ಕಿಚ್ಚ ಸುದೀಪ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಕೊನೆಗೂ ಮೌನ ಮುರಿದ ಆರ್ಯವರ್ಧನ್ ಗುರೂಜಿ
ಬಾಯಿಗೆ ಬಂದಂತೆ ಮಾತಾಡೋದು, ವಿರೋಧ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳುವುದು ಕೆಲವರಿಗೆ ಅಭ್ಯಾಸ ಆಗಿಬಿಟ್ಟಿದೆ. ನಟ ಸುದೀಪ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಈಗ ಕ್ಷಮೆ ಕೇಳಿದ್ದಾರೆ. "ಮಾತನಾಡುವ ಭರದಲ್ಲಿ ಆ ರೀತಿ ಹೇಳಿಬಿಟ್ಟೆ, ನೋವಾಗಿದ್ದರೆ ಕ್ಷಮಿಸಿ" ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿ ಕೂಡ ಆಗಿದ್ದ ಆರ್ಯವರ್ಧನ್ ಈ ಹಿಂದೆ ಕೂಡ ಇದೇ ರೀತಿ ಮಾತನಾಡಿದ್ದರು. ಬಿಗ್ಬಾಸ್ ಮನೆಯಲ್ಲಿ ಸುದೀಪ್ ಚಪ್ಪಾಳೆ ಬಗ್ಗೆ ಚಕಾರ ಎತ್ತಿದ್ದರು. ಬಿಗ್ಬಾಸ್ ಶೋನಲ್ಲಿ ಪಕ್ಷಪಾತ ಮಾಡುತ್ತಾರೆ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದರು. ಬಳಿಕ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ್ದರು.

"ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್" ಎಂದು ಡೈಲಾಗ್ ಹೊಡೆಯುತ್ತಾ ಜನಪ್ರಿಯರಾದವರು ಆರ್ಯವರ್ಧನ್ ಗುರೂಜಿ. ಸುದ್ದಿ ವಾಹಿನಿಗಳಲ್ಲಿ ಕೂತು ಭವಿಷ್ಯ, ಸಂಖ್ಯಾಶಾಸ್ತ್ರ ಹೇಳುತ್ತ ಗಮನ ಸೆಳೆದಿದ್ದರು. ಹಾಗಾಗಿ ಬಿಗ್ಬಾಸ್ ಮನೆಗೆ ಸ್ಪರ್ಧಿ ಆಗಿ ಹೋಗುವ ಅವಕಾಶ ಸಿಕ್ಕಿತ್ತು. ಇತ್ತೀಚೆಗೆ ಹೊಸ ವರ್ಷದ ಸಂಭ್ರಮದಲ್ಲಿ ವರ್ಷದ ಭವಿಷ್ಯ ಹೇಳುತ್ತಾ ಅಶ್ವವೇಗ ಸುದ್ದಿವಾಹಿನಿ ಕಾರ್ಯಕ್ರಮದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಮಕರ ರಾಶಿ ಕುರಿತು ಮಾತನಾಡುತ್ತಾ ಆರ್ಯವರ್ಧನ್ ಗುರೂಜಿ ಸುದೀಪ್, ದರ್ಶನ್ ವಿಷಯ ಪ್ರಸ್ತಾಪಿಸಿದ್ದಾರೆ. ಮಕರ ರಾಶಿಯವರು ಮನೆ ಕಟ್ತಾರಾ? ಆಸ್ತಿ ತಗೋತ್ತಾರಾ? ಮದುವೆ ಆಗುತ್ತಾ? ಕೋಪ ನಿಯಂತ್ರಿಸಿಕೊಳ್ತಾರಾ ಎಂದು ಆರ್ಯವರ್ಧನ್ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲಿ ಈಗ "ದರ್ಶನ್ ಜೈಲಿಗೆ ಹೋದ್ಮೇಲೆ ಸುದೀಪ್ ನಿಗರಾಡ್ತಾವ್ರೆ" ಎಂದು ಆರ್ಯವರ್ಧನ್ ವ್ಯಂಗ್ಯವಾಡಿದ್ದಾರೆ. "ಪ್ಯಾಂಟ್ ಬಿಚ್ಚಿ ತೋರಿಸ್ಲಾ ಅಂತಾರೆ, ಮಾಧ್ಯಮಗಳಲ್ಲಿ ನಾನೇ ನೋಡಿದ್ದೀನಿ" ಎಂದು ಆರ್ಯವರ್ಧನ್ ತಮಾಷೆ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿ ಸುದೀಪ್ ಅಭಿಮಾನಿಗಳು ಗರಂ ಆಗಿದ್ದರು.
ತಪ್ಪಿನ ಅರಿವಾಗುತ್ತಿದ್ದಂತೆ ವಿಡಿಯೋ ಮಾಡಿ ಆರ್ಯವರ್ಧನ್ ಗುರೂಜಿ ಕ್ಷಮೆ ಕೇಳಿದ್ದಾರೆ. "ಸುದೀಪ್ ಸರ್ಗೆ ಹೃದಯಪೂರ್ವಕ ನಮಸ್ಕಾರ. ನಾನು ಅವರೊಟ್ಟಿಗೆ ಕೆಲಸ ಮಾಡಿದ್ದೀನಿ. ಒಳ್ಳೆದಾಗಲಿ, ಹೊಸ ವರ್ಷ ಅವರಿಗೆ, ಅವ್ರ ಅಭಿಮಾನಿಗಳಿಗೆ ಚೆನ್ನಾಗಿರಲಿ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಭರದಲ್ಲಿ ಏನೋ ಮಾತನಾಡಿಬಿಟ್ಟೆ. ಅದರಿಂದ ಸುದೀಪ್ ಸರ್ಗೆ ಹಾಗೂ ಅವ್ರ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳ್ತೀನಿ. ಹೃದಯಪೂರ್ವಕವಾಗಿ ಕ್ಷಮೆ ಕೇಳಿದ್ದೀನಿ. ನನಗೂ ಅವ್ರ ಮೇಲೆ ಬಹಳ ಗೌರವ ಇದೆ.. ಸಾರಿ ಸಾರಿ ಸಾರಿ.." ಎಂದು ಆರ್ಯವರ್ಧನ್ ಹೇಳಿದ್ದಾರೆ.
ಸದ್ಯ ಸುದೀಪ್ 'ಮಾರ್ಕ್' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಕನ್ನಡ ಬಳಿಕ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ತೆಲುಗು, ತಮಿಳು ಪ್ರೇಕ್ಷಕರ ಮುಂದೆ ಸಿನಿಮಾ ಹೋಗಿದೆ. ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗಾಗಲೇ ಸಿನಿಮಾ 23.75 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. 2ನೇ ವಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ನೋಡಿದ್ದರು. ಮುಂದೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಮನಸ್ಸು ಮಾಡಿದ್ದಾರೆ. 2024ರ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್ ನಟಿಸಿದ 'ಮ್ಯಾಕ್ಸ್' ಸಿನಿಮಾ ಬಂದು ಗೆದ್ದಿತ್ತು. ಇದೀಗ ಮತ್ತೆ ಕ್ರಿಸ್ಮಸ್ ಹಬ್ಬದ ಸಡಗರದಲ್ಲೇ 'ಮಾರ್ಕ್' ಸಿನಿಮಾ ಬಂದು ಸದ್ದು ಮಾಡ್ತಿದೆ.


Click it and Unblock the Notifications











