ಪುನೀತ್ ರಾಜ್ಕುಮಾರ್: ಮರಣೋತ್ತರ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ ಅಪ್ಪು ಪತ್ನಿ ಅಶ್ವಿನಿ
ಕರ್ನಾಟಕದಲ್ಲಿ ಅಪ್ಪು ಎಂದೇ ಖ್ಯಾತಿ ಪಡೆದ ಸ್ಯಾಂಡಲ್ವುಡ್ನ ಮುತ್ತುರತ್ನ ದಿವಂಗತ ಡಾ. ಪುನೀತ್ ರಾಜ್ಕುಮಾರ್ಗೆ ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಮಂಗಳವಾರ ಮರಣೋತ್ತರ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಮುರುಘಾ ಮಠಾಧೀಶ ಡಾ. ಶಿವಮೂರ್ತಿ ಸ್ವಾಮೀಜಿಗಳು ಸನ್ಮಾನ ಮಾಡಿ ಪ್ರಶಸ್ತಿ ಪ್ರದಾನ ಮಾಡಿದರು.
ಬಾಲನಟ, ನಾಯಕ ನಟ, ಹಿನ್ನಲೆ ಗಾಯಕ, ಅದ್ಬುತ ನೃತ್ಯಗಾರ ಹಾಗೂ ನಿರ್ಮಾಪಕರಾಗಿಯೂ ನಟ ಪುನೀತ್ ರಾಜ್ಕುಮಾರ್ ಸ್ಯಾಂಡಲ್ವುಡ್ಗೆ ಅಪಾರ ಕೊಡುಗೆ ನೀಡಿದ್ದಾರೆ. ಇದರ ಜೊತೆಗೆ ಸಾಮಾಜಿಕ ಜಾಗೃತಿ ಪ್ರಚಾರಕರಾಗಿ ಹಾಗೂ ಅವರ ಸಮಾಜ ಸೇವೆ ಮನೋಭಾವ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪುನೀತ್ ರಾಜ್ ಕುಮಾರ್ಗೆ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ.
ಪುನೀತ್ ರಾಜ್ಕುಮಾರ್ ಕನ್ನಡದ ಕುವರ
"ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ, ಕನ್ನಡದ ಕುವರರು ಯಾರಾದರೂ ಇದ್ದರೆ ಅದು ಪವರ್ ಸ್ಟಾರ್ ಡಾ. ಪುನೀತ್ ರಾಜ್ ಕುಮಾರ್ ಮಾತ್ರ" ಎಂದು ಮುರುಘಾ ಮಠದ ಶ್ರೀಗಳು ಹೇಳಿದ್ದಾರೆ. ರಾಜರತ್ನನ ಪುತ್ರನಾಗಿ ಬಾಲ್ಯದಲ್ಲೇ ಬೆಳ್ಳಿತೆರೆ ಮೇಲೆ ನಟಿಸಿ ಸೈ ಎನಿಸಿಕೊಂಡಿದ್ದ ಪುನೀತ್, ನಟನೆ ಜೊತೆಗೆ ಹಾಡುಗಾರಿಕೆ ನೃತ್ಯದಲ್ಲೂ ಕೂಡ ಹೆಸರಿಗೆ ತಕ್ಕಂತೆ ಇದ್ದ ಪುನೀತ್ ಪ್ರತಿಭಾವಂತ ವ್ಯಕ್ತಿ." ಎಂದು ಪುನೀತ್ ರಾಜ್ ಕುಮಾರ್ ಸಾಧನೆಯನ್ನು ಹಾಡಿಹೊಗಳಿದ್ದಾರೆ.

ಹುಟ್ಟಿನಿಂದಲೇ ನಟನಾ ಶಕ್ತಿಯನ್ನು ಕರಗತ ಮಾಡಿಕೊಂಡಿದ್ದ ಅಪ್ಪು, ಬಾಲ್ಯದಲ್ಲೇ ಬೆಟ್ಟದ ಹೂ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ರಾಜರತ್ನ ಡಾ. ರಾಜ್ ಕುಮಾರ್ ಪುತ್ರರಾದರೂ ಸಹ ಬದುಕಿನ ಉದ್ದಕ್ಕೂ ಸರಳತೆಯಲ್ಲಿ ಜೀವನ ಸಾಗಿಸಿದ್ದರು. ಅಲ್ಲದೆ ಎಷ್ಟೋ ಯುವಕರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು.
ಬಸವ ಜಯಂತಿ ಜೊತೆ ಅಪ್ಪು ಜಯಂತಿ
ಬಸವಶ್ರೀ ಪ್ರಶಸ್ತಿಗೆ ಇಂದು ಒಂದು ಸಾರ್ಥಕತೆ ಸಿಕ್ಕಿದೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. "ಸಚಿವರು ಪುನೀತ್ ಜೊತೆಗೆ ಕಳೆದ ಹಲವು ನೆನಪುಗಳನ್ನು ಹಂಚಿಕೊಂಡರು. ಅವರ ಸರಳತೆ, ಮಾನವೀಯ ಗುಣಗಳಿಗೆ ಯಾರೂ ಸರಿಸಾಟಿಯಿಲ್ಲ. ಅವರು ಇಂದಿಗೂ ಇಲ್ಲ ಎಂದಿಗೂ ಊಹಿಸಲು ಸಾಧ್ಯವಿಲ್ಲ. ಇವತ್ತಿಗೂ ಕೂಡ ಯಾವುದೇ ಹಳ್ಳಿಗಳಿಗೆ ಹೋದರೂ ಸಹ ಪುನೀತ್ ಭಾವಚಿತ್ರ ಇದ್ದೇ ಇರುತ್ತದೆ ಅಷ್ಟು ಅಚ್ಚಾಗಿ ಕನ್ನಡಿಗರ ಮನಸ್ಸಲ್ಲಿ ಅಪ್ಪು ಉಳಿದುಕೊಂಡಿದ್ದಾರೆ. ಇಂದು ಕೂಡ ಬಸವ ಜಯಂತಿ ಆಚರಣೆ ನಾಡಿನಾದ್ಯಂತ ಮಾಡಲಾಗುತ್ತಿದೆ. ಎಲ್ಲಡೆ ಬಸವ ಚಿತ್ರದ ಭಾವಚಿತ್ರದ ಜೊತೆ ಅಪ್ಪು ಭಾವಚಿತ್ರವನ್ನು ಕೂಡ ಹಾಕಲಾಗಿದೆ. ಆ ಮಟ್ಟಿಗೆ ಅಪ್ಪುವಿನ ಮೇಲೆ ಜನರು ಅಭಿಮಾನ ಇಟ್ಟಿದ್ದಾರೆ. ರಾಜ್ ಕುಟುಂಬಸ್ಥರಿಗೆ ಅಪ್ಪು ಇಲ್ಲ ಎಂಬ ನೋವನ್ನು ಭರಿಸುವ ಶಕ್ತಿ ಭಗವಂತ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ." ಎಂದು ಸಚಿವ ಬಿಸಿ ಪಾಟೀಲ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅಪ್ಪು ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂದು ಇಡೀ ಕರುನಾಡಿಗೆ ಕರಾಳ ದಿನವಾಗಿತ್ತು. ಯಾರೂ ಊಹಿಸಲಾಗದ ಆ ಒಂದು ಘಟನೆ ಇಡೀ ಕರುನಾಡನ್ನೇ ಬೆಚ್ಚಿ ಬೀಳಿಸಿತ್ತು. ಅಗಲಿದ ಅಪ್ಪುವನ್ನು ನೆನದು ಲಕ್ಷಾಂತರ ಜನರು ಕಣ್ಣೀರ ಧಾರೆ ಹರಿಸಿದ್ದರು. ಅವರ ಸರಳ, ಸಜ್ಜನಿಕೆಯನ್ನು ಇಡೀ ನಾಡಿನ ಜನರು ಹಾಡಿ ಹೊಗಳಿದ್ದರು. ಬಾಲ್ಯದಿಂದಲೇ ಅಣ್ಣಾವ್ರ ಜೊತೆ ನಟನೆ ಮಾಡುತ್ತಿದ್ದ ಅಪ್ಪು, ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಯಶಸ್ಸು ಕಂಡಿದ್ದರು. ಬಳಿಕ ನಾಯಕನಟನಾಗಿ ಕರುನಾಡಿಗೆ ಅಪ್ಪು ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಅಪ್ಪು ಎಲ್ಲರ ಮನೆ ಮನಗಳಲ್ಲಿ ಅಜಾರಾಮರವಾಗಿ ಉಳಿದು ಹೋಗಿದ್ದಾರೆ.


Click it and Unblock the Notifications











