25 ವರ್ಷದ ನಂತರ ಕನ್ನಡಕ್ಕೆ ಬಂದ 'ಒಂದು ಮುತ್ತಿನ ಕಥೆ' ನಟಿ ಅರ್ಚನಾ
90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ತೆರೆಯಿಂದ ಮರೆಯಾಗಿದ್ದ ನಟಿ ಅರ್ಚನಾ ಮತ್ತೆ ಸ್ಯಾಂಡಲ್ವುಡ್ಗೆ ಮತ್ತೊಮ್ಮೆ ಬಲಗಾಲಿಟ್ಟು ಬರ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸುಮಾರು 25 ವರ್ಷಗಳ ಹಿಂದೆ ಕೊನೆಯದಾಗಿ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕಾಗಿ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ ಹಾಗೂ ಹಿಂದಿಯಲ್ಲೂ ನಟಿಸಿ ಯಶಸ್ಸು ಕಂಡಿದ್ದ ಕೃಷ್ಣ ಸುಂದರಿ ಅರ್ಚನಾ ಈಗ ರಿಷಬ್ ಶೆಟ್ಟಿಯ ಹೊಸ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಲಿರುವ 'ಕಾಂತಾರ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅರ್ಚನಾ ಅಭಿನಯಿಸುತ್ತಿದ್ದಾರೆ. ಯಾವ ಪಾತ್ರ, ಯಾವಾಗ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ. ಮುಂದೆ ಓದಿ...

ಒಂದು ಮುತ್ತಿನ ಕಥೆ ಚಿತ್ರದಲ್ಲಿ ನಟನೆ
1984ರಲ್ಲಿ ಬಿಡುಗಡೆಯಾದ 'ಪ್ರೇಮಿಗಳ ಸವಾಲ್' ಅರ್ಚನಾ ನಟಿಸಿದ ಮೊದಲ ಕನ್ನಡ ಸಿನಿಮಾ. 1986ರಲ್ಲಿ 'ಬೆಳ್ಳಿನಾಗ', 1986ರಲ್ಲಿ 'ಗುರಿ', 1987ರಲ್ಲಿ 'ಒಂದು ಮುತ್ತಿನ ಕಥೆ' ಹಾಗೂ 1996ರಲ್ಲಿ 'ಹುಲಿಯಾ' ಚಿತ್ರಗಳಲ್ಲಿ ಅರ್ಚನಾ ಅಭಿನಯಿಸಿದ್ದಾರೆ. ಹುಲಿಯಾ ಬಳಿಕ ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ.

ಎರಡು ರಾಷ್ಟ್ರ ಪ್ರಶಸ್ತಿ ಪಡೆದ ನಟಿ
1980ರಲ್ಲಿ 'ತಾಯಿ ಪೊಂಗಲ್' ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಅರ್ಚನಾ, ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 1987ರಲ್ಲಿ ತೆರೆಕಂಡ ತಮಿಳಿನ 'ವೀಡು' ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 1988ರಲ್ಲಿ ತೆಲುಗಿನ 'ದಾಸಿ' ಚಿತ್ರದ ನಟನೆಗಾಗಿ ಎರಡನೇ ಬಾರಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು.

ಆಗಸ್ಟ್ 27 ರಿಂದ ಚಿತ್ರೀಕರಣ
ಆಗಸ್ಟ್ 6 ರಂದು 'ಕಾಂತಾರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಸಿನಿಮಾ ಹೆಸರು ಹಾಗೂ ಪೋಸ್ಟರ್ ಅಂದೇ ರಿಲೀಸ್ ಆಗಿತ್ತು. ಕಾಂತಾರ ಅಂದ್ರೆ ಅರಣ್ಯ ಎಂದರ್ಥ. ಕುತೂಹಲಕಾರಿ ಕಥೆಯಲ್ಲಿ ಹೋರಾಟ ಕಿಚ್ಚಿನ ಅಂಶಗಳು ಇರಲಿದೆ ಎಂದು ಸುಳಿವು ಸಿಕ್ಕಿದೆ. ಆಗಸ್ಟ್ 27 ರಂದು ಚಿತ್ರದ ಮುಹೂರ್ತ ಮತ್ತು ಅಂದಿನಿಂದಲೇ ಚಿತ್ರೀಕರಣವೂ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ಕುಂದಾಪುರ ಸುತ್ತಮುತ್ತಾ ಚಿತ್ರೀಕರಣ ನಡೆಯಲಿದೆ.

ತಮ್ಮದೇ ನಿರ್ದೇಶನದಲ್ಲಿ ಮೊದಲ ಸಲ ನಟನೆ
ರಿಕ್ಕಿ, ಕಿರಿಕ್ ಪಾರ್ಟಿ, ಸ.ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾಗಳನ್ನು ನಿರ್ದೇಶಿಸಿರುವ ರಿಷಬ್ ಶೆಟ್ಟಿ, ಮೊದಲ ಸಲ ತಮ್ಮದೇ ನಿದೇಶನದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಕಾಂತಾರ ಚಿತ್ರದಲ್ಲಿ ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಇನ್ನುಳಿದಂತೆ ಪಾತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಬೆಲ್ ಬಾಟಮ್ 2
ಲಾಕ್ಡೌನ್ ವೇಳೆ ಚಿತ್ರೀಕರಣ ಮಾಡಿದ 'ಹೀರೋ' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದರು. ಈ ಚಿತ್ರಕ್ಕೆ ಇವರೇ ನಿರ್ಮಾಪಕರು ಆಗಿದ್ದರು. ಭರತ್ ರಾಜ್ ನಿರ್ದೇಶಿಸಿದ್ದ ಹೀರೋ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ಗಾನವಿ ಲಕ್ಷ್ಮಿ ನಟಿಸಿದ್ದರು. ಹರಿಕಥೆ ಅಲ್ಲ ಗಿರಿ ಕಥೆ, ಗರುಡ ಗಮನ ವೃಷಭ ವಾಹನ, ಬೆಲ್ ಬಾಟಮ್ 2, ಮಹನೀಯರೇ ಮಹಿಳೆಯರೇ ಅಂತಹ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











