ಅರ್ಥಪೂರ್ಣವಾಗಿ ಡಾ ರಾಜ್ ಬರ್ತ್ಡೇ ಆಚರಿಸಿದ ಅಶ್ವಿನಿ ಪುನೀತ್ರಾಜ್ಕುಮಾರ್!
ಏಪ್ರಿಲ್ 24ರಂದು ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಜನ್ಮದಿನ. ಈ ನಿಟ್ಟಿನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಡಾ ರಾಜ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಪರರಿಗೆ ಉಪಕಾರ ಆಗುವಂತೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅಣ್ಣಾವ್ರ0 ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ವಿಶೇಷವಾಗಿ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ ಸಾಮಾಜಿಕ ಕೆಲಸದಲ್ಲಿ ಕೈ ಜೋಡಿಸಿದ್ದಾರೆ.
ಭಾರತಿನಗರ ಸಿಟಿಜನ್ ಫೋರಂವತಿಯಿಂದ ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಮಕ್ಕಳಿಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಪುಸ್ತಕಗಳನ್ನು ಹಂಚಿದ್ದಾರೆ. ಜೊತೆಗೆ ನೆರೆದಿದ್ದ ಎಲ್ಲಾ ಮಕ್ಕಳಿಗೆ ಡಾ ರಾಜ್ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸಿಹಿಯನ್ನು ಕೂಡ ಹಂಚಿದ್ದಾರೆ. ಅಣ್ಣಾವ್ರ 94ನೇ ವರ್ಷದ ಹುಟ್ಟುಹಬ್ಬದಂದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಒಂದು ದಿನ ಮುಂಚಿತವಾಗಿ(ಏಪ್ರಿಲ್ 23)ರಂದು ಅಭಿಮಾನಿಗಳ ಜೊತೆ ಸೇರಿಕೊಂಡು ಅಶ್ವಿನಿ ಪುನೀತ್ ರಾಜ್ಕುಮಾರ್ ಪುಸ್ತಕ ವಿತರಣೆ ಮಾಡಿದ್ದಾರೆ.
ಬಡ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಡಾ. ರಾಜ್ಕುಮಾರ್ ಹುಟ್ಟುಹಬ್ಬವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಸದಾಶಿವನಗರದ ಪುನೀತ್ ನಿವಾಸಕ್ಕೆ ಮಕ್ಕಳನ್ನು ಕರೆಸಿಕೊಂಡಿದ್ದ ಅಶ್ವಿನಿ ಪುನೀತ್ರಾಜ್ಕುಮಾರ್ ಮಕ್ಕಳೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಪುನೀತ್ ಅವರನ್ನು ಕಳೆದುಕೊಂಡ ನೋವಿನ ನಡುವಲ್ಲೂ ಅಶ್ವಿನಿ ಪುನೀತ್ ರಾಜ್ಕುಮಾರ್ ಮಕ್ಕಳೊಂದಿಗೆ ಸಮಯ ಕಳೆದಿದ್ದು ಕಂಡು ಫ್ಯಾನ್ಸ್ ಕೂಡ ಸಂತಸಗೊಂಡಿದ್ದಾರೆ. ಕಳೆದ ವರ್ಷ ಡಾ ರಾಜ್ ಹುಟ್ಟುಹಬ್ಬಕ್ಕೆ ಪುನೀತ್ ರಾಜ್ಕುಮಾರ್ ಸಾಮಾಜಿಕ ಕೆಲಸಗಳನ್ನು ಮಾಡಿದ್ದರು. ಇದೀಗ ಈ ಸಾಮಾಜಿಕ ಕಾರ್ಯವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದುವರೆಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.ನಟ ಸಾರ್ವಭೌಮ ಡಾ. ರಾಜ್ಕುಮಾರ್ ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ರಾಜ್ ಅವರು ಕನ್ನಡಿಗರು ಕಂಡ ಅಪ್ರತಿಮ ನಟ, ಗಾಯಕ. ಸುಮಾರು ಐದು ದಶಕಗಳ ಕಾಲ ಚಿತ್ರರಂಗವನ್ನಾಳಿದ ಡಾ. ರಾಜ್ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಜೊತೆಗೆ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಭಾರತ ಸರ್ಕಾರದ ಮಹೋನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಗಳು ರಾಜ್ ಅವರಿಗೆ ಸಂದಿವೆ. ಇನ್ನು ಕರ್ನಾಟಕ ಸರ್ಕಾರದಿಂದ ʼಕರ್ನಾಟಕ ರತ್ನʼ ಎಂಬ ಬಿರುದಿಗೆ ಭಾಜನರಾಗಿದ್ದರು. 2006 ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಡಾ. ರಾಜ್ಕುಮಾರ್ ಇಹಲೋಕ ತ್ಯಜಿಸಿದರು.

'ಬೇಡರ ಕಣ್ಣಪ್ಪ' ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, 'ಭಕ್ತ ವಿಜಯ', 'ಹರಿಭಕ್ತ', 'ಓಹಿಲೇಶ್ವರ', 'ಭೂಕೈಲಾಸ', 'ಭಕ್ತ ಕನಕದಾಸ', 'ನವಕೋಟಿ ನಾರಾಯಣ'(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. 200 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು. 1960 ರ ದಶಕದಲ್ಲಿ, 'ಕಣ್ತೆರೆದು ನೋಡು', 'ಗಾಳಿಗೋಪುರ', 'ನಂದಾದೀಪ', 'ಸಾಕು ಮಗಳು', 'ನಾಂದಿ' ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, 'ರಣಧೀರ ಕಂಠೀರವ', 'ಕಿತ್ತೂರು ಚೆನ್ನಮ್ಮ', 'ಇಮ್ಮಡಿ ಪುಲಿಕೇಶಿ', 'ಶ್ರೀ ಕೃಷ್ಣದೇವರಾಯ' ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯಿಸಿದ್ದಾರೆ.


Click it and Unblock the Notifications











