'ಗೊಂಬೆ ಹೇಳುತೈತೆ' ಹಾಡು ಕೇಳುತ್ತಾ ದುಃಖ ಉಮ್ಮಳಿಸಿ ಕೈ ಮುಗಿದು ಅಳುತ್ತಾ ಹೊರಟ ಅಶ್ವಿನಿ ಪುನೀತ್ ರಾಜ್ಕುಮಾರ್!
ಅರಮನೆ ಮೈದಾನದಲ್ಲಿ ನಡೆದ 'ಪುನೀತ ಪರ್ವ' ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕಾರ್ಯಕ್ರಮದ ಕೊನೆಗೆ ಡಾ. ರಾಜ್ಕುಮಾರ್ ಕುಟುಂಬ ಸದಸ್ಯರೆಲ್ಲಾ ಸೇರಿ 'ಗೊಂಬೆ ಹೇಳುತೈತೆ' ಹಾಡು ಹಾಡಿದರು. ಗಾಯಕ ವಿಜಯ ಪ್ರಕಾಶ್ ಜೊತೆ ಹಾಡು ಹಾಡುತ್ತಾ ಎಲ್ಲರೂ ಭಾವುಕರಾದರು. ಹಾಡಿನುದ್ದಕ್ಕೂ ಭಾವುಕರಾಗಿ ನಿಂತಿದ್ದ ಅಶ್ವಿನಿ ಪುನೀತ್ ರಾಜ್ಕುಮಾರ್ ಕೊನೆಗೆ ದುಃಖ ತಾಳಲಾರದೇ ಎಲ್ಲರಿಗೂ ಕೈ ಮುಗಿದು ಅಳುತ್ತಾ ವೇದಿಕೆಯಿಂದ ಹೊರಟುಬಿಟ್ಟರು.
ಅಶ್ವಿನಿ ಪುನೀತ್ ರಾಜ್ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಅಪ್ಪು ಅಗಲಿಕೆಯ ದಿನದಿಂದಲೂ ಅಶ್ವಿನಿ ವೇದಿಕೆಗಳಲ್ಲಿ ಮಾತನಾಡಿರಲಿಲ್ಲ. ಒಂದೊಮ್ಮೆ ಮಾತನಾಡಿದರು ಧನ್ಯವಾದ ತಿಳಿಸಿ ಸುಮ್ಮನಾಗಿಬಿಡುತ್ತಿದ್ದರು. ಆದರೆ ತಾವೇ ಮುಂದೆ ನಿಂತು 'ಪುನೀತ ಪರ್ವ' ಕಾರ್ಯಕ್ರಮದ ತಯಾರಿಯನ್ನು ನೋಡಿಕೊಂಡಿದ್ದರು. ಬೆಳಗ್ಗೆ ಅರಮನೆ ಮೈದಾನದಲ್ಲಿ ಸಿದ್ಧತೆಗಳನ್ನೆಲ್ಲಾ ಪರಿಶೀಲಿಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಪಕ್ಕದಲ್ಲಿದ್ದ ಮಾವ, ಅತ್ತೆ ಸಮಾಧಿಗೂ ಪೂಜೆ ಸಲ್ಲಿಸಿ ಬಂದಿದ್ದರು. ಕಾರ್ಯಕ್ರಮದುದ್ದಕ್ಕೂ ಲವಲವಿಕೆಯಿಂದ ಇದ್ದರು. 'ಗಂಧದಗುಡಿ' ಚಿತ್ರಕ್ಕಾಗಿ ಕೆಲಸ ಮಾಡಿದ್ದ ತಂಡದ ಎಲ್ಲರನ್ನು ವೇದಿಕೆಗೆ ಸ್ವಾಗತಿಸಿ ಧನ್ಯವಾದ ತಿಳಿಸಿದ್ದರು. ಆದರೆ ಕೊನೆಗೆ 'ಗೊಂಬೆ ಹೇಳುತೈತೆ' ಹಾಡು ಕೇಳುತ್ತಾ ಕಣ್ಣೀರಾದರು.

ವಿಜಯ ಪ್ರಕಾಶ್ ಜೊತೆಗೆ ಡಾ. ಶಿವರಾಜ್ಕುಮಾರ್ ದಂಪತಿ, ರಾಘವೇಂದ್ರ ರಾಜ್ಕುಮಾರ್ ದಂಪತಿ, ವಿಜಯ್ ರಾಜ್ಕುಮಾರ್, ಯುವ ರಾಜ್ಕುಮಾರ್, ಧೀರೇನ್, ಧನ್ಯಾ ಸೇರದಂತೆ ಅಣ್ಣಾವ್ರ ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರೆಲ್ಲರೂ ವೇದಿಕೆ ಏರಿ 'ಗೊಂಬೆ ಹೇಳುತೈತೆ' ಹಾಡು ಹಾಡಿದರು. ಗಣ್ಯರು, ಅಭಿಮಾನಿಗಳು ಎಲ್ಲರೂ ಎದ್ದು ನಿಂತು ಅಪ್ಪುಗೆ ನಮನ ಸಲ್ಲಿಸಿದರು. ಅಭಿಮಾನಿಗಳು ಅಪ್ಪು ಅಪ್ಪು ಅಪ್ಪು ಎಂದು ಜೈಕಾರ ಹಾಕಿದರು. ಈ ವೇಳೆ ಅಪ್ಪು ನೆನೆದು ಭಾವುಕರಾದ ಅಶ್ವಿನಿ ನೋವು ತಡೆಯಲು ಸಾಧ್ಯವಾಗದೇ ಕಣ್ಣೀರು ಹಾಕುತ್ತಾ ವೇದಿಕೆಯ ಹಿಂಭಾಗಕ್ಕೆ ಹೊರಟುಬಿಟ್ಟರು. ಒಂದು ಕ್ಷಣ ನೆರೆದಿದ್ದ ಎಲ್ಲರಲ್ಲೂ ನೋವು ಆವರಿಸಿಕೊಂಡಿತ್ತು.
ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್ 'ಗಂಧದಗುಡಿ'. ಪುನೀತ್ ರಾಜ್ಕುಮಾರ್ ವಿಶೇಷ ಪ್ರಯತ್ನ ಇದು. ಕರ್ನಾಟಕದ ಅರಣ್ಯ ಸಂಪತ್ತು, ವನ್ಯ ಸಂಕುಲವನ್ನು ಪ್ರಪಂಚಕ್ಕೆ ಪರಿಚಯಿಸಲು ವೈಲ್ಡ್ ಲೈಫ್ ಫೋಟೊಗ್ರಾಫರ್ ಅಮೋಘವರ್ಷ ಜೊತೆ ಸೇರಿ ಅಪ್ಪು ಈ ಡಾಕ್ಯುಮೆಂಟರಿ ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ರಿಲೀಸ್ಗೂ ಮುನ್ನ ಎಲ್ಲರನ್ನು ಬಿಟ್ಟು ಅಪ್ಪು ಹೊರಟುಬಿಟ್ಟರು. ಅವರ ಕನಸನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ನನಸು ಮಾಡುತ್ತಿದ್ದಾರೆ. 'ಗಂಧದಗುಡಿ' ಸಿನಿಮಾ ಪ್ರೀ ರಿಲೀಸ್ ಈವೆಂಟ್ 'ಪುನೀತ ಪರ್ವ' ಹೆಸರಿನಲ್ಲಿ ನೆರವೇರಿದೆ. ಕನ್ನಡ ಚಿತ್ರರಂಗದ ತಾರೆಯರ ಜೊತೆಗೆ ತೆಲುಗು, ತಮಿಳು ಚಿತ್ರರಂಗದ ತಾರೆಯರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಡು, ಡ್ಯಾನ್ಸ್ ಮೂಲಕ ಕಾರ್ಯಕ್ರಮ ಕಳೆಕಟ್ಟಿತ್ತು. ಗಣ್ಯರು ಅಪ್ಪು ನೆನಪುಗಳನ್ನು ಹಂಚಿಕೊಂಡರು.

ಪಿಆರ್ಕೆ ಪ್ರೊಡಕ್ಷನ್ಸ್ ಹಾಗೂ ಮಡ್ ಸ್ಕಿಪರ್ಸ್ ಬ್ಯಾನರ್ನಲ್ಲಿ 'ಗಂಧದಗುಡಿ' ಡಾಕ್ಯು ಡ್ರಾಮಾ ಸಿನಿಮಾ ನಿರ್ಮಾಣವಾಗಿದೆ. ಈ ಚಿತ್ರಕ್ಕಾಗಿ ಪುನೀತ್ ರಾಜ್ಕುಮಾರ್ ಒಂದು ವರ್ಷದ ಕಾಲ ಕರ್ನಾಟದ ಕಾಡು ಮೇಡು ಅಲೆದಾಡಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿದೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಥೇಟ್ ಸಿನಿಮಾ ರೀತಿಯಲ್ಲಿ ಅಕ್ಟೋಬರ್ 28ಕ್ಕೆ ಗಂಧದಗುಡಿ ಡಾಕ್ಯೂಡ್ರಾಮ ತೆರೆಗಪ್ಪಳಿಸಲಿದೆ. ಅಪ್ಪು ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











