ವಿಡಿಯೋ: ಅಪ್ಪು ಮನೆಗೆ ಆಗಮಿಸುತ್ತಿದ್ದ ವಿಜಯ್ ಸೇತುಪತಿ ಮೇಲೆ ಹಲ್ಲೆ!
ನಟ ವಿಜಯ್ ಸೇತುಪತಿ ಮೇಲೆ ನಿನ್ನೆ (ನವೆಂಬರ್ 02) ಕೆಂಪೇಗೌಡ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲ್ಲೆ ನಡೆದಿದೆ.
ನಟ ವಿಜಯ್ ಸೇತುಪತಿ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಆಗಮಿಸಲೆಂದು ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ವಿಜಯ್ ಸೇತುಪತಿ ಜೊತೆ ಜಗಳ ಮಾಡಿದ್ದಾನೆ.
ನವೆಂಬರ್ 02 ರಾತ್ರಿ 11 ಗಂಟೆ ಸುಮಾರಿಗೆ ವಿಮಾನವು ಬೆಂಗಳೂರಿನಲ್ಲಿ ಭೂಸ್ಪರ್ಷವಾದ ಬಳಿಕ ವಿಜಯ್ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಯುವಕ ಓಡಿ ಬಂದು ವಿಜಯ್ ಸೇತುಪತಿ ಬೆನ್ನಿಗೆ ಕಾಲಿನಿಂದ ಒದ್ದಿದ್ದಾನೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.

ಯುವಕ ಪಾನಮತ್ತರಾಗಿದ್ದರು, ವಿಮಾನದಲ್ಲಿಯೇ ವಿಜಯ್ ಸೇತುಪತಿ ಜೊತೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ವಿಜಯ್ ಸೇತುಪತಿ ಮಾತ್ರವೇ ಅಲ್ಲದೆ ಸಹ ಪ್ರಯಾಣಿಕರೊಟ್ಟಿಗೂ ಯುವಕ ಜಗಳ ಮಾಡಿದ್ದ. ವಿಮಾನದಲ್ಲಿಯೇ ವಿಜಯ್ ಸೇತುಪತಿ ಅವರ ಮ್ಯಾನೇಜರ್ ಹಾಗೂ ಯುವಕನ ನಡುವೆ ಜೋರು ಜಗಳವಾಗಿದೆ.
ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ವಿಜಯ್ ಸೇತುಪತಿ ಭದ್ರತೆಯೊಂದಿಗೆ ಹೊರಗೆ ಬರುತ್ತಿದ್ದಾಗಲೇ ಯುವಕ ಹಿಂದಿನಿಂದ ಬಂದು ವಿಜಯ್ ಸೇತುಪತಿಯನ್ನು ಕಾಲಿನಿಂದ ಒದ್ದಿದ್ದಾನೆ. ಕೂಡಲೇ ಅಲ್ಲಿದ್ದವರು ಯುವಕನನ್ನು ಹಿಡಿದುಕೊಂಡಿದ್ದಾರೆ. ಪ್ರತಿ ಹಲ್ಲೆಯೂ ಆಗಿದೆ.
ವಿಜಯ್ ಸೇತುಪತಿ ರಾಮನಗರ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಮಾಸ್ಟರ್ ಶೆಫ್ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗವಹಿಸಲು ಬರುತ್ತಿದ್ದರು. ಚಿತ್ರೀಕರಣದ ಬಳಿಕ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ಮಾಡುವ ಯೋಜನೆಯಲ್ಲಿದ್ದರು. ಆದರೆ ಅಚಾನಕ್ಕಾಗಿ ಈ ಘಟನೆ ನಡೆದಿದೆ.
ಹಲ್ಲೆ ಮಾಡಿರುವ ವ್ಯಕ್ತಿ ತಮಿಳುನಾಡು ಮೂಲದವನು ಎನ್ನಲಾಗಿದ್ದು, ಘಟನೆ ಬಗ್ಗೆ ಏರ್ಪೋರ್ಟ್ ಪೊಲೀಸರಿಗೆ ವಿಜಯ್ ಸೇತುಪತಿ ಮ್ಯಾನೇಜರ್ ಮೌಖಿಕ ದೂರು ನೀಡಿದ್ದಾರೆ. ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು (ನವೆಂಬರ್ 03)ರ ಸಂಜೆ ವೇಳೆಗೆ ಕಂಠೀರವ ಸ್ಟುಡಿಯೋಕ್ಕೆ ತೆರಳಿದ ನಟ ವಿಜಯ್ ಸೇತುಪತಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಹೂಮಾಲೆ ಇರಿಸಿ ಕೈಮುಗಿದು ವಂದಿಸಿದ್ದಾರೆ.
ಈ ಸಮಯ ಸುದ್ದಿಗಾರರೊಟ್ಟಿಗೆ ಮಾತನಾಡಿದ ವಿಜಯ್ ಸೇತುಪತಿ, ''ನಾನು ಈವರೆಗೆ ಅವರನ್ನು ಭೇಟಿಯೇ ಆಗಿಲ್ಲ, ಆದರೆ ನನಗೇ ಇಷ್ಟು ನೋವಾಗುತ್ತಿದೆ ಎಂದರೆ ಅವರ ಅಭಿಮಾನಿಗಳಿಗೆ, ಅವರ ಕುಟುಂಬಕ್ಕೆ, ಕನ್ನಡ ಜನತೆಗೆ ಎಷ್ಟು ನೋವಾಗಿದೆ ಎಂದು ನಾನು ಊಹಿಸಬಲ್ಲೆ. ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಗೊತ್ತಾಯಿತು, ಅವರು ಫಿಟ್ ಆಗಿರುವ ವ್ಯಕ್ತಿ ಮರಳಿ ಬರುತ್ತಾರೆ ಎಂದು ಎಣಿಸಿದ್ದೆ ಆದರೆ ಹೀಗೆ ಆಗುತ್ತದೆಯೆಂದು ನಾನು ಊಹಿಸಿರಲಿಲ್ಲ. ನೆನೆಪಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಹೀಗೆ ಆಗಬಾರದಿತ್ತು'' ಎಂದಿದ್ದಾರೆ.


Click it and Unblock the Notifications











