ಅಂಬಾರಿ ಆನೆ ಅರ್ಜುನ ಸಮಾಧಿ ವಿವಾದ; ದರ್ಶನ್ ಅಭಿಮಾನಿ ವಿರುದ್ಧ ಗಂಭೀರ ಆರೋಪ, ದೂರು
ಅರ್ಜುನ ಆನೆ ತಾತ್ಕಾಲಿಕ ಸಮಾಧಿ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ. ನಟ ದರ್ಶನ್ ತಮ್ಮ ಆಪ್ತರ ಮೂಲಕ ಸಮಾಧಿ ನಿರ್ಮಾಣಕ್ಕೆ ಸ್ಲ್ಯಾಬ್ ಕಲ್ಲುಗಳನ್ನು ಪೂರೈಸಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಆ ಹಣವನ್ನು ವಾಪಸ್ ನೀಡಿ ಅದೇ ಕಲ್ಲುಗಳನ್ನು ಬಳಸಿ ತಾತ್ಕಾಲಿಕವಾಗಿ ಅರ್ಜುನ ಸಮಾಧಿ ಸುತ್ತ ತಡೆಗೋಡೆ ನಿರ್ಮಿಸಿದ್ದರು.
ಇತ್ತೀಚೆಗೆ ನಟ ದರ್ಶನ್ ಆಪ್ತ ನಾಗರಾಜ್ ಮಾತನಾಡಿ ನಮಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಅರಣ್ಯ ಇಲಾಖೆ ನಮ್ಮ ಮರ್ಯಾದೆ ಹೋಗುತ್ತದೆ ಎಂದು ಹೇಳಿ ದರ್ಶನ್ ಅಭಿಮಾನಿಗಳನ್ನು ಅಲ್ಲಿಂದ ಹೊರಗೆ ಕಳುಹಿಸಿ ತಾವೇ ಸಮಾಧಿ ಸುತ್ತಾ ಮಣ್ಣು ಕೊಚ್ಚಿ ಹೋಗದಂತೆ ತಡೆ ಗೋಡೆ ನಿರ್ಮಿಸಿದ್ದಾರೆ. ದರ್ಶನ್ ಅವರನ್ನು ಬಳಸಿಕೊಂಡು ಕೊನೆಗೆ ಅವಮಾನ ಮಾಡಿದರು ಎಂದು ವಿಡಿಯೋ ಬಿಡುಗಡೆ ಮಾಡಿದ್ದರು.

ಅರ್ಜುನ ಸಮಾಧಿ ನಿರ್ಮಾಣ ಹೆಸರಿನಲ್ಲಿ ದರ್ಶನ್ ಅಭಿಮಾನಿ ನವೀನ್ ಎಂಬಾತ ಹಣ ವಸೂಲಿ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಮಲೆನಾಡು ರಕ್ಷಣಾ ವೇದಿಕೆ ಸದಸ್ಯರು ದೂರು ನೀಡಿದ್ದಾರೆ. 'ಅರ್ಜುನ ಪಡೆ' ಎನ್ನುವ ವಾಟ್ಸಪ್ ಗ್ರೂಪ್ ಮಾಡಿ ಮೈಸೂರು ಮೂಲದ ನವೀನ್ ಎಂಬಾತ ಹಣ ಸಂಗ್ರಹಣೆ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ನವೀನ್ ಅಕೌಂಟ್ಗೆ ಲಕ್ಷಾಂತರ ರೂಪಾಯಿ ಹಣ ಹೋಗಿದೆ. ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ನಿಮ್ಮ ಸಹಾಯ ಬೇಕು ಎಂದು ಕೇಳುತ್ತಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಕ್ಯೂ ಆರ್ ಕೋಡ್ ಕಳುಹಿಸಿ ಹಣ ಸಂಗ್ರಹ ಮಾಡಿದ್ದಾನೆ. ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆತನಿಗೆ ಅನುಮತಿ ಕೊಟ್ಟಿದ್ದು ಯಾರು? ಎಂದು ಸಕಲೇಶಪುರದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ನವೀನ್ ಅಕೌಂಟ್ಗೆ ಹಣ ಹಾಕಿರುವುದಾಗಿ ಪೋನ್ ಪೇ, ಗೂಗಲ್ ಪೇ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಇನ್ನು ಈತನೇ ದರ್ಶನ್ ಆಪ್ತರನ್ನು ಸಂಪರ್ಕಿಸಿ, ದರ್ಶನ್ ಅವರಿಂದಲೇ ಸಮಾಧಿ ನಿರ್ಮಾಣಕ್ಕೆ ಸ್ಲ್ಯಾಬ್ ಕಲ್ಲುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಅರಣ್ಯ ಇಲಾಖೆಯವರು ಹೇಳಿದಂತೆ ಈತನ ಅಕೌಂಟ್ಗೆ 30 ಸಾವಿರ ರೂ. ಹಣ ಕಳುಹಿಸಿದ್ದಾರೆ. ಈತನೇ ನಡುವೆ ಡಬಲ್ ಗೇಮ್ ಆಡಿದ್ದಾನೆ ಎನ್ನಲಾಗ್ತಿದೆ.
ಏನಿದು ಅರ್ಜುನ ಆನೆ ತಾತ್ಕಾಲಿಕ ಸಮಾಧಿ ವಿಚಾರ ಎನ್ನುವುದನ್ನು ನೋಡುವುದಾದರೆ ಕಳೆದ ಡಿಸೆಂಬರ್ನಲ್ಲಿ ಆನೆ ಮೃತಪಟ್ಟಿತ್ತು. ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಕೊನೆಯುಸಿರೆಳೆದಿದ್ದ. ಅರ್ಜುನನ ಅಗಲಿಕೆಗೆ ಜನ ಮರುಗಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್ಡಿಸಿ ನಡುತೋಪಿನ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆದಿತ್ತು.
ಅಂತ್ಯಕ್ರಿಯೆಯ ಬಳಿಕ ಸಮಾಧಿಯನ್ನು ಎಲ್ಲರೂ ಮರೆತುಬಿಟ್ಟರು. ಮಳೆ ಬಂದಾಗ ಸಮಾಧಿ ಮಣ್ಣು ಕೊಚ್ಚಿ ಹೋಗುವಂತಾಗಿತ್ತು. ಈ ಬಗ್ಗೆ ನಟ ದರ್ಶನ್ ದನಿ ಎತ್ತಿದ್ದರು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದರು. "ಅರ್ಜುನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು" ಎಂದು ಬರೆದುಕೊಂಡಿದ್ದರು.
ದರ್ಶನ್ ಪೋಸ್ಟ್ ವೈರಲ್ ಆಗಿ ಅಭಿಮಾನಿಗಳು ನೀವೇ ಇದಕ್ಕೆ ಏನಾದರೂ ಮಾಡಿ. ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದಿದ್ದರು. ಬಳಿಕ ದರ್ಶನ್ ತಮ್ಮ ಅಭಿಮಾನಿಗಳ ಸ್ಲ್ಯಾಬ್ ಕಲ್ಲುಗಳನ್ನು ಕಳುಹಿಸಿಕೊಟ್ಟಿದ್ದರು. ಅಭಿಮಾನಿಗಳೇ ಆ ಕಲ್ಲುಗಳನ್ನು ಬಳಸಿ ಸಮಾಧಿ ಸುತ್ತಾ ತಡೆಗೋಡೆ ನಿರ್ಮಿಸಿ ತಾತ್ಕಾಲಿಕವಾಗಿ ಸಮಾಧಿಗೆ ರಕ್ಷಣೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು.
ನಮ್ಮ ಅನುಮತಿ ಇಲ್ಲದೇ ನೀವು ಸಮಾಧಿ ಸ್ಮಾರಕ ರಕ್ಷಣೆಗೆ ಕಲ್ಲುಗಳನ್ನು ಹಾಕಬಾರದು ಎಂದಿದ್ದರು. ಬಳಿಕ ದರ್ಶನ್ ಅಭಿಮಾನಿಗಳೇ ಕೊಂಡು ಹೋಗಿದ್ದ ಕಲ್ಲುಗಳನ್ನು ಬಳಸಿ ಇಲಾಖೆ ಕಡೆಯಿಂದ ತಡೆ ಗೋಡೆ ನಿರ್ಮಿಸಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಆಪ್ತರಿಗೆ ಕಲ್ಲುಗಳ ಹಣವನ್ನು ನೀಡಿರುವುದಾಗಿ ಹೇಳಿದ್ದರು.


Click it and Unblock the Notifications











