ಗಾಂಧಿನಗರದ 'ಲೇಡಿ ಸಿಂಗಂ' ಆಗ್ತಾರಾ ಅನುಷ್ಕಾ ಶೆಟ್ಟಿ?
ಎಲ್ಲಾ ಅಂತೆ ಕಂತೆಗಳು ನಿಜವಾಗಿದ್ದರೆ ಇಷ್ಟೊತ್ತಿಗಾಗಲೇ ಟಾಲಿವುಡ್ ನ ಟಾಪ್ ಹೀರೋಯಿನ್ ಅನುಷ್ಕಾ ಶೆಟ್ಟಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ಎರಡು ವರ್ಷಗಳಾಗಿರ್ತಿತ್ತು. ಅದೇನು, ಅನುಷ್ಕಾ ಶೆಟ್ಟಿಗೆ ಬರೋಕೆ ಇಷ್ಟವಿರಲಿಲ್ಲವೋ? ಅಥವಾ ದರ್ಶನ್ ಲಕ್ ಚೆನ್ನಾಗಿರಲಿಲ್ಲವೋ ಗೊತ್ತಿಲ್ಲ! ಆದ್ರೆ, ಬೃಂದಾವನಕ್ಕೆ ಅನುಷ್ಕಾ 'ಯೋಗ' ಸಿಗಲಿಲ್ಲ.
ಅಂದು ಮಿಸ್ ಆಗಿ ತವರು ಮನೆಗೆ ಬಾರದ ಅನುಷ್ಕಾ ಶೆಟ್ಟಿ ಇಂದು ಮತ್ತೆ ಗಾಂಧಿನಗರಕ್ಕೆ ಕಾಲಿಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಿಜಿಯಾಗಿರುವುದರ ಜೊತೆಗೆ ಸ್ಯಾಂಡಲ್ ವುಡ್ ನೂ ಒಂದು ಕೈ ನೋಡೋಣ ಅಂತ ಅನುಷ್ಕಾ ಶೆಟ್ಟಿ ಮನಸ್ಸು ಮಾಡಿದ್ದಾರಂತೆ. [ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್'ಗೆ ಅನುಷ್ಕಾ ಶೆಟ್ಟಿ]

ಎಷ್ಟೇ ಆಗ್ಲಿ ಅನುಷ್ಕಾ ಶೆಟ್ಟಿ, ನಮ್ಮನೆ ಹುಡುಗಿ. ಕರಾವಳಿಯ ಕುವರಿ. ತವರು ನೆಲವನ್ನು ಬಿಟ್ಟು ಇನ್ನೆಲ್ಲೋ ಸದ್ದು ಮಾಡುತ್ತಿರುವ ಅನುಷ್ಕಾ, ಇಲ್ಲೂ ಸದ್ದು ಮಾಡೋಕೆ ಒಂದೊಳ್ಳೆ ಅವಕಾಶಕ್ಕೋಸ್ಕರ ಕಾಯ್ತಿದ್ರು. ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ಹೀರೋಗಳ ರೇಂಜಿಗಿರುವ ಅನುಷ್ಕಾ, ಖಾಲಿ ಹೀರೋಯಿನ್ ಆಗಿ ಬರೀ ಸಾಂಗ್ಸ್, ಒಂದೆರಡು ಸೀನ್ ಗಳಿರುವ ಪಾತ್ರಗಳ ಆಫರ್ ಬಂದ್ರೆ ಒಪ್ತಾರಾ? ಖಂಡಿತ ಇಲ್ಲ! [ಬಾಲಿವುಡ್ ಗೆ ಅಡಿಯಿಡಲಿರುವ ನಟಿ ಅನುಷ್ಕಾ ಶೆಟ್ಟಿ]

ಅದಕ್ಕೆ ನಿರ್ಮಾಪಕ ವಿಜಯ್ ಕುಮಾರ್ ಒಂದೊಳ್ಳೆ ಐಡಿಯಾ ಮಾಡಿದ್ದಾರೆ. ಟಾಲಿವುಡ್ ನಲ್ಲಿ ಕತ್ತಿ ಹಿಡಿದು ರುದ್ರಮದೇವಿಯಾಗಿರುವ ಅನುಷ್ಕಾ, ಕನ್ನಡದಲ್ಲಿ ಪಿಸ್ತೂಲ್ ಹಿಡಿದು ವಿಲನ್ ಗಳನ್ನ ಮಣ್ಣುಮುಕ್ಕಿಸಿದ್ರೆ ಸೂಪರ್ ಅಂತ, ಅನುಷ್ಕಾಗಾಗಿ 'ಲೇಡಿ ಸಿಂಗಂ' ಕಥೆ ರೆಡಿಮಾಡಿದ್ದಾರೆ.

ಪವರ್ ಫುಲ್ ಸಿಬಿಐ ಆಫೀಸರ್ ಸುತ್ತ ಗಿರಕಿ ಹೊಡೆಯುವ ಮಹಿಳಾ ಪ್ರಧಾನ ಚಿತ್ರ 'ಲೇಡಿ ಸಿಂಗಂ'. ಈ ಕಥೆಯನ್ನಿಟ್ಟುಕೊಂಡು ವಿಜಯ್ ಕುಮಾರ್ ಅದಾಗಲೇ ಅನುಷ್ಕಾ ಶೆಟ್ಟಿ ಜೊತೆಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ. ಹೆಸರು ಕೇಳ್ತಿದ್ದ ಹಾಗೆ ಅನುಷ್ಕಾ, 'ಓಕೆ ಕಥೆ ಕೇಳುತ್ತೀನಿ'' ಅಂತ ಒಪ್ಪಿಕೊಂಡಿದ್ದಾರೆ. [ಮದುವೆ ಬಗ್ಗೆ ಮೌನ ಮುರಿದ ನಟಿ ಅನುಷ್ಕಾ ಶೆಟ್ಟಿ]
ನಿರ್ಮಾಪಕ ವಿಜಯ್ ಕುಮಾರ್ ಗೆ ಅನುಷ್ಕಾ ಸಹೋದರ ಅತ್ಯಾಪ್ತನಾಗಿರುವ ಕಾರಣ, ಅವರು ಈ ಚಿತ್ರವನ್ನ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಹೆಬ್ಬಯಕೆ ಹೊಂದಿದ್ದ ಅನುಷ್ಕಾ, ಚಿತ್ರದ ಕಥೆ ಕೇಳಿ ಒಪ್ಪಿಕೊಂಡರೆ, ಸ್ಯಾಂಡಲ್ ವುಡ್ ನ ಹೊಸ ಸಿಬಿಐ ಆಫೀಸರ್ ಆಗಿ ಅನುಷ್ಕಾ ಎಂಟ್ರಿಕೊಡೋದು ಗ್ಯಾರೆಂಟಿ.

ಒಂದ್ವೇಳೆ ಅದಾಗದಿದ್ದರೆ ನಯನತಾರರನ್ನ ಸಿಬಿಐ ಆಫೀಸರ್ ಮಾಡೋಕೆ ವಿಜಯ್ ಕುಮಾರ್ ಪ್ಲಾನ್ ಮಾಡಿದ್ದಾರೆ. ನಿಜ ಹೇಳ್ಬೇಕಂದ್ರೆ, 'ಲೇಡಿ ಸಿಂಗಂ' ಅನುಷ್ಕಾ ಮನೆ ಬಾಗಿಲು ತಟ್ಟುವ ಮುನ್ನ ರಾಗಿಣಿ ಕೈಯಲ್ಲಿತ್ತು. ಆದ್ರೆ ತುಪ್ಪದ ಹುಡುಗಿ ಸಖತ್ ಬಿಜಿಯಾಗಿರುವ ಕಾರಣ ಬಹುಭಾಷಾ ನಟಿಯರವರೆಗೂ 'ಲೇಡಿ ಸಿಂಗಂ' ಘರ್ಜನೆ ಕೇಳಿಬರುತ್ತಿದೆ. [ಕುಡ್ಲದ ಬಾಲೆ ಅನುಷ್ಕಾಗೆ ಭರ್ಜರಿ ಗಿಫ್ಟ್ ]

ಒಮ್ಮೆಲೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ 'ಲೇಡಿ ಸಿಂಗಂ' ರೆಡಿಯಾಗಲಿದ್ದು ಅನುಷ್ಕಾ ಗ್ರೀನ್ ಸಿಗ್ನಲ್ ಗೋಸ್ಕರ ನಿರ್ಮಾಪಕರು ಕಾಯ್ತಿದ್ದಾರೆ. ರುದ್ರಮದೇವಿಯ ಕೃಪೆ ಕನ್ನಡ ನಿರ್ಮಾಪಕರತ್ತ ಇದಿಯೋ ಇಲ್ಲವೋ ಅನ್ನುದು 'ಲೇಡಿ ಸಿಂಗಂ' ಮೂಲಕ ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











