ರಸ್ತೆ ಬದಿಯಲ್ಲಿ ನಟಿ ಜಯಮ್ಮನ ಮೃತದೇಹ: ಸ್ಪಷ್ಟನೆ ಕೊಟ್ಟ ಕುಟುಂಬ
ನಿನ್ನೆಯಷ್ಟೆ (ಜೂನ್ 04) ಮೃತಪಟ್ಟ ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ಜಯ ಮೃತದೇಹ ರಸ್ತೆ ಪಕ್ಕದಲ್ಲಿದೆ ಅನಾಥವಾಗಿದೆ ಎಂದು ಕೆಲವರು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Recommended Video
ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಜಯ ಅವರ ಸಹೋದರ ನಿರ್ದೇಶಕ ಮಲ್ಲೇಶ್ ಪುತ್ರಿ ರಾಜೇಶ್ವರಿ, 'ಮೃತದೇಹವನ್ನು ಅನಾಥವಾಗಿ ಬಿಟ್ಟಿಲ್ಲ. ಅಂತ್ಯಸಂಸ್ಕಾರಕ್ಕೆ ತಡವಾದ ಕಾರಣ ರಸ್ತೆ ಬದಿ ಇರಿಸಿ ಪೂಜೆ ಮಾಡಿದ್ದೇವೆ. ಆದರೆ ನಾವು ಶವವನ್ನು ಬಿಟ್ಟು ಹೋಗಿದ್ದೀವಿ ಎಂದು ಹೇಳುತ್ತಿದ್ದಾರೆ' ಎಂದಿದ್ದಾರೆ.
ವಿಡಿಯೋ ಮಾಡಿರುವ ಮಲ್ಲೇಶ್ ಪುತ್ರಿ ರಾಜೇಶ್ವರಿ, 'ನಮಗೆ ಇಂದು ಮಧ್ಯಾಹ್ಮ 11 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರಕ್ಕೆ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಮಯ ನಿಗದಿ ಪಡಿಸಲಾಗಿತ್ತು. ನಾವು ಬೇಗನೇ ಅಲ್ಲಿಗೆ ಹೋಗಿದ್ದೇವು. ಆದರೆ ಒಳಗೆ ದಿನಸಿ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಅಂತ್ಯ ಸಂಸ್ಕಾರ ತಡವಾಯಿತು. ಹಾಗಾಗಿ ನಾವು ಅಲ್ಲಿಯೇ ರಸ್ತೆ ಬದಿ ಶವವಿಟ್ಟು ಅಲ್ಲಿಯೇ ಪೂಜೆಗಳನ್ನು ಮಾಡಿದೆವು' ಎಂದಿದ್ದಾರೆ ರಾಜೇಶ್ವರಿ.

'ಜಯಮ್ಮನವರನ್ನು ನಿರ್ಲಕ್ಷಿಸಿಲ್ಲ, ಆರೋಪದಿಂದ ನೋವಾಗಿದೆ'
'ಜಯಮ್ಮನವರಿಗೆ ಆರೋಗ್ಯ ಹದಗೆಟ್ಟಾಗಿನಿಂದಲೂ ಕುಟುಂಬದವರಾದ ನಾವು ಅವರ ಜೊತೆಗೆ ಇದ್ದೇವೆ. ಅವರನ್ನು ಪಲಮನೇರು, ಮದ್ದೂರುಗಳಿಗೆ ಕರೆದುಕೊಂಡು ಹೋಗಿ ಅವರ ಪಾರ್ಶ್ವವಾಯುವಿಗೆ ಚಿಕಿತ್ಸೆ ಕೊಡಿಸಿದ್ದೆವು. ಅವರನ್ನು ಮೇ 29 ರಂದು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಇಷ್ಟು ಮಾಡಿರುವ ನಾವು ಅವರನ್ನು ಆ ಸ್ಥಿತಿಯಲ್ಲಿ ಬಿಟ್ಟು ಹೋಗಲು ಸಾಧ್ಯವೇ? ವಿಡಿಯೋದಲ್ಲಿರುವವರು ಏಕೆ ಸುಳ್ಳು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಅದರಿಂದ ನಮಗೆ ಬಹಳ ನೋವಾಗಿದೆ' ಎಂದಿದ್ದಾರೆ.

ಆಚೆಯೇ ಪೂಜೆ ಮಾಡಿಕೊಳ್ಳಲು ಹೇಳಿದ್ದರು: ರಾಜೇಶ್ವರಿ
'ಆಚೆಯೇ ಪೂಜೆ ಮಾಡಿಕೊಳ್ಳಲು ಹೇಳಿದ್ದರು, ನಿಯಮ ಇರುವುದೇ ಹೀಗೆ. ಹಾಗಾಗಿ ನಾವು ಹೊರಗೆಯೇ ಮಲಗಿಸಿ ಪೂಜೆ ಮಾಡಿದೆವು. ನಾವು ಬಹಳ ಕಡಿಮೆ ಜನ ಇದ್ದೆವು, ಬರುತ್ತೇವೆ ಎಂದವರನ್ನು ಸಹ ಕೊರೊನಾ ಕಾರಣಕ್ಕೆ ಬೇಡವೆಂದೇ ಹೇಳಿದೆವು. ಆದರೆ ಜನರು ಇಲ್ಲದ ಕಾರಣ ಹಾಗೂ ರಸ್ತೆ ಬದಿಯಲ್ಲಿ ಮಲಗಿಸಿ ಪೂಜೆ ಮಾಡುತ್ತಿದ್ದನ್ನು ಗಮನಿಸಿ ಕೆಲವರು ಹೀಗೆ ವಿಡಿಯೋ ಮಾಡಿದ್ದಾರೆ' ಎಂದು ರಾಜೇಶ್ವರಿ ಹೇಳಿದ್ದಾರೆ. ವೈರಲ್ ಆಗಿರುವ ಎರಡು ವಿಡಿಯೋಗಳಲ್ಲಿ ಒಂದರಲ್ಲಿ ಕುಟುಂಬ ಸದಸ್ಯರು ಪೂಜೆ ಮಾಡುತ್ತಿರುವ ದೃಶ್ಯಗಳು ಇವೆ.

ಸಾಕಷ್ಟು ಮಂದಿ ಸಿನಿಮಾದವರು ಸಹಾಯ ಮಾಡಿದ್ದಾರೆ: ಮಲ್ಲೇಶ್
ಇದೇ ವಿಷಯವಾಗಿ ಮಾತನಾಡಿರುವ ಜಯ ಅವರ ಸಹೋದರ ನಿರ್ದೇಶಕ ಮಲ್ಲೇಶ್, 'ಹಲವರು ಬರುತ್ತೇವೆಂದು ಹೇಳಿದರು ಆದರೆ ನಾವೇ ಬೇಡ ಎಂದೆವು. ಸಿನಿಮಾದವರು ಸಹಾಯ ಮಾಡಲಿಲ್ಲ ಎಂದು ಹೇಳುವಂತಿಲ್ಲ. ಶಿವರಾಮ್, ಗಿರಿಜಾ ಲೋಕೇಶ್, ಸುನಿಲ್ ಪುರಾಣಿಕ್ ಸಹಾಯ ಮಾಡಿದರು. ಜಯಮಾಲಾ ಅವರಂತೂ ಲಕ್ಷಾಂತರ ಹಣ ಕೊಟ್ಟಿದ್ದಾರೆ. ಜಯಮ್ಮನವರಿಗೆ ಖರ್ಚು ಮಾಡುವ ಹಣ ನನ್ನದೇ ಆಗಿರಬೇಕು ಎಂದು ಒತ್ತಾಸೆಯಿಂದ ಹಣ ಕೊಟ್ಟಿದ್ದರು. ನಮಗೆ ಆ ಸಮಯಕ್ಕೆ ಎಷ್ಟು ಬೇಕೊ ಅಷ್ಟು ಸಹಾಯ ತೆಗೆದುಕೊಂಡೆವು. ಎಲ್ಲರಿಂದಲೂ ಸಹಾಯ ಪಡೆದು ನಾವು ಇಟ್ಟುಕೊಳ್ಳಲು ಆಗುತ್ತದೆಯೇ?' ಎಂದಿದ್ದಾರೆ ಮಲ್ಲೇಶ್.

ಕನ್ನಡದ ಹಿರಿಯ ಪೋಷಕ ನಟಿ ಜಯಾ
ಬಿ.ಜಯ ಅವರು ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದಲೂ ಸಿನಿಮಾ ರಂಗದಲ್ಲಿರುವ ಜಯ ರಾಜ್ ಕುಮಾರ್, ವಿಷ್ಣುವರ್ಧನ್, ಶಿವರಾಜ್ ಕುಮಾರ್ ಸೇರಿ ದೊಡ್ಡ-ದೊಡ್ಡ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಜಯ ಅವರು ವಯೋಸಹಜ ಖಾಯಿಲೆಗಳಿಂದಾಗಿ ನಿನ್ನೆ (ಜೂನ್ 03) ರಂದು ನಿಧನ ಹೊಂದಿದರು.


Click it and Unblock the Notifications











