ಪದೇ ಪದೇ ಅನುಶ್ರೀ ಬಗ್ಗೆ 'ಈ' ಗಾಸಿಪ್ ಕೇಳಿಬರೋದು ಯಾಕೆ.?
ಬಣ್ಣದ ಬದುಕಿನಲ್ಲಿ ಇದ್ದ ಮೇಲೆ ಗಾಸಿಪ್ ಅನ್ನೋದು ಕಾಮನ್. ಸಿನಿಮಾ ನಟ-ನಟಿಯರ ಬಗ್ಗೆ ಆಗಾಗ ಅಂತೆ-ಕಂತೆ ಸುದ್ದಿಗಳು ಕೇಳಿಬರುತ್ತಲೇ ಇರುತ್ತೆ. ಇನ್ನೂ ಅನುಶ್ರೀ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ... ಕಿರುತೆರೆ ಲೋಕದಲ್ಲೂ ಜನಪ್ರಿಯತೆ ಗಳಿಸಿದ್ದಾರೆ.
ಸದ್ಯಕ್ಕೆ ಆಂಕರ್ ಆಗಿ ಜನರ ಪ್ರೀತಿ ಗಳಿಸಿರುವ ಅನುಶ್ರೀ ಬಗ್ಗೆ ಆಗಾಗ ಗಾಳಿಸುದ್ದಿಯೊಂದು ಕಿವಿಗೆ ಬೀಳುತ್ತಲೇ ಇರುತ್ತೆ. ಅದ್ಯಾವುದು ಅಂದ್ರೆ 'ಅನುಶ್ರೀ ಕಲ್ಯಾಣ'.
ಆಂಕರ್ ಕಮ್ ನಟಿ ಅನುಶ್ರೀ ಮದುವೆ ಆದ್ರಂತೆ... ಅನುಶ್ರೀ ಸದ್ಯದಲ್ಲೇ ಮದುವೆ ಆಗ್ತಾರಂತೆ.. ಎಂಬ ಅಂತೆ-ಕಂತೆ ಸುದ್ದಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಬರವೇ ಇಲ್ಲ. ಪದೇ ಪದೇ ಈ ತರಹದ ಅಂತೆ-ಕಂತೆ ಪುರಾಣಗಳನ್ನ ಕೇಳಿ ಕೇಳಿ ಅನುಶ್ರೀ ಬೇಸೆತ್ತಿದ್ದಾರೆ. ಅದಕ್ಕೆ ''ಮದುವೆ ಆಗುವುದೇ ಆದರೆ ಖಂಡಿತವಾಗಲೂ ಬಹಿರಂಗ ಪಡಿಸುವೆ'' ಅಂತ ಖಾರವಾಗಿ ನುಡಿದಿದ್ದಾರೆ ಅನುಶ್ರೀ. ಮುಂದೆ ಓದಿರಿ...

ಬೇಸರಗೊಂಡಿರುವ ಅನುಶ್ರೀ
''ಹಲವು ಬಾರಿ ಅನೇಕರು ನನಗೆ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಕೂಡಲೆ ಮದುವೆ ಮಾಡುವ ಆತುರ ಜನರಿಗೆ ಯಾಕೆ ಬರುತ್ತೆ ಅಂತ ಗೊತ್ತಾಗಲ್ಲ. ಮದುವೆ ಎಂಬುದು ನನ್ನ ಸ್ವಂತ ನಿರ್ಧಾರ. ನಾನೇನಾದರೂ ಮದುವೆ ಆದರೆ ಎಲ್ಲರಿಗೂ ತಿಳಿಸಿಯೇ ಆಗುವೆ. ಗುಟ್ಟಾಗಿ ಇಡುವುದಿಲ್ಲ. ಪದೇ ಪದೇ ಈ ಸುಳ್ಳು ಸುದ್ದಿಯನ್ನ ಕೇಳಿ ಕೇಳಿ ನನಗೆ ಬೇಸರ ಆಗಿದೆ'' ಎಂದು ಸಂದರ್ಶನವೊಂದರಲ್ಲಿ ಅನುಶ್ರೀ ಹೇಳಿದ್ದಾರೆ.

ಮದುವೆ ಬಗ್ಗೆ ಯೋಚನೆ ಇಲ್ಲ
''ಎಲ್ಲರೂ ಒಂದಲ್ಲಾ ಒಂದು ದಿನ ಮದುವೆ ಆಗುತ್ತಾರೆ. ಮದುವೆ ಬಗ್ಗೆ ಸದ್ಯಕ್ಕೆ ನಾನು ಯೋಚನೆ ಮಾಡಿಲ್ಲ. ಮನೆಯಲ್ಲೂ ನನ್ನ ಮದುವೆ ಬಗ್ಗೆ ಒತ್ತಾಯವಾಗಲಿ, ಆತುರವಾಗಲಿ ಇಲ್ಲ. ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಯಾಕಿದೆ ಅಂತಲೇ ಗೊತ್ತಾಗುತ್ತಿಲ್ಲ'' ಅಂತ ತಮ್ಮ ಅಸಮಾಧಾನವನ್ನು ಅನುಶ್ರೀ ಹೊರಹಾಕಿದ್ದಾರೆ.

ಸುಳ್ಳು ಸುದ್ದಿ ನಂಬಬೇಡಿ
''ನನ್ನ ಮದುವೆ ಬಗ್ಗೆ ನಾನೇ ಬಹಿರಂಗ ಪಡಿಸುವೆ'' ಎಂದಿರುವ ಅನುಶ್ರೀ, ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ನಂಬದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾದಲ್ಲಿ ಮದುವೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಕ್ಕೆ ಅನುಶ್ರೀಗೆ ನಿಜಕ್ಕೂ ಮದುವೆ ಆಗಿಹೋಗಿದೆ ಅಂತಲೇ ಕೆಲವರು ಸುದ್ದಿ ಹಬ್ಬಿಸಿದ್ದರು.

ಅನುಶ್ರೀ ಅಭಿನಯಿಸಿದ ಸಿನಿಮಾಗಳು..
ಮಂಗಳೂರು ಮೂಲದ ಅನುಶ್ರೀ 'ಭೂಮಿತಾಯಿ', 'ಬೆಳ್ಳಿ ಕಿರಣ', 'ಟ್ಯೂಬ್ ಲೈಟ್', 'ಬೆಂಕಿಪಟ್ಣ', 'ರಿಂಗ್ ಮಾಸ್ಟರ್', 'ಉಪ್ಪು ಹುಳಿ ಖಾರ' ಚಿತ್ರಗಳಲ್ಲಿ ಅನುಶ್ರೀ ಅಭಿನಯಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರಿಗಮಪ' ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಕಿ ಆಗಿದ್ದಾರೆ.


Click it and Unblock the Notifications











