ಮನೇಲಿ ಕುಸಿದು ಬಿದ್ದಿದ್ರು.. 3 ಆಸ್ಪತ್ರೆಗೆ ಹೋದ್ರು ಪ್ರಯೋಜನವಾಗ್ಲಿಲ್ಲ; ದಿಲೀಪ್ ರಾಜ್ ಕೊನೆ ಕ್ಷಣಗಳ ಬಗ್ಗೆ ಆಟೋ ಚಾಲಕ ಮಾತು
ಕನ್ನಡ ನಟ, ನಿರ್ಮಾಪಕ ದಿಲೀಪ್ ರಾಜ್ ಅಕಾಲಿಕ ಮರಣ ಚಿತ್ರರಂಗ ಹಾಗೂ ಆಪ್ತರಿಗೆ ಆಘಾತ ತಂದಿದೆ. ಡ್ಯಾನ್ಸ್, ಜಿಮ್ ಮಾಡುತ್ತಾ ಸಖತ್ ಫಿಟ್ ಆಗಿದ್ದ ಅವರು ದಿಢೀರನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಕೆಲವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಕುಸಿದು ಬಿದ್ದಿದ್ದ ದಿಲೀಪ್ ರಾಜ್ ಅವರನ್ನು ಆಟೋ ಚಾಲಕನ ಸಹಾಯದ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದರು ಪತ್ನಿ ಶ್ರೀವಿದ್ಯಾ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ತಮ್ಮ 47ನೇ ವಯಸ್ಸಿನಲ್ಲಿ ನಟ ದಿಲೀಪ್ ರಾಜ್ ಇಹಲೋಕ ತ್ಯಜಿಸಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಆಂಬ್ಯುಲೆನ್ಸ್ ಸಿಕ್ಕಿದ್ದರೆ ಸಹಾಯವಾಗುತ್ತಿತ್ತು ಎಂದು ದಿಲೀಪ್ ರಾಜ್ ಅವರಿಗೆ ಕೊನೆ ಕ್ಷಣದಲ್ಲಿ ಸಹಾಯಕ್ಕೆ ಬಂದಿದ್ದ ಆಟೋ ಡ್ರೈವರ್ ದೇವೇಂದ್ರ ನಾಯ್ಡು ತಿಳಿಸಿದ್ದಾರೆ. ಟಿವಿ9 ವಾಹಿನಿ ಸಂದರ್ಶನದಲ್ಲಿ ಅವರು ಆ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ.

ನಿನ್ನೆ(ಮೇ 13) ಬೆಳಗಿನ ಜಾವ 6ಗಂಟೆ ಸುಮಾರಿಗೆ ದಿಲೀಪ್ ರಾಜ್ ಮನೆಯಲ್ಲಿ ಕುಸಿದು ಬಿದ್ದಿದ್ದರು. ಬಳಿಕ ಏನೆಲ್ಲಾ ಆಯ್ತು ಎನ್ನುವುದನ್ನು ಆಟೋ ಚಾಲಕ ದೇವೇಂದ್ರ ನಾಯ್ಡು ಹೇಳಿದ್ದಾರೆ. "ದಿಲೀಪ್ ರಾಜ್ ಅವರ ಮನೆಯ ಸಮೀಪವೇ ನಮ್ಮ ಮನೆ. ಬೆಳಗ್ಗೆ ಅವರ ಪತ್ನಿ ಕಿರುಚಿಕೊಂಡು ಸಹಾಯಕ್ಕೆ ಕೂಗಿದರು. ಹೋಗಿ ನೋಡಿದಾಗಿ ದಿಲೀಪ್ ರಾಜ್ ಕುಸಿದು ಬಿದ್ದಿದ್ದರು. ಸ್ವಲ್ಪ ಉಸಿರು ಇತ್ತು, ನಾನು ಎದೆ ಒತ್ತಿ ಎಬ್ಬಿಸುವ ಪ್ರಯತ್ನ ಮಾಡಿದೆ. ಬಳಿಕ ಸೆಕ್ಯುರಿಟಿ ಸಹಾಯದಿಂದ ಆಟೋಗೆ ಅವರನ್ನು ಹತ್ತಿಸಿಕೊಂಡು ಶ್ರೀವಿದ್ಯಾ ಅವರ ಜೊತೆ ಹೊರಟೆವು" ಎಂದು ನೆನಪಿಸಿಕೊಂಡಿದ್ದಾರೆ.
ಮನೆಯಿಂದ ಆರ್ಚ್ ಪೆಟ್ರೋಲ್ ಬಂಕ್ವರೆಗೆ ಬಂದ್ವಿ.. ಹಾ..ಎಂದು ಉಸಿರು ಎಳೆದ್ರು ಅಷ್ಟೆ.. ಅಷ್ಟರಲ್ಲೇ ಜೀವ ಹೋಗಿತ್ತು ಅಂತ ನನಗೆ ಅನ್ನಿಸಿತ್ತು ಎಂದು ದೇವೇಂದ್ರ ನಾಯ್ಡು ಹೇಳಿದ್ದಾರೆ. "ಕೂಡಲೇ ಆಸ್ಪತ್ರೆಗೆ ಹೋದ್ವಿ, ಬಿಪಿ ಚೆಕ್ ಮಾಡಿದ್ರು. ಬಳಿಕ ಮತ್ತೊಂದು ಆಸ್ಪತ್ರೆಗೆ ಹೋದಾಗ ಇಸಿಜಿ ಚೆಕ್ ಮಾಡಿದ್ರು.. ಆಂಬ್ಯುಲೆನ್ಸ್ ಕೊಡಲಿಲ್ಲ. ಅಲ್ಲಿನ ವೈದ್ಯರಿಗೆ ಅಷ್ಟರಲ್ಲೇ ಗೊತ್ತಾಗಿತ್ತು ಎನ್ನಿಸುತ್ತೆ. ಅಲ್ಲಿಂದ ಕಾರಿನಲ್ಲಿ ಸಾಗರ್ ಅಪೊಲೊ ಆಸ್ಪತ್ರೆಗೆ ಕೊಂಡೊಯ್ದಾದಾಗ ಜೀವ ಹೋಗಿರುವುದನ್ನು ವೈದ್ಯರು ದೃಢಪಡಿಸಿದ್ರು" ಎಂದಿದ್ದಾರೆ.
ನನ್ನ ಆಟೋದಲ್ಲಿ ಇದ್ದ ಕೆಲಹೊತ್ತು ಜೀವ ಇತ್ತು.. ಮೊದಲಿಗೆ ಜಯದೇವ ಆಸ್ಪತ್ರೆಗೆ ಹೋಗೋಣ ಅಂತ ಶ್ರೀವಿದ್ಯಾ ಅವ್ರು ಹೇಳಿದ್ರು.. ಆದ್ರೆ ಬಹಳ ದೂರ ಆಗುತ್ತೆ. ಹತ್ತರದ ಆಸ್ಪತ್ರೆಗೆ ಹೋಗೋಣ, ಕೊಂಚ ಚೇತರಿಸಿಕೊಂಡ ಮೇಲೆ ದೊಡ್ಡ ಆಸ್ಪತ್ರೆಗೆ ಹೋಗೋಣ ಎಂದು ಕರೆದುಕೊಂಡು ಹೋದೆ. ಮೊದಲಿಗೆ ಅರೆಹಳ್ಳಿ ಬಳಿ ಹೊಸ ಆಸ್ಪತ್ರೆಗೆ ಹೋಗಿದ್ವಿ. ಬಳಿಕ ಕೆಆರ್ ಆಸ್ಪತ್ರೆಗೆ ಹೋಗಿದ್ದೆವು. ಕೊನೆಯದಾಗಿ ಸಾಗರ್ ಅಪೋಲೊ ಆಸ್ಪತ್ರೆಗೆ ಕರೆದೊಯ್ದೆವು ಎಂದು ದೇವೇಂದ್ರ ನಾಯ್ಡು ವಿವರಿಸಿದ್ದಾರೆ.
ಡ್ಯಾನ್ಸ್ ಕೊರಿಯೋಗ್ರಫರ್ ಆಗುವ ಕನಸು ಕಂಡಿದ್ದ ದಿಲೀಪ್ ರಾಜ್ ಅಚಾನಕ್ ಆಗಿ ಬಣ್ಣ ಹಚ್ಚಿ ನಟಿಸಿದ್ದರು. ರಂಗಭೂಮಿಯಲ್ಲಿ ಗುರ್ತಿಸಿಕೊಂಡು ಮೊದಲಿಗೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ ಸಿನಿಮಾ ಅವಕಾಶ ಸಿಕ್ಕಿತ್ತು. ಆದರೆ ಅದೃಷ್ಟ ಕೈಹಿಡಿಯಲಿಲ್ಲ. ಅಂದ, ಅಭಿನಯ ಎಲ್ಲಾ ಇದ್ದರೂ ಯಾಕೊ ಒಳ್ಳೆ ಅವಕಾಶಗಳು ಸಿಗಲೇ ಇಲ್ಲ. ಕೊನೆಗೆ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾ, ನಟಿಸುತ್ತಾ ಬಣ್ಣದ ಲೋಕದಲ್ಲಿ ಉಳಿದುಕೊಂಡರು.
ಉತ್ತರಹಳ್ಳಿ ನಿವಾಸದಲ್ಲಿ ದಿಲೀಪ್ ರಾಜ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸದಸ್ಯರು, ಆಪ್ತರ ದುಃಖದ ಕಟ್ಟೆ ಒಡೆದಿತ್ತು. ನಟರಾದ ಗಣೇಶ್, ವಿಜಯ್ ರಾಘವೇಂದ್ರ, ರವಿಶಂಕರ್, ನಿರೂಪಕಿ ಅನುಶ್ರೀ ಸೇರಿ ಚಿತ್ರರಂಗ, ಕಿರುತೆರೆಯ ಸಾಕಷ್ಟು ಮಂದಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಸಂಜೆ ವೇಳೆಗೆ ರಾಮನಗರದಲ್ಲಿರುವ ದಿಲೀಪ್ ರಾಜ್ ಫಾರ್ಮ್ ಹೌಸ್ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು.


Click it and Unblock the Notifications