ಕನ್ನಡಕ್ಕಾಗಿ ದ್ವೇಷ ಮರೆತ ಅಪ್ಪು, ಕಿಚ್ಚ, ಯಶ್ ಫ್ಯಾನ್ಸ್: ಸ್ಯಾಂಡಲ್ವುಡ್ನಲ್ಲಿ ಹೀಗೊಂದು 'ಕ್ರಾಂತಿ'!
'ರಾಜಕುಮಾರ' ಚಿತ್ರದ ಅಪ್ಪು ಡ್ಯಾನ್ಸ್ ಡ್ಯಾನ್ಸ್ ಹಾಡಿನಲ್ಲಿ "ಫಸ್ಟ್ ಡೇ ಫಸ್ಟ್ ಶೋ ಕನ್ನಡ ಸಿನಿಮಾ ನೋಡಿ, ಸ್ಟಾರ್ ವಾರ್ ಯಾಕೆ ಎಲ್ಲ ಒಂದೆ ಇಲ್ಲಿ" ಎನ್ನುವ ಸಾಲಿದೆ. ಆ ಸಾಲಿಗೆ ತಕ್ಕಂತೆ 'ಕ್ರಾಂತಿ' ಚಿತ್ರಕ್ಕಾಗಿ ಬೇರೆ ನಟರ ಫ್ಯಾನ್ಸ್ ಕೂಡ ಒಂದಾಗಿದ್ದಾರೆ. ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ.
'ಕ್ರಾಂತಿ' ಸಿನಿಮಾ ಬುಕ್ಕಿಂಗ್ ಜೋರಾಗಿದೆ. ಅಭಿಮಾನಿಗಳು ಫಸ್ಟ್ ಡೇ ಟಿಕೆಟ್ಸ್ಗಾಗಿ ಮುಗಿಬಿದ್ದಿದ್ದಾರೆ. 'ಕ್ರಾಂತಿ' ಸಿನಿಮಾಗೆ ಬಾಲಿವುಡ್ನ 'ಪಠಾಣ್' ಸಿನಿಮಾ ಭಾರೀ ಪೈಪೋಟಿ ಕೊಡಲಿದೆ. ಕರ್ನಾಟಕ ಬಾಕ್ಸಾಫೀಸ್ನಲ್ಲಿ ಈ ವಾರ ಎರಡೂ ಸಿನಿಮಾಗಳ ಮಧ್ಯೆ ಭಾರೀ ಫೈಟ್ ಏರ್ಪಡಲಿದೆ. ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ನಲ್ಲಿ ತೊಡಗಿದ್ದವರು ಈಗ 'ಕ್ರಾಂತಿ' ಚಿತ್ರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಕನ್ನಡ ಸಿನಿಮಾ ಗೆಲ್ಲಬೇಕು ಎನ್ನುತ್ತಿದ್ದಾರೆ. 'ಕ್ರಾಂತಿ' ಶತ ದಿನೋತ್ಸವ ಆಚರಿಸಲಿ ಎಂದು ಹಾರೈಸುತ್ತಿದ್ದಾರೆ.
ಕೆಲ ಕಾರಣಗಳಿಂದ ನಟ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಭಾರೀ ಫ್ಯಾನ್ಸ್ ವಾರ್ ನಡೀತಿತ್ತು. ಹೊಸಪೇಟೆ ಘಟನೆ ನಂತರ ಅದು ಮತ್ತೊಂದು ಹಂತಕ್ಕೆ ಹೋಗಿತ್ತು. 'ಕ್ರಾಂತಿ' ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಪೋಸ್ಟ್ ಮಾಡುವ ಹಂತಕ್ಕೂ ಹೋಗಿತ್ತು.

ದ್ವೇಷ ಮರೆತು ಒಂದಾದ ಫ್ಯಾನ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಚಿತ್ರಕ್ಕೆ ಅಪ್ಪು ಫ್ಯಾನ್ಸ್ ಕೂಡ ಬೆಂಬಲ ಸೂಚಿಸಿದ್ದಾರೆ. ಯಾವುದೋ ಬೇಸರದಿಂದ ಇಷ್ಟು ದಿನ ಟ್ರೋಲ್ ಮಾಡುತ್ತಿದ್ದೆವು. ಆದರೆ ಸಿನಿಮಾ ಬರ್ತಿದೆ. ಕನ್ನಡ ಸಿನಿಮಾ. ಅದಕ್ಕೆ ಒಳ್ಳೆದಾಗಲಿ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಇನ್ನು ಕೂಡ ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ. ಗೋಕಾಕ್ನಲ್ಲಿ ಕೆಲ ಅಪ್ಪು ಫ್ಯಾನ್ಸ್ 'ಕ್ರಾಂತಿ' ಚಿತ್ರಕ್ಕೆ ಶುಭ ಹಾರೈಸಿ ಬ್ಯಾನರ್ಗಳನ್ನು ಕಟ್ಟಿದ್ದಾರೆ.

ಟಿಕೆಟ್ ಬುಕ್ ಮಾಡಿದ ಕಿಚ್ಚನ ಫ್ಯಾನ್ಸ್
ಒಂದ್ಕಾಲದಲ್ಲಿ ಕುಚಿಕು ದೋಸ್ತ್ಗಳಾಗಿದ್ದ ಕಿಚ್ಚ ಸುದೀಪ್ ಹಾಗೂ ದಾಸ ದರ್ಶನ್ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದು ಗೊತ್ತೇಯಿದೆ. ಆ ನಂತರ ಇಬ್ಬರು ಅಂತರ ಕಾಯ್ದುಕೊಂಡೇ ಇದ್ದಾರೆ. ಆದರೆ ಸುದೀಪ್ ಆಗೊಮ್ಮೆ ಈಗೊಮ್ಮೆ ದರ್ಶನ್ ಬಗ್ಗೆ ಟ್ವೀಟ್ ಮಾಡಿದ್ದರು. ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಪತ್ರ ಬರೆದಿದ್ದರು. ದರ್ಶನ್ಗೆ ಬೆಂಬಲಕ್ಕೆ ನಿಂತಿದ್ದರು. ಸುದೀಪ್ ಬೆಂಬಲಕ್ಕೆ ದರ್ಶನ್ ಕೂಡ ಧನ್ಯವಾದ ತಿಳಿಸಿದ್ದರು. ಇದನ್ನು ನೋಡಿ ನಟ ಜಗ್ಗೇಶ್ ಕೂಡ ಇಬ್ಬರು ಬಹಳ ಬೇಗ ಒಂದಾಗಿ ಎಂದಿದ್ದರು. ಇದೇ ಟ್ವೀಟ್ ಬಗ್ಗೆ ಪ್ರಸ್ತಾಪಿಸಿರುವ ಸುದೀಪ್ ಅಭಿಮಾನಿಯೊಬ್ಬರು, ಅದೊಂದು ಟ್ವೀಟ್ ಕಾರಣಕ್ಕೆ ನಾನು 'ಕ್ರಾಂತಿ' ನೋಡಲು ಟಿಕೆಟ್ ಬುಕ್ ಮಾಡಿದ್ದೀನಿ ಎಂದಿದ್ದಾರೆ.

ಯಶ್ ಫ್ಯಾನ್ಸ್ ಬೆಂಬಲ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಡುವೆ ಆತ್ಮೀಯ ಒಡನಾಟ ಇದೆ. ಇಬ್ಬರು ಜೋಡೆತ್ತುಗಳು ಎಂದೇ ಗುರ್ತಿಸಿಕೊಂಡಿದ್ದಾರೆ. ಮೊದಲೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಯಶ್ ಫ್ಯಾನ್ಸ್ ಮಧ್ಯೆ ಭಾರೀ ವಾರ್ ನಡೀತಿತ್ತು. ಒಬ್ಬರನ್ನು ಕಂಡರೆ ಒಬ್ಬರು ಉರಿದು ಬೀಳುತ್ತಿದ್ದರು. ಆದರೆ ಇತ್ತೀಚೆಗೆ ಅದು ಕಮ್ಮಿ ಆಗಿದೆ. 'ಕ್ರಾಂತಿ' ಸಿನಿಮಾ ವಿಚಾರದಲ್ಲಿ ಯಶ್ ಫ್ಯಾನ್ಸ್ ಸೈಲೆಂಟ್ ಆಗಿದ್ದಾರೆ. ಯಾವುದೇ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿಲ್ಲ.

ಗುರುವಾರ ಥಿಯೇಟರ್ಗಳಲ್ಲಿ 'ಕ್ರಾಂತಿ'
ಗಣರಾಜ್ಯೋತ್ಸವದ ದಿನ ಬಹಳ ಅದ್ಧೂರಿಯಾಗಿ 'ಕ್ರಾಂತಿ' ಸಿನಿಮಾ ಬಿಡುಗಡೆ ಆಗುತ್ತಿದೆ. 2 ದಿನಗಳಿಂದ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿ ನಡೀತಿದೆ. ಮೊದಲ ದಿನ ಹಲವು ಶೋಗಳು ಸೋಲ್ಡೌಟ್ ಆಗೋಗಿದೆ. ಅಡ್ವಾನ್ಸ್ ಬುಕ್ಕಿಂಗ್ನಿಂದಲೇ ಸಿನಿಮಾ ಅಂದಾಜು 2 ಕೋಟಿ ಕಲೆಕ್ಷನ್ ಮಾಡಿರುವ ಲೆಕ್ಕಾಚಾರ ನಡೀತಿದೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಹಳ ದಿನಗಳಿಂದ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದರಿಂದ 'ಕ್ರಾಂತಿ' ಸಿನಿಮಾ ನೋಡಲು ಕನ್ನಡ ಸಿನಿರಸಿಕರು ಮುಗಿಬೀಳುವ ಸಾಧ್ಯತೆಯಿದೆ.


Click it and Unblock the Notifications











