Puneeth Rajkumar Birth Anniversary : ಪುನೀತ್ ರಾಜ್ಕುಮಾರ್ ಜನ್ಮದಿನೋತ್ಸವ: ರಾಜ್ಯಾದ್ಯಂತ 'ಅಪ್ಪು ಉತ್ಸವ'
ಇಂದು(ಮಾರ್ಚ್ 17) ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜನ್ಮದಿನೋತ್ಸವ. 2ನೇ ವರ್ಷ ಅಪ್ಪು ಅನುಪಸ್ಥಿತಿಯಲ್ಲಿ ಅವರ ಹುಟ್ಟುಹಬ್ಬ ಆಚರಿಸುವಂತಾಗಿದೆ. ನೆಚ್ಚಿನ ನಟನ ಅಗಲಿಕೆ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ. ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳ ಪ್ರೀತಿಯ ಪರಮಾತ್ಮ ಇಲ್ಲದ ನೋವು ಮತ್ತಷ್ಟು ಕಾಡುತ್ತಿದೆ. ಇಡೀ ದಿನ 'ಅಪ್ಪು ಉತ್ಸವ' ನಡೆಯಲಿದೆ.
ಪುನೀತ್ ರಾಜ್ಕುಮಾರ್ ಅಗಲಿ ಒಂದೂವರೆ ವರ್ಷವಾಗಿದೆ. ಆದರೆ ಅವರಿಲ್ಲದ ನೋವು ಅಭಿಮಾನಿಗಳನ್ನು ಪ್ರತಿದಿನ ಪ್ರತಿಕ್ಷಣ ಕಾಡುತ್ತಲೇ ಇದೆ. ದೈಹಿಕವಾಗಿ ಪುನೀತ್ ರಾಜ್ಕುಮಾರ್ ಇಲ್ಲದೇ ಇದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದ್ದಾರೆ. ಅಪ್ಪು ಹುಟ್ಟುಹಬ್ಬ ದಿನ ಕುಟುಂಬ ಸದಸ್ಯರು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಬಂದು ಸಮಾಧಿಗೆ ನಮಿಸಲಿದ್ದಾರೆ. ಇನ್ನು ಇಡೀ ದಿನ ಸಮಾಧಿ ಬಳಿ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದೆ. ಇನ್ನು ಸಮಾಧಿ ಸುತ್ತಾ ದೀಪಾಲಂಕಾರ ಮಾಡಿದ್ದು ಸಂಜೆ ಸಂಗೀತೋತ್ಸವ ಕೂಡ ಇದೆ.

ಯುವ ರಾಜ್ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. 'ಅಪ್ಪು ಉತ್ಸವ', 17- 03- 2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಹಾಗೂ ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ. ಸ್ಥಳ: ಡಾ|| ರಾಜ್ಕುಮಾರ್ ಸ್ಮಾರಕ, ಕಂಠೀರವ ಸ್ಟುಡಿಯೋ. ಸರ್ವರಿಗೂ ಸುಸ್ವಾಗತ ಎಂದು ಬರೆದುಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಕೂಡ ನಾಡಿನಾದ್ಯಂತ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. #PuneethRajkumarLiveson ಎನ್ನುವ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ದೈಹಿಕವಾಗಿ ಕರ್ನಾಟಕ ಪುನೀತ್ ರಾಜ್ಕುಮಾರ್ ನಮ್ಮೊಟ್ಟಿಗೆ ಇಲ್ಲದೇ ಇದ್ದರೂ ಅವರ ಸಾಮಾಜಿಕ ಕೆಲಸಗಳು ಹಾಗೂ ಸಿನಿಮಾಗಳು, ಹಾಡುಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಇನ್ನು ಬೆಳಿಗ್ಗೆಯಿಂದಲೂ ದೊಡ್ಡಮಟ್ಟದಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಯತ್ತ ಧಾವಿಸು ಬರುತ್ತಿದ್ದಾರೆ.
ಬಹಳ ಹಿಂದೆಯೇ 'ಕಬ್ಜ' ಸಿನಿಮಾ ಶುರವಾಗಿತ್ತು. ಕೊರೋನಾ ಹಾವಳಿಯಿಂದ ಸಿನಿಮಾ ರಿಲೀಸ್ ತಡವಾಗಿತ್ತು. ಸಿನಿಮಾ ಸೆಟ್ಗೆ ಅಪ್ಪು ಕೂಡ ಒಮ್ಮೆ ಭೇಟಿ ಕೊಟ್ಟು ತಂಡಕ್ಕೆ ಶುಭ ಹಾರೈಸಿದ್ದರು. ನಿರ್ದೇಶಕ ಆರ್. ಚಂದ್ರು ಚಿತ್ರವನ್ನು ಪುನೀತ್ ರಾಜ್ಕುಮಾರ್ ಜನ್ಮದಿನೋತ್ಸವದ ಸಂಭ್ರಮದಲ್ಲಿ ತೆರೆಗೆ ತರುತ್ತಿದ್ದಾರೆ. ಚಿತ್ರದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಹಾಗೂ ಶಿವರಾಜ್ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಪುನೀತ್ ರಾಜ್ಕುಮಾರ್ ಕನಸಿನ 'ಗಂಧದಗುಡಿ' ಡಾಕ್ಯೂಡ್ರಾಮಾ ಸಿನಿಮಾ ಮಧ್ಯರಾತ್ರಿಯಿಂದಲೇ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಡಿಜಿಟಲ್ ಪ್ಲಾಟ್ಫಾರ್ಮ್ಗೆ ತಂದಿದ್ದಾರೆ. ಅಭಿಮಾನಿಗಳು 1ಗಂಟೆ 37 ನಿಮಿಷಗಳ ಕಾಲ ಅಪ್ಪು ಜೊತೆಗೆ ಕಾಡು ಮೇಡು ಸುತ್ತಾಡಿ ಬರುತ್ತಿದ್ದಾರೆ. ಕರ್ನಾಟಕದ ನೈಸರ್ಗಿಕ ಸಂಪತ್ತು ಹಾಗೂ ವನ್ಯಜೀವಿ ಲೋಕವನ್ನು ಜಗತ್ತಿಗೆ ಪರಿಚಯಿಸಲು ಅದರ ರಕ್ಷಣೆಗೆ ಬಗ್ಗೆ ಜಾಗೃತಿ ಮೂಡಿಸಲು ಅಪ್ಪು ಈ ಡಾಕ್ಯುಮೆಂಟರಿ ಸಿನಿಮಾ ಮಾಡಿದ್ದರು.
ಇನ್ನು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಜೆಪಿ ನಗರದ ಸಿದ್ದೇಶ್ವರ ಥಿಯೇಟರ್ನಲ್ಲಿ 'ಯುವರತ್ನ' ಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಗಿತ್ತು. ನಿರ್ದೇಶಕ ಸಂತೋಷ್ ಆನಂದ್ರಾಮ್ ಕೂಡ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಖುಷಿಪಟ್ಟರು. 2021ರಲ್ಲಿ 'ಯುವರತ್ನ' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು.


Click it and Unblock the Notifications











