ರಾಮನೂರಿನಲ್ಲಿ ತಾರಾಲೋಕ; ಅಯೋಧ್ಯೆ ತಲುಪಿದ ರಜನಿ, ರಿಷಬ್, ಕಂಗನಾ, ಬಿಗ್ಬಿ, ಆಲಿಯಾ, ನಿಖಿಲ್
ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಮಧ್ಯಾಹ್ನ 12:20ರ ಶುಭ ಮುಹೂರ್ತದಲ್ಲಿ ಪ್ರಾರಂಭವಾಗುವ 'ಪ್ರಾಣ ಪ್ರತಿಷ್ಠಾ' ಸಮಾರಂಭವು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು 8 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈ ಪಟ್ಟಿಯಲ್ಲಿ ಸಿನಿಮಾ ತಾರೆಯರ ಸಂಖ್ಯೆ ದೊಡ್ಡದ್ದಿದೆ.
ಈಗಾಗಲೇ ತಾರೆಯರಿಂದ ಅಯೋಧ್ಯೆ ರಾಮಮಂದಿರ ಆವರಣ ತುಂಬಿ ತುಳುಕುತ್ತಿದ್ದಾರೆ. ಇನ್ನು ಹಲವಯ ಕಲಾವಿದರು ನಿಧಾನವಾಗಿ ಅಯೋಧ್ಯೆಗೆ ಸೇರಿಕೊಳ್ಳುತ್ತಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಹಂಗವಾಗಿ ಈಗಾಗಲೇ ಪೂಜಾ ಕೈಂಕರ್ಯಗಳು ಆರಮಭವಾಗಿದೆ. 3 ದಿನಗಳ ಹಿಂದೆಯೇ ಬಾಲ ರಾಮ ಮೂರ್ತಿ ಗರ್ಭಗುಡಿ ಸೇರಿದೆ.

ಭಾನುವಾರವೇ ಹಲವರು ತಮ್ಮ ತಮ್ಮ ಊರುಗಳಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಧನುಷ್ ಕೂಡ ಒಂದು ದಿನ ಮೊದ್ಲೆ ಚೆನ್ನೈಯಿಂದ ಹೊರಟು ಅಯೋಧ್ಯೆ ತಲುಪಿದ್ದಾರೆ. ಈಗಾಗಲೇ ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಸಮೇತರಾಗಿ ಅಯೋಧ್ಯೆ ರಾಮಮಂದಿರ ತಲುಪಿದ್ದಾರೆ. ಹನುಮ ದೇವಸ್ಥಾನಕ್ಕೆ ಭೇಟಿ ನೀಡಿ ಫೋಟೊ ಹಂಚಿಕೊಂಡಿದ್ದಾರೆ.
ಹೊಸದಾಗಿ ಮದುವೆಯಾದ ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ದಂಪತಿ ಭಾನುವಾರವೇ ಅಯೋಧ್ಯೆ ತಲುಪಿದರು. ರಣದೀಪ್ ಬಿಳಿ ಟಿ-ಶರ್ಟ್ ಮತ್ತು ಬ್ಲೂ ಡೆನಿಮ್ನಲ್ಲಿ ಕಾಣಿಸಿಕೊಂಡರೆ ಪತ್ನಿ ಲಿನ್ ವರ್ಣರಂಜಿತ ಕೋ-ಆರ್ಡ್ ಸೆಟ್ ಧರಿಸಿದ್ದರು.

ಹಿರಿಯ ನಟ ಅನುಪಮ್ ಖೇರ್ ಅವರು ಇತರ ಭಕ್ತರೊಂದಿಗೆ ಅಯೋಧ್ಯೆಗೆ ಆಗಮಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾದಿದ್ದು, ಕೊನೆಗೂ ಬಂದಿದೆ" ಎಂದರು. "ನಾನು ಎಲ್ಲಾ ರಾಮ ಭಕ್ತರೊಂದಿಗೆ ಅಯೋಧ್ಯೆಯನ್ನು ತಲುಪಿದ್ದೇನೆ. ವಿಮಾನವು ಭಕ್ತಿಯ ಅದ್ಭುತ ವಾತಾವರಣವನ್ನು ಹೊಂದಿತ್ತು" ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ರಜನಿಕಾಂತ್ ಅವರನ್ನು ಭೇಟಿ ಮಾಡಿರುವ ಫೋಟೊ ಸಹ ಹಂಚಿಕೊಂಡಿದ್ದಾರೆ.
ನಟಿ ಕಂಗನಾ ರಾಣಾವತ್ ಸಹ ಅಯೋಧ್ಯೆ ರಾಮ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಈಗಾಗಲೇ ಅಯೋಧ್ಯೆ ಸೇರಿಕೊಂಡಿರುವ ಆಕೆ ದೇವಾಲಯದ ನೆಲವನ್ನು ಗುಡಿಸುವುದು, ಸಂತರು ಮತ್ತು ಋಷಿಗಳೊಂದಿಗೆ ಯಾಗ ಮಾಡುವಂತಹ ಹಲವಾರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
ನಟ ನಿಖಿಲ್ ಕುಮಾರಸ್ವಾಮಿಗೆ ಕೂಡ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಮಂತ್ರಣ ದೊರಕ್ಕಿತ್ತು. ತಂದೆ ಮಾಜಿ ಸಿಎಂ ಕುಮಾರಸ್ವಾಮಿ, ತಾತ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅಜ್ಜಿ ಜೊತೆ ಪ್ರೈವೇಟ್ ಜೆಟ್ನಲ್ಲಿ ಹೊರಟು ನಿಖಿಲ್ ಅಯೋಧ್ಯೆ ತಲುಪಿದ್ದಾರೆ. ರಾಮಮಂದಿರದ ಫೋಟೊ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲು ಕಾತುರರಾಗಿದ್ದಾರೆ.
ಇನ್ನು ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್, ರಣ್ಬೀರ್ ಕಪೂರ್ ಸಹ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫೋಟೊ, ವಿಡಿಯೋ ವೈರಲ್ ಆಗುತ್ತಿದೆ. ತೆಲುಗು ನಟ ಚಿರಂಜೀವಿ ಪತ್ನಿ ಸುರೇಖಾ ಹಾಗೂ ಪುತ್ರ ರಾಮ್ಚರಣ್ ಜೊತೆ ಪ್ರೈವೆಟ್ ಜೆಟ್ನಲ್ಲಿ ಅಯೋಧ್ಯೆಗೆ ಬಂದಿಳಿದಿದ್ದಾರೆ.
ಕನ್ನಡ ನಟ ಯಶ್ಗೂ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿದೆ. ಉದ್ಯಮಿಗಳು, ರಾಜಕೀಯ ಮುಖಂಡರು, ಸಿನಿಮಾ ತಾರೆಯರ ಜೊತೆಗೆ ಕ್ರೀಡಾರಂಗದ ತಾರೆಯರಿಗೂ ಈ ಅಪರೂಪದ ಕ್ಷಣಗಳಿಗೆ ಸಾಕ್ಷಿ ಆಗುವ ಅವಕಾಶ ಸಿಕ್ಕಿದೆ. ಐತಿಹಾಸಿಕ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಅಸಂಖ್ಯಾತ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











