'ಅವತಾರ ಪುರುಷ'- 2 ರಿಲೀಸ್ ಡೇಟ್ ಘೋಷಣೆ: ಬೇರೆ ದಿನ ಸಿಗಲಿಲ್ವಾ ಸುನಿ?
ಎರಡು ವರ್ಷಗಳ ಹಿಂದೆ ಬಂದಿದ್ದ ಸಿಂಪಲ್ ಸುನಿ ನಿರ್ದೇಶನದ 'ಅವತಾರ ಪುರುಷ' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಬೋರ್ ಎನಿಸಿತ್ತು. ಆದರೂ ಕ್ಲೈಮ್ಯಾಕ್ಸ್ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು ಸರಣಿಯ ಮುಂದಿನ ಬಗ್ಗೆ ಕುತೂಹಲ ಮೂಡಿಸಿತ್ತು ಚಿತ್ರತಂಡ.
ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದ 'ಅವತಾರ ಪುರುಷ' ಚಿತ್ರದಲ್ಲಿ ಶರಣ್- ಆಶಿಕಾ ರಂಗನಾಥ್ ಲೀಡ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದರು. ಡೈಲಾಗ್ ಕಿಂಗ್ ಸಾಯಿಕುಮಾರ್, ಭವ್ಯ, ಶ್ರೀನಗರ ಕಿಟ್ಟಿ ಹೀಗೆ ಘಟಾನುಘಟಿ ಕಲಾವಿದರೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಈ ಸೂಪರ್ನ್ಯಾಚುರಲ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಸೀಕ್ವೆಲ್ಗಾಗಿ ಒಂದಷ್ಟು ಜನ ಕಾಯ್ತಾ ಇದ್ದಿದ್ದು ಸುಳ್ಳಲ್ಲ.

'ಅವತಾರ ಪುರುಷ'-2 ತ್ರಿಶಂಕು ಪಯಣ ಹೆಸರಿನಲ್ಲಿ 2ನೇ ಭಾಗ ಪ್ರೇಕ್ಷಕರ ಮುಂದೆ ಬರುತ್ತಿದೆ. ಒಟ್ಟಿಗೆ ಸರಣಿಯ 2 ಸಿನಿಮಾಗಳ ಚಿತ್ರೀಕರಣವಾಗಿತ್ತು. ಆದರೆ ಮೊದಲ ಭಾಗಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ಭಾಗ ಬೇಗ ಬಿಡುಗಡೆ ಮಾಡಲು ಚಿತ್ರತಂಡ ಉತ್ಸಾಹ ತೋರಿಸಿರಲಿಲ್ಲ. ಅಂತೂ ಇಂತೂ ಇದೀಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಅಧಿಕೃತವಾಗಿ ದಿನಾಂಕ ಘೋಷಣೆಯಾಗಿದೆ. 20 ದಿನ ಬಾಕಿ ಇರುವಂತೆ ಸಿನಿಮಾ ಬಿಡುಗಡೆ ದಿನಾಂಕ ಮಾಡಿರುವ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರಕ್ಕೆ ಸಮಯ ಬೇಡ್ವಾ? ಇಷ್ಟು ಬೇಗ ರಿಲೀಸ್ ಅಂದ್ರೆ? ಎಂದು ಕೇಳುತ್ತಿದ್ದಾರೆ.
ಮಾರ್ಚ್ 22ಕ್ಕೆ ಐಪಿಎಲ್ ಸೀಸನ್ 17 ಸಹ ಆರಂಭವಾಗಲಿದೆ. ಅದೇ ವೀಕೆಂಡ್ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವುದಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ಕಾಯಿಸಿ ಕೊನೆಗೆ ಐಪಿಎಲ್ ಜೊತೆ ರಿಲೀಸ್ ಮಾಡುತ್ತಿದ್ದೀರಾ? ಜನ ಥಿಯೇಟರ್ಗೆ ಬರ್ತಾರಾ? ಸುನಿ ನೀವು ಕೂಡ ಕ್ರಿಕೆಟ್ ಪ್ರೇಮಿ. ಮಾರ್ಚ್ 22ಕ್ಕೆ ಮಾರ್ನಿಂಗ್, ಮ್ಯಾಟ್ನಿ ಶೋ ನೋಡಿ ನೀವು ಕೂಡ ಫಸ್ಟ್ ಶೋ ಹೊತ್ತಿಗೆ ಮ್ಯಾಚ್ ನೋಡೋಕೆ ಹೋಗ್ತೀರಾ, ಹಾಗಾಗಿ ರಿಲೀಸ್ ಡೇಟ್ ಬದಲಾಯಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಮೊದಲಿನಿಂದಲೂ ಐಪಿಎಲ್ ಸರಣಿ ಸಮಯದಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಹಿನ್ನೆಡೆಯಾಗುತ್ತಾ ಬರುತ್ತಿದೆ. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಕ್ರಿಕೆಟ್ ಫೀವರ್ ಜೋರಾಗಿರುತ್ತದೆ. ಎಲ್ಲರೂ ಥಿಯೇಟರ್ಗೆ ಹೋಗದಿದ್ದರೂ ಮನೆಯಲ್ಲಿ ಟಿವಿ ಮುಂದೆ ಕೂರುತ್ತಾರೆ. ಮಾರ್ಚ್ 22ಕ್ಕೆ ಆರ್ಸಿಬಿ Vs ಸಿಎಸ್ಕೆ ಪಂದ್ಯ ನಡೆಯಲಿದೆ. ಹಾಗಾಗಿ ಮೊದಲ ದಿನ ಸಂಜೆ ವೇಳೆಗೆ ಜನ ಥಿಯೇಟರ್ ಕಡೆ ಹೋಗುವುದು ಕಮ್ಮಿ ಆಗುತ್ತದೆ.
ಮಾರ್ಚ್ 22ಕ್ಕೆ 'ಅವತಾರ ಪುರುಷ'-2 ಸಿನಿಮಾ ಬಿಡುಗಡೆ ಮಾಡಲು ಹೊರಟಿರುವ ನಿರ್ಧಾರ ಸರಿಯಲ್ಲ ಎಂದೇ ಸಾಕಷ್ಟು ಜನ ಹೇಳುತ್ತಿದ್ದಾರೆ. ಇನ್ನು ಸಿನಿಮಾ ಪ್ರಚಾರಕಕೆ 20 ದಿನ ಸಾಲಲ್ಲ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿ 'ಅವತಾರ ಪುರುಷ' ಮತ್ತೆ ಬರುವುದು ತಡವಾಗುತ್ತಾ? ಕಾದು ನೋಡಬೇಕಿದೆ.
'ಅಷ್ಟದಿಗ್ಬಂಧನ ಮಂಡಲ'ದಲ್ಲಿ ಏನಿತ್ತು?
'ಅವತಾರ ಪುರುಷ' ಮೊದಲ ಭಾಗ ಒಂದು ರೇಂಜಿಗೆ ಪ್ರೇಕ್ಷಕರನ್ನು ರಂಜಿಸಿತ್ತು. ಸೀಕ್ವೆಲ್ನ ಸಣ್ಣ ಝಲಕ್ ತೋರಿಸಿ ಮೊದಲ ಭಾಗಕ್ಕೆ ಎಂಡ್ ಕಾರ್ಡ್ ಹಾಕಲಾಗಿತ್ತು. ಒಂದ್ಕಡೆ ತ್ರಿಶಂಕು ಮಣಿಗಾಗಿ ವಾಮಾಚಾರ ನಡೆಸುತ್ತಿರುವ ಪಡೆ. ಆ ಮಣಿಗೂ ರಾಮ ಜೋಯಿಸ್ (ಸಾಯಿಕುಮಾರ್) ಕುಟುಂಬಕ್ಕೂ ಏನೋ ನಂಟಿದೆ. ಆ ಮನೆಯ ವಾರಸ್ದಾರ ಚಿಕ್ಕಂದಿನಲ್ಲೇ ಕಾಣೆಯಾಗಿರುತ್ತಾನೆ. ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿರುವ ಅನಿಲನಿಗೆ (ಶರಣ್) ಮನೆ ಮಗನಾಗಿ ನಾಟಕ ಮಾಡುವ ಕೆಲಸ ಸಿಗುತ್ತದೆ. ಅಷ್ಟಕ್ಕೂ ರಾಮ ಜೋಯಿಸರ ಮನೆಗೆ ಅನಿಲ ಬಂದಿದ್ದೇಕೆ? ತ್ರಿಶಂಕು ಮಣಿಗೂ ಕುಟುಂಬಕ್ಕೂ ನಂಟೇನು? ಅನಿಲ ನಿಜವಾಗಿಯೂ ಕಾಣೆಯಾಗಿದ್ದ ಆ ಮನೆ ಮಗನಾ? ಹಾಗಾದರೆ ಕುಮಾರ(ಶ್ರೀನಗರ ಕಿಟ್ಟಿ) ಯಾರು? ಈ ಎಲ್ಲಾ ಪ್ರಶ್ನೆಗಳಿಗೆ 2ನೇ ಭಾಗದಲ್ಲಿ ಉತ್ತರ ಸಿಗಬೇಕಿದೆ.


Click it and Unblock the Notifications











