ಸಂಚಾರಿ ವಿಜಯ್ ದೇಹದಿಂದ 2 ಕಿಡ್ನಿ, 2 ಕಣ್ಣು, ಲಿವರ್ ದಾನ
ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯವಾಗಿದೆ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸೋಮವಾರ ರಾತ್ರಿ 8.20 ಸಮಯಕ್ಕೆ ಮಾಧ್ಯಮದ ಜೊತೆ ಮಾತನಾಡಿದ ನ್ಯೂರೋ ಸರ್ಜನ್ ಅರುಣ್ ನಾಯಕ್ ಅಪ್ನಿಯಾ ಪರೀಕ್ಷೆಯಲ್ಲಿ ಎಲ್ಲವೂ ಪಾಸಿಟಿವ್ ಬಂದಿದೆ, 9 ಗಂಟೆಯ ನಂತರ ಅಂಗಾಂಗ ದಾನ ಪ್ರಕ್ರಿಯೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಜೀವ ಸಾರ್ಥಕತೆ ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಪ್ರಕ್ರಿಯೆ ಆರಂಭಿಸಿದೆ. ಸಂಚಾರಿ ವಿಜಯ್ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವ್ಯಾಲ್ಸ್ ದಾನ ಮಾಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಅಂಗಾಂಗ ದಾನ ಮಾಡುವ ಪ್ರಕ್ರಿಯೆಗೆ ಕುಟುಂಬದವರು ಒಪ್ಪಿಗೆ ಪಡೆಯಲಾಗಿದೆ. ಮಂಗಳವಾರ ಬೆಳಗ್ಗೆವರೆಗೂ ಈ ಪ್ರಕ್ರಿಯೆ ನಡೆಯಲಿದ್ದು, ಆನಂತರ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ವೆಂಟಿಲೇಟರ್ ಬೆಂಬಲದಿಂದ ಉಸಿರಾಡುತ್ತಿರುವ ವಿಜಯ್ ಆರೋಗ್ಯ ಸ್ಥಿತಿ ಯಥಾವತ್ತಾಗಿದೆ. ಆದರೆ ಮೆದುಳು ನಿಷ್ಕ್ರಿಯಗೊಂಡಿದ್ದು, ಅಧಿಕೃತವಾಗಿ ನಿಧನ ಎಂದು ಇನ್ನೂ ವೈದ್ಯರು ಪ್ರಕಟಿಸಿಲ್ಲ.
ಇನ್ನು ನಿರ್ದೇಶಕ ಮಂಸೋರೆ ಹಾಗೂ ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತಾ ಮಾಧ್ಯಮಗಳ ಜೊತೆ ಮಾತನಾಡಿ, ''ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಮಧ್ಯಾಹ್ನದ ವೇಳೆ ಹುಟ್ಟೂರಾದ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು'' ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











