ನಟ, ನಿರೂಪಕ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದವರ ಬಂಧನ
ನಟ, ನಿರೂಪಕ ಕಿರಿಕ್ ಕೀರ್ತಿ ಮೇಲೆ ಪಬ್ ಒಂದರಲ್ಲಿ ಹಲ್ಲೆ ಮಾಡಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 02 ರಂದು ಕಿರಿಕ್ ಕೀರ್ತಿ ಹಾಗೂ ಗೆಳೆಯರು ಬೆಂಗಳೂರಿನ ಸದಾಶಿವನಗರದ ಪಬ್ ಒಂದಕ್ಕೆ ಹೋಗಿದ್ದರು. ಆಗ ಕಿರಿಕ್ ಕೀರ್ತಿಯ ಪಕ್ಕದ ಟೇಬಲ್ನಲ್ಲಿದ್ದ ಯುವಕರ ಗುಂಪೊಂದು ಕಿರಿಕ್ ಕೀರ್ತಿ ಮೇಲೆ ಗಲಾಟೆ ಮಾಡಿ ಬಿಯರ್ ಬಾಟಲಿಯಿಂದ ಹೊಡೆದಿದ್ದರು. ಈ ಗಲಾಟೆಯಲ್ಲಿ ಕಿರಿಕ್ ಕೀರ್ತಿಯ ಕೈಗೆ ಪೆಟ್ಟಾಗಿತ್ತು.
ಘಟನೆ ಸಂಬಂಧ ಕಿರಿಕ್ ಕೀರ್ತಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದವ ಆರೋಪಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ.
ಅನಿಲ್, ವಿಜಯ್, ಅಜಯ್ ಎಂಬ ಮೂವರು ಪ್ರಮುಖ ಆರೋಪಿಗಳನ್ನು ಸೇರಿ ಇನ್ನಿಬ್ಬರನ್ನು ಸದಾಶಿವ ನಗರ ಪೊಲೀಸರು ಬಂಧಿಸಿದ್ದಾರೆ. ಅಂದಿನ ಗಲಾಟೆಗೆ ಕಾರಣವೇನೆಂದು ಆರೋಪಿಗಳು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

ಆರೋಪಿ ಹೇಳಿದ್ದೇನು?
ಕಿರಿಕ್ ಕೀರ್ತಿ ಪಕ್ಕದ ಟೇಬಲ್ನಲ್ಲಿ ಕುಳಿತ ಗುಂಪಿನಲ್ಲಿ ಒಬ್ಬ ವ್ಯಕ್ತಿ ತನಗೆ ಕಿರಿಕ್ ಕೀರ್ತಿಯ ಪರಿಚಯ ಇದೆಯೆಂದು ಹೇಳಿದ್ದಾನೆ. ಅದಕ್ಕೆ ಉಳಿದ ಗೆಳೆಯರು ಹಾಗಿದ್ದರೆ ಮಾತನಾಡಿಸು ಎಂದಿದ್ದಾರೆ. ಆಗ ಆ ವ್ಯಕ್ತಿ ಕಿರಿಕ್ ಕೀರ್ತಿ ಬಳಿ ಹೋಗಿ ನಾನು ಯಾರು ಗೊತ್ತಿದೆಯಾ? ಎಂದು ಕೇಳಿದ್ದಾನೆ, ಕಿರಿಕ್ ಕೀರ್ತಿ, ''ನನಗೆ ಗೊತ್ತಿಲ್ಲ'' ಎಂದಿದ್ದಾನೆ. ಆ ಘಟನೆಯನ್ನು ಇನ್ನೊಬ್ಬಾತ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಇದನ್ನು ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದಾಗ ಗಲಾಟೆ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಬಿಯರ್ ಬಾಟಲಿಗಳಿಂದ ಕೀರ್ತಿ ಮೇಲೆ ಹಲ್ಲೆ ಮಾಡಿ ಆ ಗೆಳೆಯರ ಗುಂಪು ಅಲ್ಲಿಂದ ಪರಾರಿಯಾಗಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕಿರಿಕ್
ಇದೇ ವಿಷಯವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕಿರಿಕ್ ಕೀರ್ತಿ, ತಾವು ನಿರ್ಮಾಪಕರೊಬ್ಬರಿಗೆ ಕಾಯುತ್ತಾ ಕುಳಿತಿದ್ದಾಗ ಪಕ್ಕದ ಟೇಬಲ್ನಲ್ಲಿದ್ದ ವ್ಯಕ್ತಿ ಅನುಮತಿ ಪಡೆಯದೆ ಫೊಟೊ ಕ್ಲಿಕ್ಕಿಸಿದ. ತಾನು ಇದನ್ನು ಪ್ರಶ್ನೆ ಮಾಡಿದೆ. ಪಕ್ಕಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಎಂದಿದ್ದರು. ಹಲ್ಲೆಯಿಂದ ಕಿರಿಕ್ ಕೀರ್ತಿಯ ಬೆರಳು, ಮಣಿಕಟ್ಟು ಹಾಗೂ ತಲೆಯ ಭಾಗಕ್ಕೆ ಪೆಟ್ಟಾಗಿತ್ತು.

ಇನ್ನೊಂದು ವಾದವಿದೆ
ಈ ಗಲಾಟೆಯಲ್ಲಿ ಇನ್ನೊಂದು ವಾದವಿದೆ. ಫೋಟೊ ತೆಗೆದು ಅಪರಿಚಿತ ವ್ಯಕ್ತಿ ಕಿರಿಕ್ ಕೀರ್ತಿಯ ಅಭಿಮಾನಿಯಾಗಿದ್ದ. ಹೀಗಾಗಿ ಪಬ್ಗೆ ಬಂದಿದ್ದ ಕೀರ್ತಿಯ ಫೋಟೊ ತೆಗೆದಿದ್ದ. ಅದಕ್ಕೆ ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದಾಗ, ಆತ ಕ್ಷಮೆಯನ್ನೂ ಕೇಳಿದ್ದಾನೆ. ಆದರೆ, ಕಿರಿಕ್ ಕೀರ್ತಿ ಕೋಪ ಕಡಿಮೆ ಆಗಿರಲಿಲ್ಲ. ಆತನ ಮೊಬೈಲ್ ಫೋನ್ ಕಸಿದುಕೊಂಡು ಫೋಟೊ ಡಿಲೀಟ್ ಮಾಡಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ವ್ಯಕ್ತಿ ಪಕ್ಕದಲ್ಲೇ ಇದ್ದ ಬಿಯರ್ ಬಾಟಲ್ ತೆಗೆದು ತಲೆಗೆ ಹೊಡೆದಿದ್ದಾನೆ ಎಂದು ಸಹ ಕೆಲವರು ಹೇಳಿದ್ದರು.

2018ರಲ್ಲೂ ಹಲ್ಲೆ ಆಗಿತ್ತು
ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಈ ಹಿಂದೆಯೂ ಹಲ್ಲೆ ನಡೆದಿತ್ತು. 2018ರಲ್ಲಿ ಜ್ಞಾನಭಾರತಿ ಕ್ಯಾಂಪಸ್ ಸಮೀಪ ಕಿರಿಕ್ಕೀರ್ತಿ ಮೇಲೆ ಹಲ್ಲೆ ನಡೆಸಲಾಗಿತ್ತು. ರಸ್ತೆ ಮಧ್ಯೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ತಗೆಯುವಂತೆ ಕಿರಿಕ್ ಕೀರ್ತಿ ಹೇಳಿದ್ದರು. ಆ ವೇಳೆ ಮದ್ಯಪಾನ ಮಾಡಿದ್ದವರು ಕಿರಿಕ್ ಕೀರ್ತಿ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಸಾರ್ವಜನಿಕರೇ ಪಾನಮತ್ತರಾಗಿದ್ದವರನ್ನು ಹಿಡಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆ ನಂತರ ಲಾಕ್ಡೌನ್ ಸಂದರ್ಭದಲ್ಲಿ ದೇವನಹಳ್ಳಿ ಟೋಲ್ ಬಳಿ ಕಿರಿಕ್ ಕೀರ್ತಿ ಟೋಲ್ ಸಿಬ್ಬಂದಿ ಮೇಲೆ ಸಕಾರಣವಾಗಿಯೇ ಜಗಳವಾಡಿದ್ದರು. ಫ್ಲೈಓವರ್ ಬಳಸದೇ ಇದ್ದರೂ ಟೋಲ್ ಹಣ ಏಕೆ ಕೊಡಬೇಕೆಂದು ಕಿರಿಕ್ ಕೀರ್ತಿ ಪ್ರಶ್ನೆ ಮಾಡಿದ್ದರು. ಅಂದು ಅವರೊಟ್ಟಿಗೆ ನಟ ಚಂದನ್ ಸಹ ಇದ್ದರು.


Click it and Unblock the Notifications











