ಚುನಾವಣೆ ನೀತಿ ಉಲ್ಲಂಘಿಸಿಲ್ಲ : ದಿವ್ಯ ಸ್ಪಂದನ

ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ನಡೆಸಿ ವಿವಾದಕ್ಕೂ ಸಿಲುಕಿದ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ-2ಯಲ್ಲಿ ಮತದಾನದ ವೇಳೆ ಕೂಡಾ ಕಿರಿಕ್ ಮಾಡಿಕೊಂಡಿದ್ದಾರೆ. ಆದರೆ, ಚುನಾವಣೆ ನೀತಿ ಉಲ್ಲಂಘಿಸಿಲ್ಲ ಎಂದು ರಮ್ಯಾ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಮರ್ಥಿಸಿಕೊಂಡಿದ್ದಾರೆ.
ನನ್ನ ಮತಗಟ್ಟೆ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಕೆಲವೇ ಸೆಕೆಂಡುಗಳ ಕಾಲ ಫೋನ್ ಮಾಡಿದೆ. ಯಾವ ಪಟ್ಟಿ, ಯಾವ ಬೂತ್ ಎಲ್ಲಿ ಮತ ಮಾಡುವುದು ಎಂದು ಗೊಂದಲವಾಗಿತ್ತು. ಅಲ್ಲಿನ ಅಧಿಕಾರಿಗಳಿಗೂ ಮಾಹಿತಿ ಇರಲಿಲ್ಲ. ಹೀಗಾಗಿ ಅಧಿಕಾರಿಯ ಸಮ್ಮುಖದಲ್ಲೇ ಈ ಬಗ್ಗೆ ಪಟ್ಟಿ ಇಟ್ಟುಕೊಂಡು ಹೊರಗಿದ್ದ ಕಾರ್ಯಕರ್ತರಿಗೆ ಕರೆ ಮಾಡಿದೆ ಅಷ್ಟೇ ಎಂದು ರಮ್ಯಾ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಮರ್ಥನೆ ನೀಡಿರುವ ಟ್ವೀಟ್ ಗಳನ್ನು ಕೆಳಗೆ ನೋಡಿ
ಚುನಾವಣಾ ಆಯೋಗದ ನಿಯಮ ಏನು ಹೇಳುತ್ತದೆ?: ಆಯೋಗದ ನಿಯಮದ ಪ್ರಕಾರ, ಮತದಾರ ಬೂತ್ ನೊಳಗೆ ಪ್ರವೇಶಿಸಿದ ನಂತರ ತಮ್ಮ ಮೊಬೈಲ್ ಫೋನ್ ನಿಷ್ಕ್ರಿಯಗೊಳಿಸಬೇಕು. ಅಲ್ಲದೆ ಮತಗಟ್ಟೆಯಿಂದ ಸುಮಾರು 100 ಮೀ ದೂರದ ಸುತ್ತಳತೆ ಪ್ರದೇಶದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ.
ಸದಾಶಿವ ನಗರದ ಮತಗಟ್ಟೆ 135ರಲ್ಲಿ ಡಾ. ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್, ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರ ಪತ್ನಿ, ಪುತ್ರ ಇನ್ನಿತರ ಕುಟುಂಬ ಸದಸ್ಯರು ಒಟ್ಟಿಗೆ ಹೋಗಿ ಮತ ಚಲಾಯಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಕುಟುಂಬ ಬ್ಯಾಟರಾಯನಪುರದಲ್ಲಿ ಮತದಾನ ಮಾಡಿದ್ದಾರೆ.
ಚುನಾವಣಾ ಆಯೋಗದ ರಾಯಭಾರಿಯಾಗಿರುವ ಪುನೀತ್ ರಾಜ್ ಕುಮಾರ್ ಸದ್ಯ ಊರಲ್ಲಿ ಇಲ್ಲ. ವಿದೇಶಿ ಪ್ರವಾಸದಲ್ಲಿದ್ದಾರೆ.ಸಾಮಾನ್ಯವಾಗಿ ಡಾ.ರಾಜ್ ಕುಟುಂಬ ಬೆಳ್ಳಗ್ಗೆ ಎಲ್ಲರಿಗಿಂತ ಮುಂಚಿತವಾಗಿ ವೋಟ್ ಮಾಡುತ್ತಿದ್ದರು. ಈ ಬಾರಿ ಸ್ವಲ್ಪ ತಡವಾಗಿ ವೋಟ್ ಮಾಡಿದ್ದು ವಿಶೇಷ.
ಉಳಿದಂತೆ, ಪುನೀತ್ ರಂತೆ ಚುನಾವಣಾ ಆಯೋಗದ ರಾಯಭಾರಿಯಾಗಿರುವ ರಮೇಶ್ ಅರವಿಂದ್ ಅವರು ಸಪತ್ನಿ ಸಮೇತ ವೋಟ್ ಮಾಡಿ ಬಂದಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್, ಬಿಎಂಟಿಸಿ ಉಪಾಧ್ಯಕ್ಷ ಜಗ್ಗೇಶ್, ದೊಡ್ಡ ಅರಸಿಕೆರೆಯಲ್ಲಿ ನಟ, ಮಂಡ್ಯ ನಗರ ಕ್ಷೇತ್ರದ ಅಭ್ಯರ್ಥಿ ಅಂಬರೀಷ್, ಮಲ್ಲೇಶ್ವರಂನಲ್ಲಿ ರಾಧಿಕಾ ಪಂಡಿತ್, ಜೆಡಿಎಸ್ ಸೇರಿರುವ ರಕ್ಷಿತಾ, ಬಿಜೆಪಿ ನಾಯಕಿ ತಾರಾ, ಸೊರಬದ ಕುಬಟೂರಿನಲ್ಲಿ ಮಧು ಬಂಗಾರಪ್ಪ ಹಾಗೂ ಕುಮಾರ್ ಬಂಗಾರಪ್ಪ ಕುಟುಂಬದವರು ಮತದಾನ ಮಾಡಿದ್ದಾರೆ.
ಕತ್ರಿಗುಪ್ಪೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಪತ್ನಿ ಪ್ರಿಯಾಂಕಾ ಅವರ ಜೊತೆಗೆ ಬಂದು ಮತದಾನ ಮಾಡಿದರು. ನಂತರ ಎಲ್ಲರೂ ಮತದಾನ ಮಾಡಲೇಬೇಕು. ನಿಮ್ಮ ವೋಟ್ ವೇಸ್ಟ್ ಮಾಡಬೇಡಿ. ಒಂದು ಪಕ್ಷಕ್ಕೆ ಮೆಜಾರಿಟಿ ಸಿಗಬೇಕು ಎಂಬ ಆಸೆಯಿದೆ ಎಂದರು.ಇನ್ನಷ್ಟು ಅಪ್ಡೇಟ್ ನಿರೀಕ್ಷಿಸಿ...


Click it and Unblock the Notifications











