ದರ್ಶನ್ ಫ್ಯಾನ್ಸ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮನೆಯಿಂದ ಓಡಿ ಹೋಗಿದ್ದಾರೆ- ರಮ್ಯಾ
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ- ಅವಹೇಳನಾಕಾರಿ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಸ್ಯಾಂಡಲ್ವುಡ್ ಕ್ವೀನ್ ಮತ್ತು ಮಾಜಿ ಸಂಸದೆ ರಮ್ಯಾ ಸಮರ ಸಾರಿದ್ದು ಎಲ್ಲರಿಗೆ ಗೊತ್ತಿರುವಂತಹದ್ದೇ. ರಮ್ಯಾ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಲ್ಲಿಯವರೆಗೆ ಓಬಣ್ಣ.. ಗಂಗಾಧರ್.. ರಾಜೇಶ್..ಭುವನ್ಗೌಡ.. ಮಂಜುನಾಥ್.. ಪ್ರಮೋದ್ಗೌಡ.. ಹಾಗೂ ಸಂತೋಷ್.. ಹೀಗೆ 7 ಜನರನ್ನು ಬಂಧಿಸಿದ್ದಾರೆ.
ಇನ್ನೂ.. ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದವರೆಲ್ಲರೂ ನಿಜಕ್ಕೂ ದರ್ಶನ್ ಅಭಿಮಾನಿಗಳೇನಾ ? ಗೊತ್ತಿಲ್ಲ. ಆದರೆ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಹೇಳನಾಕಾರಿ ಸಂದೇಶಗಳನ್ನು ಕಳುಹಿಸಿದ್ದಾರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದೇ ರಮ್ಯಾ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರೆಲ್ಲರು ದರ್ಶನ್ ಅವರ ಹುಡುಗರೇ ಎನ್ನುವ ವಾದವನ್ನು ಹಲವರು ಮಾಡುತ್ತಿದ್ದಾರೆ. ದರ್ಶನ್ ಮತ್ತೆ ಪರಪ್ಪನ ಅಗ್ರಹಾರದ ಪಾಲಾಗಲು ಇವೆಲ್ಲವೂ ಪ್ರಮುಖ ಕಾರಣ, ಎಲ್ಲಾ ದಿಕ್ಕುಗಳಲ್ಲಿ ಆಲೋಚಿಸಿ.. ಅವಲೋಕಿಸಿಯೇ ನ್ಯಾಯಾಲಯ ಇಂತಹದ್ದೊಂದು ಖಡಕ್ ತೀರ್ಪನ್ನು ನೀಡಿರುವಂತೆ ಇದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದರ ನಡುವೆ ಪುಂಡ ಪೋಕರಿಗಳ ವಿರುದ್ಧ ದೂರು ನೀಡಿದ ಬೆನ್ನಲ್ಲೇ ನನ್ನ ಕಾಮೆಂಟ್ ಸೆಕ್ಷನ್ ಸ್ವಚ್ಛ ಭಾರತದಂತೆ ಮಿಂಚುತ್ತಿದೆ ಎಂದು ರಮ್ಯಾ ಈಗ ಹೇಳಿದ್ದಾರೆ.
ಹೌದು, ಅಸಲಿಗೆ ರಮ್ಯಾ ಇಂದು ಮಳಿಗೆಯೊಂದರ ಉದ್ಘಾಟನೆ ಸಮಾರಂಭಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮಾಧ್ಯಮದವರ ಜೊತೆ ಹಲವು ವಿಚಾರಗಳ ಕುರಿತು ಮಾತನಾಡಿರುವ ರಮ್ಯಾ ಅಶ್ಲೀಲ ಸಂದೇಶಗಳ ವಿರುದ್ಧ ತಾವು ನೀಡಿದ್ದ ದೂರಿನ ಕುರಿತು ಕೂಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ರಮ್ಯಾ ಹೆಣ್ಣು ಮಕ್ಕಳಿಗೆ ಧೈರ್ಯ ಬಂದಿದೆ, ಅದೊಂದು ನನಗೆ ಖುಷಿ ಯಾಕೆಂದರೆ ಇದೆಲ್ಲಾ ಆದ ಮೇಲೆ ನನ್ನ ಕಾಮೆಂಟ್ ಸೆಕ್ಷನ್ ಸ್ವಚ್ಚ ಭಾರತ ಅಂತಾನೇ ಹೇಳಬಹುದು, ತುಸು ಕ್ಲೀನ್ ಆಗಿದೆ, ಕೆಟ್ಟ ಕಾಮೆಂಟ್ಗಳು ನನಗೆ ಹೆಚ್ಚಾಗಿ ಬರುತ್ತಿಲ್ಲ ಎಂದು ಹೇಳಿದ್ದಾರೆ. ಎಲ್ಲೋ ಒಂದು ಕಡೆ ಒಳ್ಳೆಯದಾಯ್ತು ಅನ್ಸುತ್ತೆ ಎಂದು ಹೇಳಿದ್ದಾರೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪೊಲೀಸ್ ಕಮಿಷನರ್ ಅವರ ಜೊತೆ ಮಾತನಾಡಿದೆ ಇನ್ನೂ ಅರೆಸ್ಟ್ಗಳಾಗ್ತಿವೆ ಎಷ್ಟೋ ಜನ ಅವರ ಫೋನ್ ಸ್ವಿವ್ ಆಫ್ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ ಎಂದಿರುವ ರಮ್ಯಾ ಇಲ್ಲಿಯವರೆಗೆ 7 ಜನ ಅರೆಸ್ಟ್ ಆಗಿದ್ದಾರೆ ಮುಂದೆ ಇನ್ನಷ್ಟು ಜನರನ್ನು ಕೂಡ ಬಂಧಿಸುವುದಾಗಿ ನನಗೆ ಪೊಲೀಸ್ ಕಮಿಷನರ್ ಅವರು ಹೇಳಿದ್ದಾರೆ ಎಂದು ಹೇಳಿದ್ದಾರೆ.
ಇಷ್ಟೆಲ್ಲ ಆದ ನಂತರ 7 ಜನರ ಬಂಧನವಾದರೂ ಕೂಡ ಇನ್ನು ಕೆಲ ಹೆಣ್ಣು ಮಕ್ಕಳಿಗೆ ಅಶ್ಲೀಲ ಸಂದೇಶ ಕಳುಹಿಸೋರಿಗೆ ಏನು ಹೇಳ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ರಮ್ಯಾ, ಮೊದಲು ನಿಮ್ಮ ಬದುಕಿನಲ್ಲಿ ಏನಾದರೂ ಮಾಡಿ, ಒಳ್ಳೆಯ ಬುದ್ದಿ ಕಲಿಯಿರಿ, ಹೆಣ್ಣು ಮಕ್ಕಳನ್ನ ನಿಮ್ಮ ತಂದೆ ತಾಯಿಯನ್ನು ಗೌರವಿಸುವುದನ್ನು ಕಲಿಯಿರಿ, ಒಂದೊಳ್ಳೆಯ ಕೆಲಸ ನೋಡಿ ಜೀವನದಲ್ಲಿ ಯಾವಾಗಲೂ ಬ್ಯುಸಿಯಾಗಿರಿ ಎಂದು ಹೇಳಿದ್ದಾರೆ.
ಮುಂದುವರೆದು ಕೆಲಸ ಇಲ್ಲದೇ ಮನೆಯಲ್ಲಿ ಖಾಲಿ ಕುಂತಾಗ ಕೆಟ್ಟ ಕೆಟ್ಟ ಆಲೋಚನೆಗಳು ಬರುತ್ತಾವೆ, ನೆಗೆಟಿವ್ ಯೋಚನೆಗಳು ಬರ್ತಾವೆ ಬಹುಶಃ ಹಾಗೆಲ್ಲಾ ಆಗ್ತಿರಬೇಕು ಎಂದು ರಮ್ಯಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಂದ್ಹಾಗೇ ರಮ್ಯಾ ತಮ್ಮ ದೂರಿನಲ್ಲಿ 43 ಅಕೌಂಟ್ಗಳ ಹೆಸರು ಉಲ್ಲೇಖಿಸಿದ್ದರು. ಪೊಲೀಸರ ಮುಂದೆ ಹೇಳಿಕೆ ನೀಡುವ ಸಮಯದಲ್ಲಿ ಮತ್ತೆ ಐದು ಅಕೌಂಟ್ಗಳನ್ನು ಸೇರಿಸಿ ಒಟ್ಟು 48 ಅಕೌಂಟ್ಗಳ ವಿರುದ್ದ ತಮ್ಮ ದೂರನ್ನು ರಮ್ಯಾ ದಾಖಲಿಸಿದ್ದರು.


Click it and Unblock the Notifications











