'ಬ್ರಹ್ಮಕಲಶ' ಹಾಡಿನಲ್ಲಿ ವಾಟರ್ ಕ್ಯಾನ್ ಬಂದಿದ್ದೇಗೆ? ಅರವಿಂದ್ ಕಶ್ಯಪ್ ಹೇಳಿದ್ದೇನು?
ಓಟಿಟಿಗೆ ಬಂದರೂ ಚಿತ್ರಮಂದಿರಗಳಲ್ಲಿ 'ಕಾಂತಾರ-1' ಪ್ರದರ್ಶನ ನಿಂತಿಲ್ಲ. ಹಿಂದಿ ವರ್ಷನ್ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಇದೆಲ್ಲದರ ನಡುವೆ 'ಬ್ರಹ್ಮಕಲಶ' ಹಾಡಿನಲ್ಲಿ ವಾಟರ್ ಕ್ಯಾನ್ ಕಂಡಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕೂಡಲೇ ಚಿತ್ರತಂಡ ಅದನ್ನು ಯೂಟ್ಯೂಬ್ನಲ್ಲಿದ್ದ ಹಾಡಿನಲ್ಲಿ ತೆಗೆದು ಹಾಕಿತ್ತು.
ಚಿತ್ರಮಂದಿರಗಳಲ್ಲಿ ವಾಟರ್ ಕ್ಯಾನ್ ಇನ್ನು ದರ್ಶನವಾಗ್ತಿದೆ. ಅದೇನು ದೊಡ್ಡ ಮಿಸ್ಟೇಕ್ ಅಲ್ಲ. ಸಣ್ಣ ಅಚಾತುರ್ಯದಿಂದ ಕ್ಯಾಮರಾ ಫ್ರೇಮ್ನಲ್ಲಿ ಯಾವುದೋ ಒಂದು ಮೂಲೆಯಲ್ಲಿ ಅದು ಕಾಣುತ್ತಿದೆ. ಸಿನಿಮಾವನ್ನು ನೋಡುವಾಗ ಯಾರ ಗಮನ ಕೂಡ ಅತ್ತ ಹೋಗುವುದಿಲ್ಲ. ಇಷ್ಟು ದೊಡ್ಡ ಸಿನಿಮಾ ಮಾಡುವಾಗ ಎಡಿಟಿಂಗ್ ವೇಳೆ ಸಾಕಷ್ಟು ಸಿನಿಮಾ ನೋಡಿದ್ದರೂ ಆ ವಾಟರ್ ಬಾಟಲ್ ಕಣ್ತಪ್ಪಿಸಿ ಬಂದಿದ್ದೇಗೆ ಎನ್ನುವ ಅಚ್ಚರಿ ಚಿತ್ರತಂಡಕ್ಕೂ ಇದೆ. ಈ ಬಗ್ಗೆ ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ.

ರಿಷಬ್ ಶೆಟ್ಟಿ ಬಳಿಕ 'ಕಾಂತಾರ- 1' ಚಿತ್ರದ ದೊಡ್ಡ ಶಕ್ತಿ ಅರವಿಂದ್ ಕಶ್ಯಪ್. ಈ ಮಾತನ್ನು ಸಾಕಷ್ಟು ಬಾರಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಕನ್ನಡ ಚಿತ್ರರಂಗದ ಅದ್ಭುತ ಛಾಯಾಗ್ರಾಹಕರಲ್ಲಿ ಅರವಿಂದ್ ಕೂಡ ಒಬ್ಬರು. 'ಬೆಲ್ ಬಾಟಂ', '777 ಚಾರ್ಲಿ', 'ಹೀರೊ' ಒಂದಷ್ಟು ಸಿನಿಮಾಗಳನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅರವಿಂದ್ ಮಾತಮಾಡಿದ್ದು ಈ ವೇಳೆ ವಾಟರ್ ಕ್ಯಾನ್ ವಿಚಾರವೂ ಪ್ರಸ್ತಾಪವಾಗಿದೆ.
ಅರವಿಂದ್ ಮಾತನಾಡಿ "ನಮ್ಮದು ಅದ್ಭುತ ತಂಡ. ಪ್ರತಿ ಶಾಟ್ ಫ್ರೇಮ್ ಟು ಫ್ರೇಮ್ ಚೆಕ್ ಮಾಡಿ ಹೊರಗೆ ಬಿಡ್ತಿದ್ವಿ. 'ಬ್ರಹ್ಮಕಲಶ' ಸಾಂಗ್ ವಿಚಾರ ಏನಾಯ್ತು ಅಂದ್ರೆ, ಔಟ್ಫುಟ್ ತೆಗೆಯುವಾಗ ಎಲ್ಲಾ ಫ್ರೇಮ್ ಚೆಕ್ ಮಾಡಿದ್ದಾರೆ. ಫಸ್ಟ್ ಫ್ರೇಮ್ನಲ್ಲಿ ವಾಟರ್ ಕ್ಯಾನ್ ಇಲ್ಲ. ಫೈನಲ್ ಫ್ರೇಮ್ನಲ್ಲಿ ಬಂದಿರೋದು. ಅದು ಓಕೆ ಶಾಟ್ ಕೂಡ ಅಲ್ಲ. ಬೇರೆ ಶಾಟ್ ಫೈನಲ್ ಮಾಡಿದ್ದೆವು. ಹೇಗೆ ಮಿಸ್ ಆಯ್ತೋ ಗೊತ್ತಿಲ್ಲ. ನಮಗೂ ತಡವಾಗಿ ಗೊತ್ತಾಯಿತು. ಕೂಡಲೇ ತೆಗೆಸಿಬಿಟ್ಟೆವು. ಅಷ್ಟು ಸುಲಭವಾಗಿ ಯಾರ ಕಣ್ಣಿಗೂ ಕಾಣುತ್ತಿರಲಿಲ್ಲ" ಎಂದಿದ್ದಾರೆ.

ಜ್ಯೂನಿಯರ್ ಆರ್ಟಿಸ್ಟ್ ಕಾರಣದಿಂದ ಈ ವಾಟರ್ ಕ್ಯಾನ್ ವಿಚಾರ ಹೊರಬಂತು ಅಂತ ನಮಗೆ ಅನ್ನಿಸ್ತಿದೆ ಎಂದು ಅರವಿಂದ್ ಹೇಳಿದ್ದಾರೆ. "ಯೂಟ್ಯೂಬ್ನಲ್ಲಿ ಸಾಂಗ್ ಬಂದ ಮೇಲೆ ಜ್ಯೂನಿಯರ್ ಆರ್ಟಿಸ್ಟ್ ಒಬ್ಬ, ತಾನು ಹಾಡಿನಲ್ಲಿ ಎಷ್ಟು ಸಲ ಕಾಣಿಸುತ್ತೇನೆ ಅಂತ ಹುಡುಕುವ ಪ್ರಯತ್ನ ಮಾಡಿದ್ದಾನೆ. ಹಾಡಿನಲ್ಲಿ ನಾನು 9 ಕಡೆ ಇದ್ದೀನಿ ಅಂತ ಒಂದು ವೀಡಿಯೋ ಮಾಡಿ ಹಾಕಿದ್ದ. ಅದಕ್ಕಾಗಿ ಜೂಮ್ ಮಾಡಿ ನೋಡುವಾಗ ವಾಟರ್ ಕ್ಯಾನ್ ಆತನ ಗಮನಕ್ಕೆ ಬಂದಿದೆ. ಅದನ್ನು ಬೇರೆಯವರಿಗೆ ಹೇಳಿದ್ದಾನೆ. ಆ ರೀತಿ ಹೇಳಿದ ಮೇಲೆ ಸಹಜವಾಗಿ ಹಾಡು ನೋಡುವಾಗ ಎಲ್ಲರ ಕಣ್ಣು ಅತ್ತ ಹೋಗುತ್ತದೆ. ಹಾಗಾಗಿ ವೈರಲ್ ಆಗಿರಬಹುದು" ಎಂದು ವಿವರಿಸಿದ್ದಾರೆ.
ತೆರೆಮೇಲೆ 'ಕಾಂತಾರ- 1' ಸಿನಿಮಾ ನೋಡುವಾಗ ನಿಜಕ್ಕೂ 'ಬ್ರಹ್ಮಕಲಶ' ಹಾಡಿನಲ್ಲಿ ಮಿಸ್ ಆಗಿ ವಾಟರ್ ಕ್ಯಾನ್ ಬಂದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಯೂಟ್ಯೂಬ್ನಲ್ಲಿ ಹಾಡು ಬಂದ ಒಂದೆರಡು ದಿನಗಳ ನಂತರ ಗೊತ್ತಾಗಿದೆ. ಅದನ್ನು ಯಾರೋ ಮಾರ್ಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಬಳಿಕ ಯೂಟ್ಯೂಬ್ ತೆಗೆದು ಹಾಡು ನೋಡುವಾಗ ಸಹಜವಾಗಿಯೇ ಎಲ್ಲರ ಗಮನ ಅತ್ತ ಹೋಗಿತ್ತು.
ಅಕ್ಟೋಬರ್ 2ರಂದು ತೆರೆಗೆ ಬಂದಿದ್ದ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 800 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಮತ್ತಷ್ಟು ಸಿನಿಮಾಗಳಲ್ಲಿ ಅರವಿಂದ್ ಕಶ್ಯಪ್ ಬ್ಯುಸಿಯಾಗುತ್ತಿದ್ದಾರೆ. ಅವರ ಕೆಲಸದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











