ಅರೆಸ್ಟ್ ವಾರೆಂಟ್ ಜಾರಿ: 'ಬಿಗ್ ಬಾಸ್' ಭುವನ್ ಗೆ ಬಂಧನ ಭೀತಿ.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ನಟ ಭುವನ್ ಪೊನ್ನಣ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಚಾರಣೆಗೆ ಹಾಜರ್ ಆಗದ ಭುವನ್ ಪೊನ್ನಣ್ಣಗೆ ಬಂಧನ ಭೀತಿ ಎದುರಾಗಿದೆ.
ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದ ಕೊಡಗಿನ ಕುವರ ಭುವನ್ ಪೊನ್ನಣ್ಣ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಇದೇ ಶೋನಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಜೊತೆ ಕಿತ್ತಾಡಿಕೊಂಡಿದ್ದರು.
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ ಮೇಲೂ ಪ್ರಥಮ್-ಭುವನ್ ಜಗಳ ಮುಂದುವರೆದಿತ್ತು. ಒಂದೇ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಇವರಿಬ್ಬರು ಕಚ್ಚಾಡಿಕೊಂಡು ದೂರು-ಪ್ರತಿದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭುವನ್ ಪೊನ್ನಣ್ಣಗೆ ಅರೆಸ್ಟ್ ವಾರೆಂಟ್ ಜಾರಿ ಆಗಿದೆ. ಮುಂದೆ ಓದಿರಿ...

ಅರೆಸ್ಟ್ ವಾರೆಂಟ್ ಯಾಕೆ.?
ಪ್ರಥಮ್ ನಡುವಿನ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಭುವನ್ ಪೊನ್ನಣ್ಣ ಹಾಜರ್ ಆಗಬೇಕಿತ್ತು. 15 ಬಾರಿ ನೋಟೀಸ್ ನೀಡಿದರೂ ಭುವನ್ ಪೊನ್ನಣ್ಣ ವಿಚಾರಣೆಗೆ ಹಾಜರ್ ಆಗಲಿಲ್ಲ. ಹೀಗಾಗಿ, ಸೆಷನ್ಸ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಭುವನ್ ಗೆ ಬಂಧನ ಭೀತಿ
ಅರೆಸ್ಟ್ ವಾರೆಂಟ್ ಜಾರಿ ಆಗಿರುವುದರಿಂದ ಭುವನ್ ಗೆ ಬಂಧನ ಭೀತಿ ಎದುರಾಗಿದೆ. ವಿಚಾರಣೆ ಬಗ್ಗೆ ಇಲ್ಲಿಯವರೆಗೂ ತಲೆ ಕೆಡಿಸಿಕೊಳ್ಳದ ಭುವನ್ ಇದೀಗ ಜಾಮೀನಿಗಾಗಿ ಓಡಾಡುತ್ತಿದ್ದಾರೆ.

ಸೀರಿಯಲ್ ಶೂಟಿಂಗ್ ನಲ್ಲಿ ಕಿತ್ತಾಟ
'ಬಿಗ್ ಬಾಸ್' ಮುಗಿದ್ಮೇಲೆ ಸೀರಿಯಲ್ ಒಂದರಲ್ಲಿ ಪ್ರಥಮ್, ಸಂಜನಾ ಮತ್ತು ಭುವನ್ ನಟಿಸುತ್ತಿದ್ದರು. ಈ ವೇಳೆ ಸಂಜನಾ ವಿಷಯವಾಗಿ ಭುವನ್ ಮತ್ತು ಪ್ರಥಮ್ ನಡುವೆ ಕಿತ್ತಾಟ ನಡೆದಿದೆ. ಈ ಸಂಬಂಧ ಪ್ರಥಮ್ ವಿರುದ್ಧ ಭುವನ್, ಭುವನ್ ವಿರುದ್ಧ ಪ್ರಥಮ್ ದೂರು ದಾಖಲಿಸಿದ್ದರು.

ಬಚಾವ್ ಆಗ್ತಾರಾ ಭುವನ್.?
ನಟನೆ ಮತ್ತು ನಿರ್ದೇಶನದಲ್ಲಿ ಪ್ರಥಮ್ ಬಿಜಿಯಾಗಿದ್ದರೆ, ಭುವನ್ ಕೂಡ ಕೆಲ ಚಿತ್ರಗಳಲ್ಲಿ ತೊಡಗಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಘಟನೆಯಿಂದಾಗಿ ಭುವನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಭುವನ್ ಬಚಾವ್ ಆಗ್ತಾರಾ.? ನೋಡಬೇಕು.


Click it and Unblock the Notifications











