ಹತ್ಯಾಕಾಂಡದ ಮುನ್ಸೂಚನೆ ; ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಅರ್ಜುನ್ ಸರ್ಜಾ ಪ್ರತಿಕ್ರಿಯೆ
ದೇಶದಲ್ಲಿ ಇಂದು ಹತ್ತು ಹಲವು ಸಮಸ್ಯೆಗಳಿವೆ. ಆ ಪೈಕಿ ''ಬೀದಿ ನಾಯಿ'' ಸಮಸ್ಯೆ ಕೂಡ ಒಂದು. ಯಾಕೆಂದರೆ ಚಿಣ್ಣರು.. ಪೋರರು.. ದೊಡ್ಡವರು..ಹಿರಿಯರು.. ಯಾರನ್ನೂ ನೋಡದೇ ಬೀದಿಯಲ್ಲಿ ನಾಯಿಗಳು ಮೈಮೇಲೆ ಎಗರುತ್ತಿವೆ. ದಿನದಿಂದ ದಿನಕ್ಕೆ ನಾಯಿ ಕಚ್ಚಿದ ಪ್ರಕರಣ ಹೆಚ್ಚಾಗುತ್ತಿವೆ. ಈ ಹಿನ್ನೆಲೆ.. ಇತ್ತೀಚೆಗೆ ದೆಹಲಿ - ಎನ್ಸಿಆರ್ನಾದ್ಯಂತ ಬೀದಿ ನಾಯಿಗಳನ್ನು ಆಶ್ರಯ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ(ಆಗಸ್ಟ್ 11) ಆದೇಶ ನೀಡಿದೆ.
ಆದರೆ, ಸುಪ್ರೀಂ ಕೋರ್ಟ್ನ ಈ ಆದೇಶಕ್ಕೆ ಹಲವಾರು ಪ್ರಾಣಿ ಪ್ರಿಯರು ಅಪಸ್ವರ ತೆಗೆದಿದ್ದಾರೆ. ಸ್ಯಾಂಡಲ್ವುಡ್, ಬಾಲಿವುಡ್ ಸೇರಿ ಬೇರೆ ಬೇರೆ ಭಾಷೆಯ ಎಲ್ಲಾ ತಾರೆಯರು ಸುಪ್ರೀಂ ಕೋರ್ಟ್ನ ಈ ತೀರ್ಪಿನ ಹಿನ್ನೆಲೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಬೀದಿ ನಾಯಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.

ಕನ್ನಡದಲ್ಲಿ ಕೂಡ ಸುದೀಪ್ ಸೇರಿ ಹಲವಾರು ಜನ ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ್ದಾರೆ. ಇದೀಗ ಇದೇ ವಿಚಾರಕ್ಕೆ ಅರ್ಜುನ್ ಸರ್ಜಾ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ.ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಅರ್ಜುನ್ ಸರ್ಜಾ ನಾವು ರೋಗಿಗಳನ್ನು ಎಚ್ಚರಿಕೆಯಿಂದ ಉಪಚರಿಸುವ ಬದಲು ಸುಟ್ಟರೆ, ಮಾನವ ಕುಲ ಅಸ್ತಿತ್ವದಲ್ಲಿರುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.ಒಬ್ಬ ಅಪರಾಧ ಮಾಡಿದರೆ, ನಾವು ಸಂಪೂರ್ಣ ಮಾನವಕುಲವನ್ನೇ ದಂಡಿಸುತ್ತೇವೆಯೇ? ಎಂದು ಕೇಳಿದ್ದಾರೆ.
ಮುಂದುವರೆದು, ಇಲ್ಲ ನಾವು ನ್ಯಾಯವನ್ನು ಹುಡುಕುತ್ತೇವೆ, ವಿನಾಶವನ್ನಲ್ಲ. ಹಾಗಾದರೆ, ನಾವೇಕೆ ಮೂಕ ಜೀವಿಗಳನ್ನು ಕೆಲವರ ಕೃತ್ಯಗಳಿಂದ ಜಡ್ಜ್ ಮಾಡುತ್ತಿದ್ದೇವೆ? ಎಂದು ಕೂಡ ಅರ್ಜುನ್ ಸರ್ಜಾ ಪ್ರಶ್ನೆಯನ್ನು ಕೇಳಿದ್ದಾರೆ.
ಒಂದೇ ಒಂದು ಗಾಯದಿಂದ ಇಡೀ ಇಂದು ಪ್ರಾಣಿ ಕುಲವನ್ನೇ ತಕ್ಕಡಿಗೆ ಹಾಕಿ ತೂಗಬೇಡಿ, ತೀರ್ಪು ನೀಡಬೇಡಿ, ಎಂದಿರುವ ಅರ್ಜುನ್ ಸರ್ಜಾ, ಶತಮಾನಗಳಿಂದ ನಾಯಿಗಳು ನಮ್ಮೊಂದಿಗಿವೆ ಎಂದು ಹೇಳಿದ್ದಾರೆ. ಅವು ಬೇಡದ ಜೀವಗಳಲ್ಲ ನಮ್ಮ ಬೀದಿಗಳಿಗೂ, ಮನೆಗಳಿಗೂ ನಂಟು ಹೊಂದಿದ ಪ್ರಾಣಿಗಳು ಎಂದು ಕೂಡ ಹೇಳಿದ್ದಾರೆ.
ನಾಯಿ ಅಂದರೆ ಕೇವಲ ಕಾವಲುಗಾರನಲ್ಲ, ಅವು ಆಪ್ತರು ಎಂದು ಹೇಳಿರುವ ಅರ್ಜುನ್ ಸರ್ಜಾ ಅವು ಅಂಧರಿಗೆ ಕಣ್ಣುಗಳು ಎಂದು ಹೇಳಿದ್ದಾರೆ. ಅವು ತಮ್ಮ ಪ್ರಾಣವನ್ನೇ ಬಲಿ ಕೊಡುತ್ತವೆ ಎಂದು ಹೇಳಿದ್ದಾರೆ. ಕೇವಲ ಮನೆಗಷ್ಟೇ ಅಲ್ಲ.. ರಾಷ್ಟ್ರಕ್ಕೂ..ಕೂಡ ಬಲಿದಾನವನ್ನು ನೀಡುತ್ತವೆ, ಅವೆಲ್ಲಾ ಪೊಲೀಸರ ಗೆಳೆಯರು, ಬಾಂಬ್ ಪತ್ತೆ ದಳದ ಸಹಚರರು ಎಂದು ಹೇಳಿದ್ದಾರೆ.

ನಾಯಿಗಳು ಅಂದರೆ ಅಪರಿಮಿತ ಸಂತೋಷ, ದೇವರಿಂದ ಕಳುಹಿಸಲಾದ ದಿವ್ಯದೂತರು ಎಂದಿರುವ ಅರ್ಜುನ್ ಸರ್ಜಾ, ಬೀದಿ ನಾಯಿಗಳ ವಿಚಾರದಲ್ಲಿ ಪ್ರಸ್ತುತ ಚರ್ಚೆಯಾಗುತ್ತಿರುವ ವಿಚಾರ ನ್ಯಾಯವಲ್ಲ ಇದೊಂದು ಹತ್ಯಾಕಾಂಡದ ಮುನ್ಸೂಚನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳು ಕೂಡ ಕಷ್ಟ ಅನುಭವಿಸುತ್ತವೆ ಎಂದು ಹೇಳಿರುವ ಅರ್ಜುನ್ ಸರ್ಜಾ, ರೇಬೀಸ್ನಿಂದ ರಕ್ತಸ್ರಾವಗೊಳ್ಳುತ್ತವೆ.. ಕಲ್ಲುಗಳಿಂದ ಹೊಡೆತ ತಿನ್ನುತ್ತವೆ.. ವೇಗದ ವಾಹನಗಳ ಚಕ್ರಕ್ಕೂ ಸಿಲುಕಿ ನಲುಗುತ್ತವೆ..ಆದರೆ ಸಮಸ್ಯೆ ಬಂದಾಗ, ಅವುಗಳ ನಾಶವೊಂದೇ ಪರಿಹಾರವಲ್ಲ ಎಂದು ಹೇಳಿದ್ದಾರೆ. ಸಾಮೂಹಿಕ ಲಸಿಕೆ, ನಿಷ್ಕ್ರಿಯೀಕರಣ, ಚೂರು ಕರುಣೆ, ಸಮುದಾಯದ ನಿರಂತರ ಕಾಳಜಿ ಮತ್ತು ದತ್ತು ಪ್ರಕ್ರಿಯೆ ಇದೆಲ್ಲದಕ್ಕೂ ಪರಿಹಾರ ಎಂದು ಕೂಡ ಹೇಳಿದ್ದಾರೆ ಅರ್ಜುನ್ ಸರ್ಜಾ.
ನಾವು ಸಹ ಜೀವನ ಆಯ್ಕೆ ಮಾಡೋಣ. ಪ್ರಾಣಿಗಳನ್ನು ಭೂಮಿಯ ಸಹಪೌರರಂತೆ ಕಾಣೋಣ ಎಂದು ಕೂಡ ಮನವಿಯನ್ನು ಮಾಡಿರುವ ಅರ್ಜುನ್ ಸರ್ಜಾ, ಅವು ಸಹ ಕಾಳಜಿ, ರಕ್ಷಣೆಗೆ ಅರ್ಹ ಎನಿಸಿಕೊಂಡಿವೆ. ಸುಪ್ರೀಂ ಕೋರ್ಟ್ ಬಳಿ ನಾನು ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ತೀರ್ಪನ್ನು ಬದಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕರುಣೆ ಕಾನೂನಿಗೆ ಮಾರ್ಗದರ್ಶಿಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











