'ಗಂಧದಗುಡಿ' ಅಮೋಘ ಪ್ರದರ್ಶನ; ಈ ಚಿತ್ರಮಂದಿರಗಳಿಗೆ ಅಶ್ವಿನಿ, ಯುವ ರಾಜ್ಕುಮಾರ್ ಭೇಟಿ

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಅಂತಿಮ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 28ರಂದು ತೆರೆಕಂಡಿದ್ದ ಗಂಧದ ಗುಡಿ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಶಾಲಾ ಮಕ್ಕಳನ್ನು ಶಿಕ್ಷಕರು ಕರೆತಂದು ಗಂಧದ ಗುಡಿ ಚಿತ್ರವನ್ನು ತೋರಿಸುತ್ತಿದ್ದಾರೆ. ರಾಜ್ಯದ ವನ್ಯ ಸಂಪತ್ತನ್ನು ಆಳವಾಗಿ ಗಂಧದ ಗುಡಿ ಚಿತ್ರದಲ್ಲಿ ತೋರಿಸಲಾಗಿದ್ದು ಕಲಿಯುವ ಮಕ್ಕಳು ಗಂಧದ ಗುಡಿ ನೋಡಿ ಕಲಿಯುವುದೂ ಸಹ ಸಾಕಷ್ಟಿದೆ. ಹೀಗಾಗಿಯೇ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಶಾಲಾ ಮಕ್ಕಳಿಂದ ತುಂಬಿದ ಪ್ರದರ್ಶನವನ್ನು ಕಾಣುತ್ತಿದೆ.
ವಿಜಯಪುರದಲ್ಲಿರುವ ಗೌರಿಶಂಕರ ಚಿತ್ರಮಂದಿರದಲ್ಲಿ ಗಂಧದ ಗುಡಿ ಚಿತ್ರವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ತೋರಿಸಲಾಯಿತು, ಇದರ ಬೆನ್ನಲ್ಲೇ ಹಲವಾರು ಶಾಲಾ ಮಕ್ಕಳನ್ನು ಇದೇ ಚಿತ್ರಮಂದಿರಕ್ಕೆ ಕರೆತಂದು ಗಂಧದಗುಡಿ ಚಿತ್ರವನ್ನು ತೋರಿಸಲಾಗುತ್ತಿದೆ. ಇನ್ನು ಇದೇ ಚಿತ್ರಮಂದಿರಕ್ಕೆ ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ಕುಮಾರ್ ನಿನ್ನೆ ( ನವೆಂಬರ್ 5 ) ಭೇಟಿ ನೀಡಿದ್ದಾರೆ. ಪ್ರತಿದಿನ ಐದು ಪ್ರದರ್ಶನಗಳನ್ನು ಗೌರಿಶಂಕರ ಚಿತ್ರಮಂದಿರದಲ್ಲಿ ಗಂಧದಗುಡಿ ಕಾಣುತ್ತಿದ್ದು ತುಂಬು ಪ್ರದರ್ಶನ ಕಾಣುತ್ತಿರುವುದರ ಕುರಿತು ಯುವ ರಾಜ್ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಚಿತ್ರಮಂದಿರ ಮಾತ್ರವಲ್ಲದೇ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಇದೇ ಮಾದರಿಯಲ್ಲಿ ಶಾಲಾ ಮಕ್ಕಳನ್ನು ಕರೆತಂದು ಗಂಧದಗುಡಿ ಚಿತ್ರವನ್ನು ತೋರಿಸಲಾಗುತ್ತಿದೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿಯೂ ಸಹ ಗಂಧದ ಗುಡಿ ಚಿತ್ರವನ್ನು ಶಾಲಾ ಮಕ್ಕಳು ವೀಕ್ಷಿಸಿದ್ದ ಚಿತ್ರ ಹಾಗೂ ಫೋಟೊ ವೈರಲ್ ಆಗಿತ್ತು. ಇಲ್ಲಿಯೂ ಸಹ ಫ್ಯಾಮಿಲಿ ಆಡಿಯನ್ಸ್ನಿಂದ ಗಂಧದ ಗುಡಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು 'ಅಪ್ಪು ಯುವಸೇನೆ ಬನಶಂಕರಿ' ತಂಡದವರು ಇಂದು ( ನವೆಂಬರ್ 6 ) ಸಂಜೆ ಆರು ಗಂಟೆಗೆ ಇಲ್ಲಿನ ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಆಗಮಿಸಲಿದ್ದಾರೆ. ಇನ್ನು ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿರುವ ಗಂಧದ ಗುಡಿ ಚಿತ್ರ ಮೊದಲ ವಾರ 23 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ.


Click it and Unblock the Notifications











