2029ರಲ್ಲಿ ರೇಣುಕಾಸ್ವಾಮಿ ಪ್ರಕರಣದಿಂದ ದರ್ಶನ್ ಖುಲಾಸೆಯಾಗಿ ಚುನಾವಣೆಗೆ ಸ್ಪರ್ಧೆ- ಖ್ಯಾತ ಜ್ಯೋತಿಷಿ ಭವಿಷ್ಯ
ನಟ ದರ್ಶನ್ & ಗ್ಯಾಂಗ್ ವಿರುದ್ಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ದೋಷಾರೋಪ ಹೊರಿಸಿದ್ದು ರೇಣುಕಾಸ್ವಾಮಿ ಕೇಸ್ ಮಹತ್ವದ ಘಟ್ಟ ತಲುಪಿದೆ. ಮೊನ್ನೆ(ನವೆಂಬರ್ 3) 17 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ದೋಷಾರೋಪ ಪ್ರಕ್ರಿಯೆಯಲ್ಲಿ ಭಾಗಿ ಆಗಿದ್ದರು. ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಲಾಗಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮೇಲಿನ ಆರೋಪ ಸಾಬೀತಾಗುತ್ತಾ? ಶಿಕ್ಷೆ ಗುರಿಯಾಗುತ್ತಾರಾ? ಎನ್ನುವ ಚರ್ಚೆ ಮುಂದುವರೆದಿದೆ. ಪ್ರಕರಣದಲ್ಲಿ ದರ್ಶನ್ಗೆ ಶಿಕ್ಷೆ ಆಗುವುದು ಕಷ್ಟ ಎಂದು ಕೆಲ ವಕೀಲರು, ಮಾಜಿ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ದರ್ಶನ್ಗೆ ಶಿಕ್ಷೆ ಆಗಬಹುದು, ಸದ್ಯಕ್ಕಂತೂ ಜಾಮೀನು ಸಿಗಲ್ಲ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. ಇದೆಲ್ಲದರ ನಡುವೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಈ ಪ್ರಕರಣದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಪ್ರಶಾಂತ್ ಕಿಣಿ ಅವರು ಈ ಹಿಂದೆ ನುಡಿದಿದ್ದ ಕೆಲ ಭವಿಷ್ಯ ನಿಜವಾಗಿತ್ತು. ಹಾಗಾಗಿ ಕೆಲವರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಟ್ವಿಟರ್ನಲ್ಲಿ ಅವರು ಆಕ್ಟೀವ್ ಆಗಿದ್ದು ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿರುತ್ತಾರೆ. ದರ್ಶನ್ ಸರ್ ಕೇಸ್ ಬಗ್ಗೆ ಹೇಳಿ ಎಂದು ಅಭಿಮಾನಿಯೊಬ್ಬರು ಕೇಳಿದ್ದರು ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಣಿ ಅವರು "ದರ್ಶನ್ಗೆ ಜಾಮೀನು ಸಿಗುತ್ತದೆ. ರೇಣುಕಸ್ವಾಮಿ ಪ್ರಕರಣದಿಂದ ದರ್ಶನ್ 2029ರಲ್ಲಿ ಖುಲಾಸೆಗೊಳ್ಳಲಿದ್ದಾರೆ. ದರ್ಶನ್ ಮಂಡ್ಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ" ಎಂದು ರಿಪ್ಲೇ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ "ರೇಣುಕಸ್ವಾಮಿಯನ್ನು ಕೊಂದವರು ಯಾರು ಎಂದು ನ್ಯಾಯಾಲಯ ನಿರ್ಧರಿಸುತ್ತದೆ. ದರ್ಶನ್ ಅಪರಾಧದಲ್ಲಿ ಭಾಗಿಯಾಗಿದ್ದರೆ ಶಿಕ್ಷೆಯಾಗುತ್ತದೆ. ಇಲ್ಲದಿದ್ದರೆ ಬಿಡುಗಡೆ ಆಗುತ್ತಾರೆ. ನ್ಯಾಯಾಲಯಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಆತನನ್ನು ಕೊಲೆಗಾರ ಎಂದು ಕರೆಯುವ ಹಕ್ಕಿಲ್ಲ" ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಕೂಡ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪ್ರಶಾಂತ್ ಕಿಣಿ ಟ್ವೀಟ್ ಮಾಡಿದ್ದರು. "ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಗೆಲುವಿನಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಚಾಲೆಂಜಿಂಗ್ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ದರ್ಶನ್ ಕಾರಣ ಸುಮಲತಾ ಮಂಡ್ಯ ಗೆದ್ದರು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ ನಂತರ ಸುಮಲತಾ ಅವರನ್ನು ಕೈಬಿಟ್ಟರು. ಮುಂದೆ ದರ್ಶನ್ ಮಂಡ್ಯದಲ್ಲಿ ಸುಮಲತಾ ಅವರನ್ನು ಎದುರಿಸುತ್ತಾರೆ" ಎಂದು ಟ್ವೀಟ್ ಮಾಡಿದ್ದರು.
ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯಾಧೀಶರು ದೋಷಾರೋಪ ಓದಿದ್ದಾಗ ಎಲ್ಲಾ ಆರೋಪಿಗಳು ಅದೆಲ್ಲಾ 'ಸುಳ್ಳು' ಎಂದು ದೋಷಾರೋಪ ನಿರಾಕರಿಸಿದ್ದರು. ಸದ್ಯ ದೋಷಾರೋಪ ನಿಗದಿ ಆಗಿರುವುದರಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಒದಗಿಸಲಿದ್ದಾರೆ. ಅದನ್ನು ಪರಿಶೀಲಿಸಿ ಸಾಕ್ಷಿಗಳಿಗೆ ಕೋರ್ಟ್ ಸಮನ್ಸ್ ನೀಡಲಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಕೂಡ ನ್ಯಾಯಾಲಯ ದಾಖಲಿಸಿಕೊಳ್ಳಲಿದೆ. ಎಫ್ಎಸ್ಎಲ್ ತಜ್ಞರ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲಿದೆ. ಆರೋಪಿಗಳ ಪರ ಸಾಕ್ಷ್ಯ ಇದ್ದರೂ ಹಾಜರುಪಡಿಸಲು ನ್ಯಾಯಾಲಯ ಅವಕಾಶ ಮಾಡಿಕೊಡಲಿದೆ.
ಪ್ರಮುಖ ಸಾಕ್ಷ್ಯಗಳ ಹೇಳಿಕೆ ದಾಖಲಿಸಿಕೊಂಡು ಪಾಟೀಸವಾಲಿಗೆ ಒಳಪಡಿಸಿದ ಬಳಿಕ ದರ್ಶನ್ ಸೇರಿ ಇತರೆ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಹಾಗಾಗಿ ಸದ್ಯಕ್ಕೆ ದರ್ಶನ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗುವುದು ಕಷ್ಟ ಕಷ್ಟ ಎನ್ನುವಂತಾಗಿದೆ.
ಬಹಳ ಗಂಭೀರ ಪ್ರಕರಣ ಇದಾಗಿದ್ದು ಅಷ್ಟು ಸುಲಭಕ್ಕೆ ಮುಗಿಯುವಂಥದ್ದಲ್ಲ. ಮತ್ತೊಂದು ಕಡೆ ಜಾಮೀನು ಅರ್ಜಿ ಪುನರ್ ಪರಿಶೀಲನೆ ನಡೆಸಿ ಎಂದು A1 ಆರೋಪಿ ಪವಿತ್ರಾ ಗೌಡ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ರದ್ದು ಆದೇಶದಲ್ಲಿ ಕೆಲ ತಪ್ಪುಗಳಿದ್ದು ಅದನ್ನು ಪರಿಶೀಲಿಸಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











