Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿ ಮೇಕಿಂಗ್ ಆಫ್ ಅಶೋಕ
ಪುಸ್ತಕವನ್ನು ರಾಷ್ಟ್ರಪತಿಗಳು ಮುಂದಿನ ವಾರ ಬಿಡುಗಡೆ ಮಾಡಲಿದ್ದಾರೆ. ಉತ್ಸಾಹೀ ಯುವ ಪತ್ರಕರ್ತ ಹಾಗೂ ಸಿನಿಮಾಗಳಿಗೆ ಕತೆ- ಸಂಭಾಷಣೆ ಬರೆದು ಸೈ ಎನಿಸಿಕೊಂಡಿರುವ ಮುಷ್ತಾಕ್ ಶೇಕ್, ಸಿನಿಮಾ ಕತೆಯ ಜವಾಬ್ದಾರಿ ಜೊತೆಗೆ ಪುಸ್ತಕದ ಹೊಣೆಯನ್ನೂ ಹೊತ್ತಿದ್ದರು. ಅವರ ಮೊಗದಲ್ಲೀಗ ದೊಡ್ಡ ನಗೆ. ಮಾಡಿರುವ ಕೆಲಸ ಮುಗಿದಿದೆ. ಫಲಿತಾಂಶದ ನಿರೀಕ್ಷೆ ಕಣ್ಣಲ್ಲಿ ಮನೆಮಾಡಿದೆ.
ಸ್ಟಾರ್ ಟಿವಿಗೆ ಕೊಟ್ಟ ಸಂದರ್ಶನದಲ್ಲಿ ಪುಸ್ತಕದ ಬಗ್ಗೆ ಶೇಕ್ ಮಾತಾಡಿದರು- 'ದೇವಾನಾಂಪ್ರಿಯ ಅಶೋಕ ಎಲ್ಲರಿಗೂ ಗೊತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಗೊತ್ತಿರಲಿಕ್ಕಿಲ್ಲ. ಒಬ್ಬ ವ್ಯಕ್ತಿಯ ಚರಿತ್ರೆಯ ಬೆನ್ನೇರಿ ಹೊರಟಾಗ ದಕ್ಕುವುದು ಅಷ್ಟಿಷ್ಟಲ್ಲ. ಸಾಕಷ್ಟು ಪುಸ್ತಕಗಳನ್ನು ಓದಿ, ನಾನು ತಲೆಗೆ ತುಂಬಿಕೊಂಡದ್ದನ್ನು ಚಕ್ಕಳ ಮಕ್ಕಳ ಹಾಕಿ ಕತೆ ಹೇಳುವಂತೆ ಭಟ್ಟಿ ಇಳಿಸಬೇಕು. ಅಶೋಕ ಅಷ್ಟು ಸಲೀಸಲ್ಲ. ನನ್ನ ಜೀವಮಾನದ ದೊಡ್ಡ ಛಾಲೆಂಜ್ ಇದಾಗಿತ್ತು. ಸಾಕಷ್ಟು ಮುದದ ಕ್ಷಣಗಳು ಪುಸ್ತಕದಲ್ಲಿ ಉಂಟು'.
ಐತಿಹಾಸಿಕ, ಪೌರಾಣಿಕ. ಈ ಪೈಕಿ ಅಶೋಕ ಯಾವ ಕೆಟಗರಿಗೆ ಸೇರುತ್ತದೆ? ಶಾರುಖ್ ಖಾನ್ ಸಣ್ಣಗೆ ತಲೆಕೆರೆದು ಉತ್ತರಿಸಿದ್ದು, 'ಇದೊಂದು ಸಾಮಾನ್ಯ ಬಾಲಿವುಡ್ ಸಿನಿಮಾಗೂ ಮೀರಿದ ಮನರಂಜನಾ ಚಿತ್ರ. ಜನಕ್ಕೆ ಹೊಸತನ್ನು ಕೊಡಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಟ್ರೆಂಡ್ಮೇಕರ್ ಆಗುತ್ತದೋ ಬಿಡುತ್ತದೋ. ಆದರೆ, ಅಶೋಕ ಜನರನ್ನು ಖಂಡಿತ ಮುಟ್ಟುತ್ತಾನೆ ಅನ್ನುವ ವಿಶ್ವಾಸ ನಮ್ಮದು'.
ಪುಸ್ತಕ ಚಿತ್ರ ಬಿಡುಗಡೆಯಾಗುವ ಎಲ್ಲಾ ಥಿಯೇಟರ್ಗಳಲ್ಲಿ ದೊರೆಯಲಿದೆ. ತಾರೆಯರ ಸಂದರ್ಶನ, ಸಿನಿಮಾದ ವಸ್ತು ಅಶೋಕ ಹೇಗಾಯಿತು? ಸೆಟ್ಗಳಲ್ಲಿ ಕಳೆದ ಮುದ ಕೊಡುವ ಮಧುರ ಕ್ಷಣಗಳು ಹೇಗಿದ್ದವು? ಇವೆಲ್ಲವುಗಳ ಜೊತೆಗೆ ಅಶೋಕನ ಇತಿ ವೃತ್ತಾಂತದ ಕಿರು ಪರಿಚಯವೂ ಪುಸ್ತಕದಲ್ಲುಂಟು.
ಶಾರುಖ್ ಖಾನ್ ನಿರ್ಮಾಣ ಸಂಸ್ಥೆಯ ಪಾಲುದಾರರಾದ ನಟಿ ಜ್ಯೂಹಿ ಪ್ರಕಾರ ಇದೊಂದು ಒಳ್ಳೆ ಯೋಜನೆ. ಸಿನಿಮಾ ಹಾಗೂ ಪುಸ್ತಕ ಒಂದಕ್ಕೊಂದು ಪೂರಕವಾಗಿರುತ್ತವೆ. ಸಿನಿಮಾ ನೋಡಿದ ನಂತರ ಅದನ್ನು ಮೆಚ್ಚುವ ಪ್ರೇಕ್ಷಕನಿಗೆ ಹಸಿವು ಹೆಚ್ಚಿ, ಪುಸ್ತಕ ಕೊಳ್ಳಲು ಮುಂದಾಗಬಹುದು. ಪುಸ್ತಕ ಓದಿ, ಉತ್ಸಾಹ ಕೆರಳಿ ಸಿನಿಮಾ ನೋಡಬಹುದು. ಎಲ್ಲಕ್ಕೂ ಮೀರಿ ಸಿನಿಮಾ ನಿರ್ಮಾಣದ ಅಮೃತ ಘಳಿಗೆಗಳು ಸದಾ ಹಸುರಾಗಿರುತ್ತವೆ.
ಶಾರುಖ್ ಐಡಿಯಾ ಇದೀಗ ಹೊಸ ಟ್ರೆಂಡ್ : ಶಾರುಖ್ ಖಾನ್ ಅವರ ಈ ಐಡಿಯಾ ಈಗಾಗಲೇ ಬಾಲಿವುಡ್ನ್ನು ಆವರಿಸಿಕೊಳ್ಳುತ್ತಿದೆ. ಪೈಪ್ಲೈನ್ನಲ್ಲಿರುವ ದೇವದಾಸ್ ಹಾಗೂ ಕರಣ್ ಜೋಹರ್ ನಿರ್ದೇಶನದ ಕಭಿ ಖುಷಿ ಕಭಿ ಗಮ್ ಚಿತ್ರಗಳ ಶೂಟಿಂಗ್ ಶಾಂದಾರ್ ಘಳಿಗೆಗಳಿಗೆ ಪುಸ್ತಕದ ರೂಪು ಕೊಡುವ ಕೆಲಸ ನಡೆಯುತ್ತಿದೆ. ಬಾಲಿವುಡ್ ಚಿತ್ರೀಕರಣದ ಸಿಹಿ- ಕಹಿ ಕ್ಷಣಗಳನ್ನು ಬೇಕೆನಿಸಿದಾಗ ಓದುವ ಭಾಗ್ಯ ವೀಕ್ಷಕನಿಗೆ ಸಲ್ಲುತ್ತಿರುವುದು ಖಂಡಿತ ಸ್ವಾಗತಾರ್ಹ. ಸ್ವಲ್ಪ ತಡೆಯಿರಿ, ಮೇಕಿಂಗ್ ಆಫ್ ಅಶೋಕ ಪುಸ್ತಕದ ಕಾಫಿ ಟೇಬಲ್ ಪ್ರತಿಯ ದರ 995 ರುಪಾಯಿ ! ಶಾರುಖ್, ನಿಮ್ಮ ಪುಸ್ತಕ ತುಂಬಾ ದುಬಾರಿಯಾಯಿತಲ್ಲವೇ? ಇಷ್ಟು ಮೊತ್ತಕ್ಕೆ ಹದಿನೈದು ಇಪ್ಪತ್ತು ಸಿನಿಮಾ ನೋಡಬಹುದಲ್ಲ ಮಿ. ಖಾನ್?