'ಅಯೋಗ್ಯ' ವಿವಾದ ಸುಖಾಂತ್ಯ: ಬೇಸರದಿಂದ ಟ್ಯಾಗ್ ಲೈನ್ ಕೈಬಿಟ್ಟ ನಿರ್ದೇಶಕ
ಕಡೆಗೂ 'ಅಯೋಗ್ಯ' ಚಿತ್ರದ ವಿವಾದ ಸುಖಾಂತ್ಯ ಕಂಡಿದೆ. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರದ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯರು ಮುನಿಸಿಕೊಂಡಿದ್ದರು.
ಯಾಕಂದ್ರೆ, 'ಅಯೋಗ್ಯ' ಚಿತ್ರಕ್ಕೆ 'ಗ್ರಾಮ ಪಂಚಾಯತಿ ಸದಸ್ಯ' ಎನ್ನುವ ಟ್ಯಾಗ್ ಲೈನ್ ಇಡಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮೈಸೂರಿನ ಕ್ರಾಂತಿ ದಳ ಸಂಘಟನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿತ್ತು.
ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ, 'ಅಯೋಗ್ಯ ಮತ್ತು ಗ್ರಾಮ ಪಂಚಾಯತಿ ಸದಸ್ಯ' ಎಂದು ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿತು. ಆದ್ರೆ, ಇದೂ ಕೂಡ ಗ್ರಾಮ ಪಂಚಾಯತಿ ಸದಸ್ಯರಿಗೆ ಸಮಾಧಾನ ತರಲಿಲ್ಲ.

ನಿನ್ನೆಯಷ್ಟೇ 'ಅಯೋಗ್ಯ' ಸಿನಿಮಾ ಆಡಿಯೋ ರಿಲೀಸ್ ಆಯ್ತು. ಈ ವೇಳೆ ಕೆಲ ಗ್ರಾಮ ಪಂಚಾಯತಿ ಸದಸ್ಯರು ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟಿಸಿದರು. ಬಳಿಕ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಚಿನ್ನೇಗೌಡ ಸಭೆ ನಡೆಸಿದರು.
ಗ್ರಾಮ ಪಂಚಾಯತಿ ಸದಸ್ಯರ ಒತ್ತಾಯಕ್ಕೆ ಮಣಿದು, ಫಿಲ್ಮ್ ಚೇಂಬರ್ ಅಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ನಿರ್ದೇಶಕ ಮಹೇಶ್ 'ಗ್ರಾಮ ಪಂಚಾಯತಿ ಸದಸ್ಯ' ಎಂಬ ಟ್ಯಾಗ್ ಲೈನ್ ನ ಕೈಬಿಡಲು ಮನಸ್ಸು ಮಾಡಿದರು.
''ಗ್ರಾಮ ಪಂಚಾಯತಿ ಸದಸ್ಯರ ಮೇಲೆ ನನಗೆ ಗೌರವ ಇದೆ. ಸಿನಿಮಾದಲ್ಲಿ ಯಾರ ಗೌರವಕ್ಕೂ ನಾವು ಧಕ್ಕೆ ತಂದಿಲ್ಲ. ಚಿತ್ರದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹೆಮ್ಮೆ ಪಡುವ ವಿಷಯ ಇದೆ. ಆದರೂ ಆಕ್ಷೇಪ ವ್ಯಕ್ತವಾಯ್ತು. ಹೀಗಾಗಿ ಬಹಳ ನೋವಿನಿಂದ ಟ್ಯಾಗ್ ಲೈನ್ ಕೈಬಿಟ್ಟಿದ್ದೇನೆ'' ಎಂದು 'ಫಿಲ್ಮಿಬೀಟ್ ಕನ್ನಡ'ಕ್ಕೆ ನಿರ್ದೇಶಕ ಮಹೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಲ್ಲಿಗೆ, 'ಅಯೋಗ್ಯ' ಚಿತ್ರದ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಂತಾಯಿತು.


Click it and Unblock the Notifications











