ನಿಮ್ಮಿಬ್ಬರ ಸಮಸ್ಯೆ ಯಾವಾಗ ಬಗೆ ಹರಿಸಿಕೊಳ್ಳುತ್ತೀರಾ? ಅಭಿಮಾನಿ ಪ್ರಶ್ನೆಗೆ ಕಿಚ್ಚನ ಉತ್ತರ ಏನು?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಜೊತೆಗೆ ಬಿಗ್ಬಾಸ್ ಕನ್ನಡ ಸೀಸನ್ 10 ಶೋ ಮುಗಿಸಿದ್ದಾರೆ. ಕಾರ್ತಿಕ್ ಮಹೇಶ್ ಈ ಬಾರಿ ವಿಜೇತರಾಗಿದ್ದಾರೆ. ತಮ್ಮ ವಿಭಿನ್ನ ನಿರೂಪಣೆಯಿಂದ 10ನೇ ಬಾರಿ ಶೋ ಯಶಸ್ವಿಯಾಗಿ ನಡೆಸಿಕೊಟ್ಟು ಸುದೀಪ್ ಮೋಡಿ ಮಾಡಿದರು.
ಬಿಗ್ಬಾಸ್ 10 ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಸುದೀಪ್ಗೆ ನಿರೂಪಣೆ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಕಿಚ್ಚನ 10 ವರ್ಷಗಳ ಬಿಗ್ಬಾಸ್ ಜರ್ನಿಯ ಸ್ಪೆಷಲ್ ಝಲಕ್ ಕೂಡ ಪ್ಲೇ ಮಾಡಲಾಯಿತು. ಶನಿವಾರದಿಂದಲೇ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಆರಂಭವಾಗಿತ್ತು. ಹಲವು ಗಂಟೆಗಳ ಕಾಲ ವೇದಿಕೆ ಮೇಲೆ ನಿಂತಿದ್ದ ಕಿಚ್ಚ ಈಗ ರಿಲ್ಯಾಕ್ಸ್ ಆಗಿದ್ದಾರೆ.

ಸದ್ಯ ಬಿಗ್ಬಾಸ್ ಶೋ ಮುಗಿಸಿ ರಿಲ್ಯಾಕ್ಸ್ ಮೋಡ್ನಲ್ಲಿರುವ ಸುದೀಪ್ ಟ್ವಿಟ್ಟರ್ನಲ್ಲಿ AskKichcha ಸೆಷನ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಬಗ್ಗೆ ಅಭಿಮಾನಿಗಳು ಕೇಳಿದ ಎರಡು ಪ್ರಶ್ನೆಗಳಿಗೂ ಸುದೀಪ್ ಉತ್ತರಿಸಿದ್ದಾರೆ.
ಅಭಿಮಾನಿಯೊಬ್ಬರು ಸರ್, "ನಿಮ್ಮ ಹಾಗೂ ದರ್ಶನ್ ಅವರ ನಡುವಿನ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ಳುತ್ತೀರಾ? ಇನ್ನು ಎಷ್ಟು ಸಮಯ ತಗೋತ್ತೀರಾ?" ಎಂದು ಕೇಳಿದ್ದಾರೆ. ಇದಕ್ಕೆ ರಿಪ್ಲೇ ಮಾಡಿರುವ ಸುದೀಪ್, "ಸಮಸ್ಯೆ ಏನು ಅಂತ ಇಬ್ಬರೂ ಹುಡುಕುತ್ತಾ ಇದ್ದೀವಿ" ಎಂದು ನಗುವ ಎಮೋಜಿ ಹಾಕಿದ್ದಾರೆ.
ಮತ್ತೊಬ್ಬ ಅಭಿಮಾನಿ "ದರ್ಶನ್ ಬಗ್ಗೆ ಒಂದು ಪದದಲ್ಲಿ ಹೇಳಿ" ಎಂದು ಕೇಳಿದ್ದಾರೆ. ಅದಕ್ಕೆ ಸುದೀಪ್ "ಆತನಿಗೆ ಸದಾ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ" ಎಂದು ಬರೆದಿದ್ದಾರೆ. ಒಂದ್ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಒಂದು ದಿನ ಇದ್ದಕ್ಕಿದಂತೆ ದರ್ಶನ್ ಟ್ವೀಟ್ ಮಾಡಿ ಇನ್ನು ಮುಂದೆ ನಾನು ಸುದೀಪ್ ಸ್ನೇಹಿತರಲ್ಲ ಎಂದು ಘೋಷಿಸಿಬಿಟ್ಟರು. ಬಳಿಕ ಇಬ್ಬರೂ ಎಂದೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಪರಸ್ಪರ ಅಂತರ ಕಾಯ್ದುಕೊಂಡೇ ಬಂದಿದ್ದರು. ಆದರೆ ಸುದೀಪ್ ಮಾತ್ರ ದರ್ಶನ್ ಕಡೆ ಸ್ನೇಹದ ಹಸ್ತ ಚಾಚುತ್ತಲೇ ಇದ್ದಾರೆ.
ಅಂದು ಟ್ವೀಟ್ ಮಾಡಿದ ಬಳಿಕ ದರ್ಶನ್ ಮಾತ್ರ ಸುದೀಪ್ ಬಗ್ಗೆ ಮಾತನಾಡಲೇ ಇಲ್ಲ. ನೇರವಾಗಿ ಇಬ್ಬರ ಸ್ನೇಹದ ಬಗ್ಗೆ ಪ್ರಶ್ನೆ ಎದುರಾದ ಸಮಯದಲ್ಲೂ ಗರಂ ಆಗಿದ್ದರು. ಆದರೆ ಸುದೀಪ್ ಸಾಕಷ್ಟು ಬಾರಿ ದರ್ಶನ್ ಕುರಿತು ಮಾತನಾಡಿದ್ದಾರೆ. ಟ್ವಿಟ್ಟರ್ನಲ್ಲಿ ದರ್ಶನ್ ಕುರಿತಾದ ವಿಚಾರಗಳಿಗೆ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದಾಗ ಬೇಗ ಗುಣಮುಖ ಆಗುವಂತೆ ಹಾರೈಸಿದ್ದರು.
ಇನ್ನು ಕೆಲ ದಿನಗಳ ಹಿಂದೆ ಹೊಸಪೇಟೆಯಲ್ಲಿ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ತೂರಿದಾಗ ಸುದೀಪ್ ಸ್ನೇಹಿತನ ಬೆಂಬಲಕ್ಕೆ ನಿಂತಿದ್ದರು. ಆಗ ಸುದೀಪ್ ಬೆಂಬಲಕ್ಕೆ ದರ್ಶನ್ ಕೂಡ ಧನ್ಯವಾದ ತಿಳಿಸಿದ್ದರು. ಅದನ್ನು ನೋಡಿ ಇಬ್ಬರು ಬೇಗ ಒಂದಾಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಇನ್ನು ಕೊನೆಯದಾಗಿ ಕಳೆದ ವರ್ಷ ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರೂ ಭಾಗವಹಿಸಿದ್ದರು. ಆದರೆ ಮಾತನಾಡಲಿಲ್ಲ.

ಅಂದು ಇವರಿಬ್ಬರನ್ನು ಸುಮಲತಾ ಅಂಬರೀಶ್ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಅಂದು ಇಬ್ಬರು ಮುಖಾಮುಖಿ ಕೂಡ ಆಗಿದ್ದರು. ಎಲ್ಲಾ ಮರೆತು ಮತ್ತೆ ಕೈ ಕುಲುಕುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂತಹ ಮ್ಯಾಜಿಕ್ ನಡೆಯಲೇಯಿಲ್ಲ. ಬಳಿಕ ಕೂಡ ಈ ಬಗ್ಗೆ ಸುದೀಪ್ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಸಮಯ ಬಂದಾಗ ಎಲ್ಲಾ ಸರಿ ಹೋಗುತ್ತದೆ ಎಂದಿದ್ದರು. ಸದ್ಯ ಸ್ನೇಹಿತನ ಬಗ್ಗೆ ಸುದೀಪ್ ಈಗ ಮಾತನಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.


Click it and Unblock the Notifications











