ಬಿಗ್ ಬಾಸ್ ಮನೆ, ಕಲಾವಿದರ ಭವನದಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸಲು ಒತ್ತಾಯ
ಕರ್ನಾಟಕದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿಲ್ಲ ಎಂಬ ಘಟನೆಗಳು ದಿನನಿತ್ಯ ವರದಿಯಾಗುತ್ತಿವೆ.
ಕಲ್ಯಾಣ ಮಂಟಪ, ಸಂಘದ ಭವನಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ, ಕನ್ನಡದ ಖ್ಯಾತ ನಿರ್ಮಾಪಕ ಭಾ ಮಾ ಹರೀಶ್ ಅವರು ಕಲಾವಿದರ ಸಂಘದ ಕಟ್ಟಡ, ಬಿಗ್ ಬಾಸ್ ಮನೆ ಹಾಗೂ ಕಂಠೀರವ ಸ್ಟುಡಿಯೋಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯುವಂತೆ ವಾಣಿಜ್ಯ ಮಂಡಳಿ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಂದೆ ಓದಿ...

ಕಲಾವಿದರ ಸಂಘದ ಕಟ್ಟಡ ಬಳಸಿಕೊಳ್ಳಿ
ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಹಲವು ಜನರು ಹಾಗೂ ಕುಟುಂಬ ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗಿ ಸೂಕ್ತ ಚಿಕಿತ್ಸೆ ಸಿಗದೆ, ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಹಾನಿಗೊಳಗಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಚಿತ್ರರಂಗದವರಿಗಾಗಿಯೇ ಪ್ರತ್ಯೇಕ ಕೋವಿಡ್ ಕೇಂದ್ರ ನಿರ್ಮಿಸುವ ಮೂಲಕ ಸಹಾಯಕ್ಕೆ ಬರಬೇಕು. ಅದಕ್ಕಾಗಿ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನವನ್ನು ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಿ ಎಂದು ನಿರ್ಮಾಪಕ ಭಾ ಮಾ ಹರೀಶ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಬಿಗ್ ಬಾಸ್ ಮನೆಯನ್ನು ಕೋವಿಡ್ ಕೇಂದ್ರ ಮಾಡಿ
ಕೊರೊನಾ ಭೀತಿಯಿಂದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ರದ್ದುಗೊಳಿಸಲಾಗಿದೆ. ಬಿಡದಿಯಲ್ಲಿ ಬಹಳ ದೊಡ್ಡದಾಗಿ ಬಿಗ್ ಬಾಸ್ ಮನೆ ತಯಾರು ಮಾಡಲಾಗಿದೆ. ಈಗ ಖಾಲಿಯಾಗಿದೆ. ಈ ಹಿನ್ನೆಲೆ ಬಿಗ್ ಬಾಸ್ ಮನೆಯನ್ನು ಸಹ ಕೋವಿಡ್ ಕೇಂದ್ರವನ್ನಾಗಿ ಪರಿವರ್ತಿಸಬಹುದು ಎಂದು ಭಾ ಮಾ ಹರೀಶ್ ಅವರು ಸಲಹೆ ನೀಡಿದ್ದಾರೆ. ಇದರ ಜೊತೆ ಕಂಠೀರವ ಸ್ಟುಡಿಯೋದಲ್ಲೂ ಸಹ ಕೋವಿಡ್ ಕೇಂದ್ರ ನಿರ್ಮಿಸಬಹುದು ಎಂದು ಸೂಚಿಸಿದ್ದಾರೆ.

ಸಿನಿ ಕಾರ್ಮಿಕರ ನೆರವಿಗೆ ನಿಂತ ಉಪೇಂದ್ರ
ಕೋವಿಡ್ ಲಾಕ್ಡೌನ್ನಿಂದ ಕೆಲಸವಿಲ್ಲದೇ ಕಷ್ಟಪಡುತ್ತಿರುವ ಕಾರ್ಮಿಕರು, ಕಲಾವಿದರು, ತಂತ್ರಜ್ಞರಿಗೆ ನಟ ಉಪೇಂದ್ರ ಅವರು ನೆರವು ನೀಡಲು ಮುಂದಾಗಿದ್ದಾರೆ. ಸುಮಾರು ಮೂರು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ತೀರ್ಮಾನಿಸಿದ್ದಾರೆ. ಕಿರುತೆರೆ ಕಲಾವಿದರಿಗೂ ಸಹಾಯ ಮಾಡುತ್ತಿದ್ದಾರೆ. ಉಪೇಂದ್ರ ಅವರ ಜೊತೆಯಲ್ಲಿ ಅನೇಕರು ಕೈ ಜೋಡಿಸಿದ್ದಾರೆ.
Recommended Video

'ಉಸಿರು' ಕಟ್ಟಿದ ಕವಿರಾಜ್
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಚಿತ್ರ ಸಾಹಿತಿ ಕವಿರಾಜ್ ಮತ್ತು ತಂಡದ ವತಿಯಿಂದ 'ಉಸಿರು' ಎಂಬ ಯೋಜನೆ ಆರಂಭಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಉಂಟಾದಾಗ ತಕ್ಷಣ ಆಸ್ಪತ್ರೆಯಲ್ಲಿ ಬೆಡ್ ಪಡೆದು ಚಿಕಿತ್ಸೆ ಪಡೆಯಲು ಕಷ್ಟವಾಗಬಹುದು. ಅಂತವರಿಗೆ ಉಚಿತವಾಗಿ ತಾತ್ಕಾಲಿಕ ಆಕ್ಸಿಜನ್ (ಆಸ್ಪತ್ರೆಗೆ ದಾಖಲಾಗುವವರೆಗೂ) ಪೂರೈಸುವ ಯೋಜನೆ ಇದಾಗಿದೆ. ಈಗಾಗಲೇ ಈ ಯೋಜನೆ ಆರಂಭವಾಗಿದೆ.


Click it and Unblock the Notifications











