ಆರು ಕಲಾತ್ಮಕ ಚಿತ್ರಗಳಿಗೆ ಒಂದು ಲಕ್ಷ ರು. ಹೆಚ್ಚುವರಿ ಸಬ್ಸಿಡಿ
ಬೆಂಗಳೂರು : ಕೆಲವೇ ದಿನಗಳ ಹಿಂದೆ ಬಿ.ವಿ. ಕಾರಂತ್ ನೇತೃತ್ವದ ಕನ್ನಡ ಚಲನಚಿತ್ರ ಗುಣಮಟ್ಟ ಸಮಿತಿ 20 ಕನ್ನಡ ಚಿತ್ರಗಳಿಗೆ ತಲಾ 10 ಲಕ್ಷ ರುಪಾಯಿಗಳ ಸಬ್ಸಿಡಿಗೆ ಆಯ್ಕೆ ಮಾಡಿದ ಸುದ್ದಿ ನಿಮಗೂ ಗೊತ್ತಲ್ಲವೇ. ಈಗ ಇದೇ ಸಮಿತಿ 1994ರಿಂದಲೂ ಕಲಾತ್ಮಕ ಚಿತ್ರ ಎಂದರೆ ಏನು ಎಂದು ನಿರ್ಧರಿಸಲಾಗದೆ ಕಗ್ಗಂಟಾಗಿ ಉಳಿದಿದ್ದ ಸಮಸ್ಯೆಯನ್ನೂ ಬಗೆಹರಿಸಿ ಬಿಟ್ಟಿದೆ.
1994 ರಿಂದ 1996ರ ಅವಧಿಯಲ್ಲಿ ತೆರೆಕಂಡು ಸಬ್ಸಿಡಿಗೆ ಪಾತ್ರವಾಗಿದ್ದ ಕೆಲವು ಚಿತ್ರಗಳನ್ನು ತೂಗಿ ಅಳೆದು ಕೊನೆಗೂ 6 ಚಿತ್ರಗಳನ್ನು ಕಲಾತ್ಮಕ ಚಿತ್ರ ಎಂದು ಪರಿಗಣಿಸಿ ಸರ್ಕಾರದ ಇಂಗಿತದಂತೆ ಕಲಾತ್ಮಕ ಚಿತ್ರಗಳಿಗೆ ನೀಡುವ ಒಂದು ಲಕ್ಷ ರುಪಾಯಿಗಳ ಹೆಚ್ಚುವರಿ ಸಬ್ಸಿಡಿಗೆ ಆಯ್ಕೆ ಮಾಡಿದೆ.
94-95ರ ಅವಧಿಯಲ್ಲಿ ಈಗಿರುವಂತೆ ಗುಣಮಟ್ಟ ಸಮಿತಿ ಇರಲಿಲ್ಲ. ಆಗ ರೀಮೇಕ್ ಚಿತ್ರಗಳೂ ಸೇರಿದಂತೆ ಬಿಡುಗಡೆಯಾದ ಎಲ್ಲ ಕನ್ನಡ ಚಿತ್ರಗಳಿಗೂ 4 ಲಕ್ಷ ರುಪಾಯಿಗಳ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಕಲಾತ್ಮಕ ಚಿತ್ರಗಳಗೆ 1 ಲಕ್ಷ ರುಪಾಯಿ ಹೆಚ್ಚುವರಿ ಸಬ್ಸಿಡಿ ಕೊಡುವ ಬಗ್ಗೆ ಅಂದಿನ ಸರಕಾರ ಘೋಷಿಸಿತ್ತು. ದುರಂತದ ವಿಷಯವೆಂದರೆ ಈವರೆಗೆ ಯಾವುದು ಕಲಾತ್ಮಕ ಚಿತ್ರ ಎಂದು ನಿರ್ಧರಿಸಲಾಗದೆ ಆ ಯೋಜನೆ ಮೂಲೆಗುಂಪಾಗಿತ್ತು.
ಕೊನೆಗೂ ಬಿ.ವಿ. ಕಾರಂತ್ ನೇತೃತ್ವದ ಸಮಿತಿ ಹೆಚ್ಚುವರಿ ಸಬ್ಸಿಡಿಗಾಗಿ ಬಂದಿದ್ದ 11 ಚಿತ್ರಗಳನ್ನು ಪರಾಮರ್ಶಿಸಿ 6 ಚಿತ್ರಗಳನ್ನು ಆಯ್ಕೆ ಮಾಡಿತು. ಈಗ ಈ ಆರು ಚಿತ್ರಗಳು ತಲಾ ಒಂದು ಲಕ್ಷ ರುಪಾಯಿಗಳ ಹೆಚ್ಚುವರಿ ಸಬ್ಸಿಡಿ ಪಡೆಯಲಿವೆ. ಅಂದಹಾಗೆ ಕಲೆಗೆ ಲಕ್ಷ ಕೊಟ್ಟರೂ ಕಡಿಮೆ ಅಲ್ಲವೆ.
ಹೆಚ್ಚುವರಿ ಸಬ್ಸಿಡಿಗೆ ಆಯ್ಕೆಯಾಗಿರುವ ಚಿತ್ರಗಳಿವು : 1. ಎಂ.ಎಸ್. ಸತ್ಯು ಅವರ ಗಳಿಗೆ, 2. ಕೆ.ಎಸ್. ಎಲ್. ಸ್ವಾಮಿ (ರವಿ) ಅವರ ಜಂಬೂಸವಾರಿ, 3. ಪಿ.ಎಚ್. ವಿಶ್ವನಾಥ್ ಅವರ ಅರಗಿಣಿ, 4. ಬರಗೂರು ರಾಮಚಂದ್ರಪ್ಪ ಅವರ ಸೂರ್ಯ, 5. ನಾಗಾಭರಣ ಅವರ ನಾವಿದ್ದೇವೆ ಎಚ್ಚರಿಕೆ ಹಾಗೂ ಕೊಡವ ಭಾಷೆಯ ಮಂದಾರ ಪೂವೆ.
(ಇನ್ಫೋ ವಾರ್ತೆ)


Click it and Unblock the Notifications