"ಯಾವುದೇ ಹಣ ನಮಗೆ ಬೇಡ", ಅರಣ್ಯ ಇಲಾಖೆ ಆರೋಪಕ್ಕೆ ದರ್ಶನ್ ಆಪ್ತ ತಿರುಗೇಟು
ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಮಾಧಿ ವಿಚಾರ ಹೊಸ ಚರ್ಚೆ ಹುಟ್ಟು ಹಾಕಿದೆ. ಅಂತ್ಯಕ್ರಿಯೆ ಬಳಿಕ ಅರಣ್ಯ ಇಲಾಖೆ ಅರ್ಜುನ ಸಮಾಧಿ ವಿಚಾರವನ್ನು ಮರೆತೇಬಿಟ್ಟಿದೆ ಎನ್ನುವ ವಾದ ಶುರುವಾಗಿತ್ತು. ಇತ್ತೀಚೆಗೆ ನಟ ದರ್ಶನ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದರು. ಸಂಬಂಧಪಟ್ಟವರು ಗಮನ ಹರಿಸುವಂತೆ ಕೇಳಿದ್ದರು.
ಮಳೆಗಾಲದ ಸಮಯದಲ್ಲಿ ಅರ್ಜುನನ್ನು ಮುಚ್ಚಿದ್ದ ಮಣ್ಣು ಕೊಚ್ಚಿ ಹೋಗುತ್ತಿತ್ತು. ಯಾರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ದರ್ಶನ್ ಪೋಸ್ಟ್ ನೋಡಿ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದರು. ಅಭಿಮಾನಿಗಳು ಬಾಸ್ ನೀವೇ ಏನಾದರೂ ಮಾಡಿ ನಾನು ಜೊತೆಗಿದ್ದೇವೆ ಎಂದಿದ್ದರು. ಅದರಂತೆ ಸ್ಲ್ಯಾಬ್ ಕಲ್ಲುಗಳನ್ನು ಬಳಸಿ ಸಮಾಧಿ ಸುತ್ತಾ ರಕ್ಷಣಾ ಗೋಡೆ ಕಟ್ಟಲು ದರ್ಶನ್ ಅಭಿಮಾನಿಗಳು ಮುಂದಾಗಿದ್ದರು.

ನಟ ದರ್ಶನ್ 30 ಸಾವಿರ ವ್ಯಯಿಸಿ ಸ್ಲ್ಯಾಬ್ ಕಲ್ಲುಗಳನ್ನು ಕೊಡಿಸಿದ್ದರು. ಅಭಿಮಾನಿಗಳು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್ಡಿಸಿ ನಡುತೋಪಿನ ಪ್ರದೇಶದಲ್ಲಿ ಸ್ಲ್ಯಾಬ್ ಕಲ್ಲುಗಳನ್ನು ಬಳಸಿ ಅರ್ಜುನ ಸಮಾಧಿ ರಕ್ಷಣೆಗೆ ಮುಂದಾಗಿದ್ದರು. ಆದರೆ ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತಾವೇ ಅರ್ಜುನ ಸಮಾಧಿ ರಕ್ಷಣೆ ಮಾಡುವುದಾಗಿ ಹೇಳಿ ದರ್ಶನ್ ಅಭಿಮಾನಿಗಳನ್ನು ಅಲ್ಲಿಂದ ವಾಪಸ್ ಕಳುಹಿಸಿತ್ತು.
ದರ್ಶನ್ ಕಳುಹಿಸಿಕೊಟ್ಟ ಕಲ್ಲುಗಳನ್ನು ಬಳಸಿ ಅರಣ್ಯ ಇಲಾಖೆಯವರು ಅರ್ಜುನ ಸಮಾಧಿ ಸುತ್ತಾ ತಡೆಗೋಡೆ ನಿರ್ಮಿಸಿದ್ದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ದರ್ಶನ್ ಅವರು ಕಳುಹಿಸಿದ್ದ ಕಲ್ಲುಗಳ ಹಣವನ್ನು ದರ್ಶನ್ ಸ್ನೇಹಿತರ ಅಕೌಂಟ್ಗೆ ಹಾಕಿದ್ದೇವೆ ಎಂದಿದ್ದರು. ಈ ಬಗ್ಗೆ ಇದೀಗ ನಟ ದರ್ಶನ್ ಸ್ನೇಹಿತ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಇಡೀ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅವರೇ ನನಗೆ ಹಣ ಕೊಟ್ಟು ಕಲ್ಲುಗಳನ್ನು ಕೊಡಿಸಲು ಹೇಳಿದ್ದರು ಎಂದಿದ್ದಾರೆ.
"ಮೇ 2ನೇ ತಾರೀಖು ಅರ್ಜುನ ಸಮಾಧಿ ಬಗ್ಗೆ ನಟ ದರ್ಶನ್ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದರು. ಯಾರೂ ಗಮನ ಹರಿಸದೇ ಇದ್ದಾಗ ಅರ್ಜುನ ಆನೆಯ ಮಾವುತ ವಿನು ಹಾಗೂ ನಮ್ಮ ತಂಡ ಹೋಗಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ತಾತ್ಕಾಲಿಕವಾಗಿ ತಡೆ ಗೋಡೆ ಕಟ್ಟಲು ಅನುಮತಿ ಕೊಡಿ ಎಂದು ಕೇಳಿದ್ದರು. ಅದಕ್ಕೆ ಅವರು ಒಪ್ಪಿದ್ದರು. ಶಾಶ್ವತವಾಗಿ ಕಟ್ಟಬೇಡಿ. ತಾತ್ಕಾಲಿಕವಾಗಿ ಕಟ್ಟಿ ಎಂದಿದ್ದರು. ಆ ಬಳಿಕವೇ ನಾವು ಕಲ್ಲು ಕಳುಹಿಸಿದ್ದು" ಎಂದಿದ್ದಾರೆ.

"ನಮ್ಮ ಹುಡುಗರು ಕಲ್ಲು ತಂದು, ಅದನ್ನು ನಿಲ್ಲಿಸಲು ಅರ್ಜುನ ಸಮಾಧಿ ಸುತ್ತಾ ಹಳ್ಳ ಅಗೆದಿದ್ದರು. ಆಗ ಬಂದು ಮಾಡಬೇಡಿ ಎಂದು ನೀವು ಬಂದು ನಿಲ್ಲಿಸಿದ್ದೀರಾ. ಹೊರಗಿನವರು ಬಂದು ಮಾಡಿದರೆ ಇಲಾಖೆ ಮರ್ಯಾದೆ ಹೋಗುತ್ತದೆ. ನೀವು ಹೋಗಿ ಎಂದಿದ್ದೀರಾ. ನೀವು ಅನುಮತಿ ಕೊಟ್ಟ ಮೇಲೆಯೇ ನಮ್ಮ ಹುಡುಗರು ಬಂದಿದ್ದು. ನಾವು ವೀಡಿಯೋ ಹಾಕಿದ ಮೇಲೆ ಬಂದು ತರಾತುರಿಯಲ್ಲಿ ಕಲ್ಲುಗಳನ್ನು ನಿಲ್ಲಿಸಿದಿದ್ದೀರಾ" ಎಂದು ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
"ದರ್ಶನ್ ಅವರು ಹಣ ಕೊಟ್ಟಿದ್ದು ನನ್ನ ಕೈಗೆ. ನಾನು ಕಲ್ಲು ತೆಗೆದು ಕಳುಹಿಸಿಕೊಟ್ಟೆ. ದರ್ಶನ್ ಅವರ ಅಕೌಂಟ್ಗೂ ದುಡ್ಡು ಬಂದಿಲ್ಲ. ನನ್ನ ಅಕೌಂಟ್ಗೂ ದುಡ್ಡು ಬಂದಿಲ್ಲ. ಆ ದುಡ್ಡಿನ ಅವಶ್ಯಕತೆ ದರ್ಶನ್ ಅವರಿಗೆ ಇಲ್ಲ. ಬೇಕಿದ್ದರೆ ನೀವೇ ಕೇಳಿ ಕೊಡ್ತಾರೆ. ದರ್ಶನ್ ಸರ್ ಸಾಕಷ್ಟು ರೀತಿಯಲ್ಲಿ ಅರಣ್ಯ ಇಲಾಖೆ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಒಳ್ಳೆ ಕೆಲಸ ಮಾಡಲು ಬಂದಾಗ ಅವಮಾನ ಮಾಡಿ ಕಳುಹಿಸಿದ್ದೀರಾ. ನಮ್ಮ ಹುಡುಗರು ಕಷ್ಟಪಟ್ಟಿದ್ದರು. ಕೊನೆಗೆ ಬಂದು ಪೋಸ್ ಕೊಟ್ಟಿದ್ದೀರಾ. ನಿಮಗೆ ಒಳ್ಳೆಯದಾಗಲಿ" ಎಂದಿದ್ದಾರೆ.


Click it and Unblock the Notifications











