'ಕಾಟೇರ' ಸಿನಿಮಾ ನೋಡಲು ಮೈಸೂರಿನ ಆ ಕಾಲೇಜು ರಜೆ ಘೋಷಿಸಿದ್ದು ನಿಜವೇ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುವ ಲೆಕ್ಕಾಚಾರ ಶರುವಾಗಿದೆ. ಮುಂದಿನ ದಿನಗಳಲ್ಲಿ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಿಸುವ ಸುಳಿವು ಸಿಗುತ್ತಿದೆ.
ನಟ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇರುವುದು ಗೊತ್ತೇಯಿದೆ. ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಚಿತ್ರವನ್ನು ಅಭಿಮಾನಿಗಳು ಅದ್ಧೂರಿಯಾಗಿಯೇ ಸ್ವಾಗತಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ಸಡಗರ ಮುಗಿಲು ಮುಟ್ಟಿತ್ತು. ಮಧ್ಯರಾತ್ರಿ 12 ಗಂಟೆಗೆ 20ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಪ್ರದರ್ಶನ ಶುರುವಾಯಿತು. ಎಲ್ಲಾ ಕಡೆಯಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. 158 ಥಿಯೇಟರ್ಗಳ ಮುಂದೆ ದರ್ಶನ್ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲೂ ಅಭಿಮಾನಿಗಳ ದರ್ಬಾರ್ ಜೋರಾಗಿದೆ. 'ಕಾಟೇರ' ಸಿನಿಮಾ ಟ್ರೆಂಡಿಂಗ್ನಲ್ಲಿದೆ. ಇನ್ನು ವಿದ್ಯಾರ್ಥಿಗಳು 'ಕಾಟೇರ' ಸಿನಿಮಾ ನೋಡಲು ಮೈಸೂರಿನ ಕಾಲೇಜು ಪ್ರಿನ್ಸಿಪಲ್ ನಾಳೆ(ಡಿಸೆಂಬರ್ 30) ರಜೆ ಘೋಷಿಸಿರುವುದಾಗಿ ಸುಳ್ಳು ಸುದ್ದಿ ವೈರಲ್ ಆಗುತ್ತಿದೆ. ಕಾಲೇಜು ಪ್ರಿನ್ಸಿಪಲ್ ಮೇಲ್ ಮಾಡಿರುವಂತೆ ಫೇಕ್ ಮೇಲ್ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಿನ್ಸಿಪಲ್ ಡಾ. ಬಿ ಸದಾಶಿವೇ ಗೌಡ ಮೇಲ್ ಮಾಡಿರುವಂತೆ ಫೇಕ್ ಫೋಟೊ ವೈರಲ್ ಆಗುತ್ತಿದೆ. "ದರ್ಶನ್ ನಟನೆಯ ಕಾಟೇರ ಸಿನಿಮಾ ಚೆನ್ನಾಗಿದೆ. ರೈತರ ಕುರಿತಾದ ಕಥೆ ಚಿತ್ರದಲ್ಲಿದೆ. ಇಂತಹ ಸಿನಿಮಾ ಎಲ್ಲರೂ ನೋಡಬೇಕು ಹಾಗಾಗಿ ರಜೆ ಕೊಡಿ ಎಂದು ವಿದ್ಯಾರ್ಥಿಯೊಬ್ಬರು ಕೇಳಿದಂತೆ ಅದಕ್ಕೆ ಪ್ರಿನ್ಸಿಪಲ್ ಪ್ರತಿಕ್ರಿಯಿಸಿ ರಜೆ ಕೊಡಲು ಒಪ್ಪಿರುವಂತೆ" ಸ್ಕ್ರೀನ್ ಶಾಟ್ ಸದ್ದು ಮಾಡ್ತಿದೆ. ಈ ಬಗ್ಗೆ ಫಿಲ್ಮಿಬೀಟ್ ಖುದ್ದು ಡಾ. ಬಿ ಸದಾಶಿವೇ ಗೌಡ ಅವರನ್ನು ಸಂಪರ್ಕಿಸಿದಾಗ ಇದು ಸುಳ್ಳು ಸುದ್ದಿ ಎಂದು ಗೊತ್ತಾಗಿದೆ.

"ನಾವು ನಮ್ಮ ಕಾಲೇಜಿಗೆ ಯಾವುದೇ ರಜೆ ಘೋಷಿಸಿಲ್ಲ. ಇದು ಸುಳ್ಳು ಸುದ್ದಿ. ಯಾರೋ ದರ್ಶನ್ ಅಭಿಮಾನಿಗಳು ಇದನ್ನು ಕ್ರಿಯೇಟ್ ಮಾಡಿರಬಹುದು. ನಾನು ಕೂಡಲೇ ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತೇನೆ. ನಾಳೆ ರಜೆ ಇಲ್ಲ ಎಂದು ತಿಳಿಸುತ್ತೇನೆ" ಎಂದು ಡಾ. ಬಿ ಸದಾಶಿವೇ ಗೌಡ ಅವರು ತಿಳಿಸಿದ್ದಾರೆ.
ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಸಿನಿಮಾಗಳು ರಿಲೀಸ್ ಆಗಿದ್ದಾಗ ಇಂಥದ್ದೇ ಸುದ್ದಿಗಳು ಕೇಳಿಬಂದಿತ್ತು. ಬೆಂಗಳೂರು, ಚೆನ್ನೈನ ಕೆಲ ಆಫೀಸ್ಗಳಲ್ಲಿ ಸಿನಿಮಾ ನೋಡಲು ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿರುವುದಾಗಿ ಹೇಳಲಾಗಿತ್ತು.


Click it and Unblock the Notifications











