ರಾಜಧಾನಿಯಲ್ಲಿ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ '45' ಸಿನಿಮಾದ ಅದ್ದೂರಿ ಶೂಟಿಂಗ್
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸದ್ಯ ನಿರ್ದೇಶಕನ ಕ್ಯಾಪ್ ತೊಡಲು ಹೊರಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರನ್ನು ಒಂದೆಡೆ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಮೊದಲ ಬಾರಿ ಇಂತಹ ಸಾಹಸಕ್ಕೆ ಅರ್ಜುನ್ ಜನ್ಯ ಕೈ ಹಾಕಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ ಮಲ್ಟಿಸ್ಟಾರರ್ ಸಿನಿಮಾಕ್ಕೆ '45' ಎಂದು ಹೆಸರು ಇಡಲಾಗಿದೆ. ಸಿನಿಮಾಕ್ಕೆ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಉಮಾ ರಮೇಶ್ ರೆಡ್ಡಿ ಬಂಡವಾಳ ಹಾಕುತ್ತಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ '45' ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಸಾಗಿದೆ.

ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಬಳಿ ಶೂಟಿಂಗ್
'45' ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಇತ್ತೀಚಿಗೆ ಬನ್ನೇರುಘಟ್ಟದ ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಬಳಿ ಚಿತ್ರದ ಅದ್ದೂರಿ ಸನ್ನಿವೇಶವೊಂದರ ಚಿತ್ರೀಕರಣ ನಡೆದಿದೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಮೋಕೋಬೋಲ್ಟ್, ರೋಪ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ದುಬಾರಿ ಸಲಕರಣೆಗಳ ಬಳಸಿ ಈ ದೃಶ್ಯವನ್ನು ಚಿತ್ರಿಸಲಾಗಿದೆ.
ಒಂದು ಸನ್ನಿವೇಶಕ್ಕಾಗಿ 418 ಕ್ಕೂ ಹೆಚ್ಚು ಕಲರ್ ಬಾಂಬ್ಗಳನ್ನು ಬಳಸಿರುವುದು ಕನ್ನಡದಲ್ಲಿ ಇದೇ ಮೊದಲು ಎನ್ನಲಾಗಿದೆ. ಈ ಅದ್ದೂರಿ ಸನ್ನಿವೇಶಕ್ಕೆ ಭಾರತ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರು ಕೊರಿಯೋಗ್ರಫಿ ಮಾಡಿರುವುದು ವಿಶೇಷ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಅದ್ದೂರಿ ಸನ್ನಿವೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
'ಗಾಳಿಪಟ 2' ಸೇರಿದಂತೆ ಅನೇಕ ಅದ್ದೂರಿ ಹಾಗೂ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಸೂರಜ್ ಪ್ರೊಡಕ್ಷನ್ಸ್ ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ '45' ಸಿನಿಮಾ ಮೂಡಿಬರುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸಂಗೀತ ನೀಡುವ ಮೂಲಕ ಜನರ ಮನ ಗೆದ್ದಿರುವ ಅರ್ಜುನ್ ಜನ್ಯ ಅವರು ನಿರ್ದೇಶಕನಾಗಿಯೂ ತಮ್ಮ ಅದೃಷ್ಟ ಪರಿಕ್ಷೆಗೆ ಇಳಿದಿದ್ದಾರೆ.

ಮೊದಲ ಬಾರಿಗೆ ನಟ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡುವುದು ಸಿನಿರಸಿಕರಿಗಂತೂ ಹಬ್ಬವೇ ಸರಿ. '45' ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿರುವ ಕೌಸ್ತುಭ ಮಣಿ ಸೆಲೆಕ್ಟ್ ಆಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಇಂಚರಾ ಪಾತ್ರದಲ್ಲಿ ಸಕತ್ ಖ್ಯಾತಿ ಗಳಿಸಿದ್ದರು. ಇದಾದ ನಂತರ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಗೌರಿ ಶಂಕರ' ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜೊತೆಗೆ ಕೌಸ್ತುಭ ಮಣಿ ತೆಲುಗು ಸೀರಿಯಲ್ಗಳಲ್ಲಿ ನಟಿಸಿಸಿದ್ದಾರೆ. ಕೌಸ್ತುಭ ಮಣಿ, 'ರಾಮಾಚಾರಿ 2.0' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗ ಇಂತಹ ಮಲ್ಟಿ ಸ್ಟಾರರ್ ಸಿನಿಮಾಕ್ಕೆ ಆಯ್ಕೆಯಾಗಿದ್ದಾರೆ.
'45' ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಾಣಲಿದೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ಮೊದಲ ಸಿನಿಮಾದ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ.


Click it and Unblock the Notifications











