ಕುಲುಮನಾಲಿಯಲ್ಲಿ ಅಪ್ಪು : ಉಪ್ಪಿ ಹಾಡಿಗೆ ದನಿಯಾದ ಪುನೀತ್
ಅಪ್ಪು ಕುಲು ಮನಾಲಿಯಲ್ಲಿದ್ದಾನೆ. ಗೆಳತಿಯಾಂದಿಗೆ ಡ್ಯುಯೆಟ್ ಹಾಡುತ್ತಿದ್ದಾನೆ! ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಪ್ರವೇಶ ಪಡೆಯುತ್ತಿರುವ ಪುನೀತ್ ರಾಜ್ಕುಮಾರ್ ಪಾಲಿಗೆ ಅಪ್ಪು ಮಹತ್ವಾಕಾಂಕ್ಷೆಯ ಹಾಗೂ ಅಗ್ನಿ ಪರೀಕ್ಷೆಯ ಚಿತ್ರ. ಅಪ್ಪು ಬಗೆಗೆ ಪುನೀತ್ ಅಪಾರ ಭರವಸೆ ಹೊಂದಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್ ಕೂಡ ಅಪ್ಪು ಪುನೀತ್ಗೆ ಬ್ರೇಕ್ ನೀಡುತ್ತದೆಂದು ನಂಬಿದ್ದಾರೆ.
ಅಪ್ಪುಗಾಗಿ ರಿಯಲ್ಸ್ಟಾರ್ ಉಪೇಂದ್ರ ಅವರು ಹಾಡು ಬರೆದಿರುವುದು ವಿಶೇಷ. ನಾಗರಹಾವು, ಸೂಪರ್ಸ್ಟಾರ್, ಹಾಲಿವುಡ್ ಚಿತ್ರಗಳಲ್ಲಿ ಮುಳುಗಿಹೋಗಿದ್ದರೂ ಅಪ್ಪುಗೆ ಹಾಡು ಬರೆಯಲು ಉಪೇಂದ್ರ ಬಿಡುವು ಮಾಡಿಕೊಂಡಿದ್ದು ವಿಶೇಷದಲ್ಲಿನ ವಿಶೇಷ.
ತಾಲಿಬಾನ್ ಅಲ್ಲಾ ಅಲ್ಲಾ ಬಿನ್ ಲಾಡೆನ್ ಅಲ್ವೇ ಅಲ್ಲಾ
ಅವ್ನ್ ಹೊಡ್ದಿದ್ ಬಿಲ್ಡಿಂಗ್ಸ್ಗೇ
ನಾನ್ ಹೊಡ್ದಿದ್ ಹೃದಯಕ್ಕೆ
ಮಿಸ್ ಅಂಡರ್ಸ್ಟ್ಯಾಂಡ್ ಬೇಡ
- ಎಂದು ಉಪೇಂದ್ರ ಅವರು ಬರೆದ ಗೀತೆಯನ್ನು ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಪುನೀತ್ ರಾಜ್ಕುಮಾರ್ ಕಂಠ ನೀಡಿದ್ದಾರೆ. ಪ್ರಸ್ತುತ ಕುಲು ಮನಾಲಿಗೆ ತೆರಳಿರುವ ಅಪ್ಪು ತಂಡ, ಅಲ್ಲಿ ಎರಡು ಡ್ಯುಯೆಟ್ ಗೀತೆಗಳ ಚಿತ್ರೀಕರಣ ನಡೆಯುತ್ತಿದೆ. ಫೆಬ್ರವರಿ ಕೊನೆಯವರೆಗೂ ಚಿತ್ರೀಕರಣ ಮುಂದುವರೆಯುವುದು ಎಂದು ಅಪ್ಪು ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ತಿಳಿಸಿದ್ದಾರೆ.
ಅಪ್ಪು ತಾರಾಗಣದಲ್ಲಿ ಪುನೀತ್ ಜೊತೆಗೆ ರಕ್ಷಿತ, ಶ್ರೀನಿವಾಸಮೂರ್ತಿ, ಅವಿನಾಶ್, ಅಶೋಕ್, ಸುಮಿತ್ರ, ಕೀರ್ತಿ, ಸತ್ಯಜಿತ್, ಹೊನ್ನವಳ್ಳಿ ಕೃಷ್ಣ ಮುಂತಾದವರು ನಟಿಸುತ್ತಿದ್ದಾರೆ.


Click it and Unblock the Notifications