೇಕು ಎಂದು ಬಯಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಚಿತ್ರದಲ್ಲಿ ಆಕೆಯನ್ನು ನೋಡಬಹುದು.
ಸದ್ಯ 'ಘಾಟಿ' ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಲೇ ಇದೆ. ಇನ್ನು 'ಕತ್ತನಾರ್' ಎಂಬ ಸಿನಿಮಾ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸ್ವೀಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ.


Click it and Unblock the Notifications











