ಕನ್ನಡದ ನಟಿಗೆ ಲೈಂ*ಗಿಕ ಕಿರುಕುಳ; ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕ ಅರೆಸ್ಟ್
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂಗಿಕ ಹಿಂಸೆ ಅನುಭವಿಸುತ್ತಾರೆ. ಚಿತ್ರರಂಗದಲ್ಲಿರುವ ನಾಯಕಿಯರು.. ಗಾಯಕಿಯರು ಕೂಡ ಇದರಿಂದ ಹೊರತಾಗಿಲ್ಲ. ದುರಂತ ಅಂದರೆ ಇವರಿಗೆ ಹೊರಗಡೆ ಇರುವವರು ಮಾತ್ರ ಶತ್ರುಗಳಲ್ಲ. ಬದಲಿಗೆ ಸುತ್ತ ಮುತ್ತ ಸ್ನೇಹಿತರ ಸೋಗಿನಲ್ಲಿ ಇರುವವರು ಕೂಡ...
ಇವರಿಗೆ ಕಾಡುತ್ತಾರೆ. ಚೂರು ಅವಕಾಶ ಸಿಕ್ಕರೂ ಸಾಕು ಲೈಂ*ಗಿಕ ದೌರ್ಜನ್ಯ ಎಸಗುತ್ತಾರೆ. ಮಾನಸಿಕ ದೈಹಿಕ ಕಿರುಕುಳ ಕೊಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆಯೇ ಅರವಿಂದ್ ರೆಡ್ಡಿಯ ಬಂಧನ. ಹೌದು, ಅರವಿಂದ್ ರೆಡ್ಡಿ.. ಹೇಳಿಕೊಳ್ಳಲು ರಿಯಲ್ ಎಸ್ಟೇಟ್ ಉದ್ಯಮಿ. ಎವಿಆರ್ ಗ್ರೂಪ್ ಸಂಸ್ಥಾಪಕ.
''ಮಹಾರಾಜ ಬಳ್ಳಾರಿ ಟಸ್ಕರ್ಸ್'' ಕ್ರಿಕೆಟ್ ತಂಡದ ಮಾಲೀಕ-ನಾಯಕ. ಇಷ್ಟೇ ಅಲ್ಲ ಕನ್ನಡ ಚಿತ್ರರಂಗದ ನಿರ್ಮಾಪಕ.

ಚಿತ್ರರಂಗದಲ್ಲಿನ ಚೆಲುವೆಯರಿಗಾಗಿ ಮತ್ತು ನಟರಿಗಾಗಿ ಹಲವು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿರುವ ಈ ಅರವಿಂದ್ ರೆಡ್ಡಿಯ ಸಹವಾಸ ಮಾಡಿ ಸದ್ಯ ಕನ್ನಡದ ನಟಿಯೊಬ್ಬರು ನಲುಗಿ ಹೋಗಿದ್ದಾರೆ. ನರಕ ದರ್ಶನವನ್ನು ಮಾಡಿದ್ದಾರೆ.
2021ರಲ್ಲಿ ಕನ್ನಡದಲ್ಲಿ 9ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡ ಬೆಡಗಿಯ ಸ್ನೇಹ ಸಂಪಾದಿಸಿದ ಅರವಿಂದ್ ರೆಡ್ಡಿ, ಆ ನಂತರ 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ''ಲಾರ್ಸ್ ಕ್ರಿಕೆಟ್ ಕಪ್'' ಉದ್ಘಾಟನೆಗೆ ಬರುವಂತೆ ನಟಿಗೆ ಹೇಳಿದ್ದರು. ಅರವಿಂದ್ ಮಾತುಗಳನ್ನು ಕೇಳಿ ನಟಿ ಕೂಡ ಖುಷಿಯಿಂದ ಹೋಗಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಗಾಢವಾಗಿತ್ತು.
ಆದರೆ ಆ ನಂತರ ಅದೇನಾಯ್ತು ಗೊತ್ತಿಲ್ಲ. 2022ರಲ್ಲಿಯೇ ನಟಿಯ ಜೊತೆ ಸಂಬಂಧ ಕಡಿದುಕೊಂಡು ಅರವಿಂದ್ ರೆಡ್ಡಿ ದೂರವಾಗಿದ್ದರು. ತಮ್ಮ ನಡುವೆ ಇದ್ದ ಸಂಪರ್ಕ ಸೇತುವೆ ಕಳಚಿ ಬಿದ್ದಿದ್ದೇಕೆ ಎನ್ನುವ ಪ್ರಶ್ನೆಗೆ ಖುದ್ದು ನಟಿಯ ಬಳಿಯೇ ಉತ್ತರ ಇರಲಿಲ್ಲ.
ಆದ್ಯಾಗ್ಯೂ 2023ರ ಆಸು ಪಾಸು ಮತ್ತೆ ನಟಿಯ ಬದುಕಿನಲ್ಲಿ ಪ್ರವೇಶ ಮಾಡಿದ ಅರವಿಂದ್ ರೆಡ್ಡಿ, ಇಲ್ಲಿಂದ ನಟಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದರು. ಇಷ್ಟರಲ್ಲಿ ಅರವಿಂದ್ ರೆಡ್ಡಿಯ ಮಾನಸಿಕ ಸ್ಥಿತಿ ಮತ್ತು ಕುಡಿತದ ಚಟದ ಬಗ್ಗೆ ನಟಿಗೆ ಚೆನ್ನಾಗಿ ಗೊತ್ತಾಗಿ ಹೋಗಿತ್ತು.

ಆ ನಂತರ ತನ್ನ ಅಸಲಿ ರೂಪ ಪ್ರದರ್ಶನ ಮಾಡಲು ಶುರು ಮಾಡಿದ ಅರವಿಂದ್ ರೆಡ್ಡಿ, ನಟಿಯನ್ನು ಹಿಂಬಾಲಿಸುವುದು, ಎಲ್ಲಿದ್ದಾರೆ ಎಂದು ನಟಿಯ ಲೋಕೇಷನ್ ಪತ್ತೆ ಮಾಡುವುದು, ಇದು ಸಾಲದು ಎಂಬಂತೆ ಇನ್ಸ್ಟಾಗ್ರಾಮ್ನಲ್ಲಿ ನಟಿಯ ಮಾರ್ಫ್ ಮಾಡಿದ ನಕಲಿ ಫೋಟೊಗಳನ್ನು ಹಂಚಿಕೊಳ್ಳಲು ಶುರು ಮಾಡಿದರು. ಮದುವೆಯಾಗುವಂತೆ ಒತ್ತಡ ಹೇರಲು ಶುರು ಮಾಡಿದ್ದ ಅರವಿಂದ್ ರೆಡ್ಡಿ ನಟಿಯ ಮನೆ ಬಳಿ ಹುಡುಗರನ್ನು ಕಳುಹಿಸಿ ತಂದೆ ತಾಯಿಗೆ ಬೆದರಿಕೆ ಹಾಕಿಸಿದ್ದರು. ತಮ್ಮನನ್ನು ಕೊ*ಲೆ ಮಾಡುವ ಬೆದರಿಕೆ ಹಾಕಿದ್ದರು.
ಅರವಿಂದ್ ರೆಡ್ಡಿಯ ಈ ಕಿರುಕುಳದಿಂದ ಬೇಸತ್ತು 2024ರಲ್ಲಿ ಮಾತ್ರೆಗಳನ್ನು ನುಂಗಿ ಆತ್ಮ*ಹತ್ಯೆಗೆ ಪ್ರಯತ್ನ ಮಾಡಿದ್ದರು. ಈ ಸಮಯದಲ್ಲಿ ತಮ್ಮ ಸ್ನೇಹಿತ ಶೈಲೇಶ್ ಮೂಲಕ ನಟಿಯನ್ನು ಜೆ.ಪಿ.ನಗರದ ಆಸ್ಪತ್ರೆಗೆ ದಾಖಲಿಸಿದ್ದ ಅರವಿಂದ್ ರೆಡ್ಡಿ, ಆ ನಂತರ ಮಾರತಹಳ್ಳಿಯಲ್ಲಿನ ತಮ್ಮ ಸ್ನೇಹಿತರ ಆಸ್ಪತ್ರೆಗೆ ನಟಿಯನ್ನು ಶಿಫ್ಟ್ ಮಾಡಿದ್ದರು. ಪೊಲೀಸರಿಗೆ ಸುಳ್ಳು ಹೇಳುವಂತೆ ಒತ್ತಡ ಹಾಕಿ ನಿನ್ನ ಸಹವಾಸ ಬಿಡುವುದಾಗಿ ಹೇಳಿದ್ದರು.
ಆ ನಂತರ ಆತ್ಮ*ಹತ್ಯೆಗೆ ಪ್ರಯತ್ನ ಮಾಡಿರುವ ವಿಷಯ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ಹೇಳುವುದಾಗಿ ನಟಿ ಹೇಳಿದಾಗ ಏಕಾಏಕಿ ನಟಿಯ ಮೇಲೆ ಅರವಿಂದ್ ರೆಡ್ಡಿ ಹಲ್ಲೆ ಮಾಡಿದ್ದರು. ಬಟ್ಟೆಯನ್ನು ಹರಿದು ನಟಿಯನ್ನು ಅರೆಬೆತ್ತಲೆ ಮಾಡಿದ್ದರು. ಚಿತ್ರ ಹಿಂಸೆ ನೀಡಿದ್ದರು.
ತನ್ನ ಈ ದಯನೀಯ ಸ್ಥಿತಿಯನ್ನು ಮತ್ತು ಮಗನ ಕ್ರೌರ್ಯವನ್ನು ನಟಿ ಅರವಿಂದ್ ರೆಡ್ಡಿ ಅವರ ತಾಯಿಗೆ ಹೇಳಿದರೂ ಕೂಡ ಪ್ರಯೋಜನವಾಗಲಿಲ್ಲ. ಅನುಸರಿಸಿಕೊಂಡು ಹೋಗು ಎಂದು ಅರವಿಂದ್ ರೆಡ್ಡಿ ತಾಯಿ ಹೇಳಿದ್ದರು. ಇದರ ನಡುವೆ ನಾನು ನೀಡಿದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಬೇಕು ಮತ್ತು 1 ಕೋಟಿ ಹಣ ನೀಡುವಂತೆ ಅರವಿಂದ್ ರೆಡ್ಡಿ ನಟಿಗೆ ಡಿಮ್ಯಾಂಡ್ ಮಾಡಲು ಶುರುಮಾಡಿದ್ದರು.
ಹೀಗೆ ಈ ಎಲ್ಲಾ ವಿಚಾರಗಳನ್ನು ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿರುವ ನಟಿ, ಅರವಿಂದ್ ರೆಡ್ಡಿಯಿಂದ ಬೇಸತ್ತು ಜೂನ್ 14,2024 ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ನಟಿ ದೂರು ನೀಡಿದ್ದರು. ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು. ಈ ಹಿನ್ನೆಲೆ ಇಂದು (ನವೆಂಬರ್ 15) ಶ್ರೀಲಂಕಾದಿಂದ ಬೆಂಗಳೂರಿಗೆ ಬಂದು ಇಳಿಯುತ್ತಿದ್ದಂತೆಯೇ ಎಸಿಪಿ ಚಂದನ್ ಮತ್ತು ತಂಡ ಅರವಿಂದ್ ರೆಡ್ಡಿ ಅವರನ್ನು ಬಂಧಿಸಿದೆ.


Click it and Unblock the Notifications











