ಮೃಗಾಲಯದ ನೆರವಿಗೆ ನಿಂತ ದರ್ಶನ್ಗೆ ಧನ್ಯವಾದ ತಿಳಿಸಿದ ಅರವಿಂದ್ ಲಿಂಬಾವಳಿ
ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮೃಗಾಲಯಗಳ ರಕ್ಷಣೆಗೆ ನಿಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಧನ್ಯವಾದ ತಿಳಿಸಿದ್ದಾರೆ. ಸಂಕಷ್ಟದಲ್ಲಿರುವ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಕರೆ ಕೊಟ್ಟಿದ್ದರು. ದರ್ಶನ್ ಮನವಿಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಅನೇಕರು ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ.
ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಹೊಂದಿರುವ ದರ್ಶನ್ ಮೃಗಾಲಯದ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ದರ್ಶನ್ ಮಾನವೀಯ ಕೆಲಸಕ್ಕೆ ಅರವಿಂದ್ ಲಿಂಬಾವಳಿ ವಿಡಿಯೋ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. 'ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ಅವರು ರಾಜ್ಯದ ಮೃಗಾಲಯಗಳ ಪ್ರಾಣಿಗಳನ್ನು ದತ್ತು ಪಡೆಯಲು ಮತ್ತು ದೇಣಿಗೆ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಾಣಿಗಳ ಹಿತಕ್ಕಾಗಿ ಶ್ರಮಿಸುತ್ತಿರುವ ಶ್ರೀ ದರ್ಶನ್ ತೂಗದೀಪ್ ಅವರಿಗೆ ಹಾಗೂ ಪ್ರಾಣಿಗಳನ್ನು ದತ್ತು ಪಡೆಯುತ್ತಿರುವ ಹಾಗೂ ದೇಣಿಗೆ ಮೂಲಕ ಸಹಕಾರ ನೀಡುತ್ತಿರುವ ಎಲ್ಲಾ ಪ್ರಾಣಿ ಪ್ರಿಯರಿಗೂ ಹೃತ್ಪೂರ್ವಕ ಧನ್ಯವಾದಗಳು' ಎಂದಿದ್ದಾರೆ.

ದರ್ಶನ್ ಕರೆಗೆ ಬೆಂಬಲ ನೀಡಿ ಸಹಕರಿಸಿದ್ದಕ್ಕೆ ಇದುವರೆಗೂ 40 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಹೇಳಿದ್ದಾರೆ. ಕೊರೊನಾ ಹಾವಳಿಯ ಈ ಸಮಯದಲ್ಲಿ ಸರ್ಕಾರ ಮನುಷ್ಯರ ರಕ್ಷಣೆ ಮಾಡುತ್ತಿದೆ, ದರ್ಶನ್ ಪ್ರಾಣಿಗಳ ರಕ್ಷಣೆಗೆ ನಿಂತಿದ್ದಾರೆ. ಇನ್ನು ಸಹಾಯದ ಅವಶ್ಯಕತೆ ಇದ್ದು, ಮೃಗಾಲಯಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
Recommended Video
ರಾಜ್ಯದಲ್ಲಿ 9 ಮೃಗಾಲಯಗಳಿವೆ. ಲಾಕ್ಡೌನ್ ಕಾರಣ ಮೃಗಾಲಯಗಳಿಗೆ ಪ್ರವಾಸಿಗರು ಬರುತ್ತಿಲ್ಲ. ಹಾಗಾಗಿ ಪ್ರಾಣಿಗಳ ಆರೈಕೆ, ಮೃಗಾಲಯ ಸಿಬ್ಬಂದಿ ಸಂಬಳ, ಮೃಗಾಲಯ ನಿರ್ವಹಣೆ ಕಷ್ಟವಾಗುತ್ತಿದೆ. ಇಂಥಹಾ ಸಮಯದಲ್ಲಿ ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡರೆ ಪ್ರಾಣಿ-ಪಕ್ಷಿಗಳ ಆರೈಕೆ ಮಾಡಿದಂತಾಗುತ್ತದೆ, ಮೃಗಾಲಯ ಸಿಬ್ಬಂದಿಗೂ ಸಹಾಯವಾಗುತ್ತದೆ ಎಂದು ದರ್ಶನ್ ವಿಡಿಯೋ ಮೂಲಕ ಮನವಿ ಮಾಡಿದ್ದರು. ದರ್ಶನ್ ಕರೆಗೆ ಭಾರಿ ಜನಸ್ಪಂದನೆ ವ್ಯಕ್ತವಾಗಿದೆ.


Click it and Unblock the Notifications











