ಬದಲಾಗು, ಬದಲಾಯಿಸು: ನಿಜವಾದ ಹೀರೋಗಳಿಗೆ ಕೈ ಮುಗಿದ ಸಿನಿಮಾ ಹೀರೋಗಳು
ಕನ್ನಡದ ಸ್ಟಾರ್ ನಾಯಕರೆಲ್ಲಾ ಒಟ್ಟಾಗಿ ಕೊರೊನಾ ಜಾಗೃತಿಗಾಗಿ ಮಾಡಿದ 'ಬದಲಾಗು ನೀನು, ಬದಲಾಯಿಸು ನೀನು' ಹಾಡನ್ನು ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ.
Recommended Video
ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ನಿರ್ಮಿಸಲಾದ ಈ ಹಾಡನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಈ ಹಾಡು ಕೊರೊನಾ ಜಾಗೃತಿಯ ಜೊತೆಗೆ ಕೊರೊನಾ ಸಮಯದಲ್ಲಿ ಮುಂದೆ ನಿಂತು ಹೋರಾಡುತ್ತಿರುವ ಆರೋಗ್ಯ, ಪೊಲೀಸ್, ಪೌರ ಕಾರ್ಮಿಕರ ಶ್ರಮ ಗುರುತಿಸುವ ಹಾಡಾಗಿದೆ.
ಶಿವರಾಜ್ಕುಮಾರ್ ಆದಿಯಾಗಿ ಬಹುತೇಕ ಎಲ್ಲಾ ಸ್ಟಾರ್ ನಟರು ಸಹ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಕೊರೊನಾ ಸಮಯದಲ್ಲಿ ನಿಜವಾದ ನಾಯಕರು ನಾವಲ್ಲ, ಬದಲಿಗೆ ಪೌರ ಕಾರ್ಮಿಕರು, ಪೊಲೀಸರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ರೈತರು ಎಂದು ಅವರಿಗೆ ನಮಿಸಿದ್ದಾರೆ.

ಬಣಗುಟ್ಟುವ ಬೆಂಗಳೂರಿನ ದರ್ಶನ
ಕೊರೊನಾ ಗೆ ಮೊದಲು ಕೊರೊನಾ ನಂತರದ ಬೆಂಗಳೂರಿನ ದರ್ಶನದೊಂದಿಗೆ ಆರಂಭವಾಗುವ ಹಾಡು, ಕೊರೊನಾ ಜನರ ಜೀವನದಲ್ಲಿ ಮಾಡಿದ ಬದಲಾವಣೆ ಬಗ್ಗೆ ಆರಂಭದಲ್ಲಿ ಬೆಳಕು ಚೆಲ್ಲುತ್ತದೆ. ಬಣಗುಟ್ಟಿತ್ತಿರುವ ಬೆಂಗಳೂರಿನ ದೃಶ್ಯಗಳು ಹಾಡಿನ ಆರಂಭದಲ್ಲಿವೆ.

ಶಿವರಾಜ್ಕುಮಾರ್ ಆದಿಯಾಗಿ ಬಹುತೇಕ ನಾಯಕರು
ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ದರ್ಶನ್, ಪುನೀತ್, ಯಶ್, ಗಣೇಶ್, ರಕ್ಷಿತ್ ಶೆಟ್ಟಿ, ರವಿಶಂಕರ್, ಇಶಾನ್ ಹೀಗೆ ಹಲವು ಸ್ಟಾರ್ ನಾಯಕರು ಕ್ಯಾಮೆರಾ ಮುಂದೆ ಬಂದು, ನಮ್ಮನ್ನು ಸ್ಟಾರ್, ಹೀರೋ ಎಂದು ಜನ ಕರೆಯುತ್ತಾರೆ ಅದಕ್ಕೆ ನಾವು ಋಣಿ, ಆದರೆ ನಮಗೆ ಪೌರ ಕಾರ್ಮಿಕರು, ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು, ರೈತರು ಹೀರೋಗಳು ಎಂದಿದ್ದಾರೆ.

ಸುಮಲತಾ, ಅನುಶ್ರೀ, ಶಾನ್ವಿ ಇದ್ದಾರೆ
ನಾಯಕಿಯರಿಗೆ ಹೆಚ್ಚಿನ ಪ್ರಾಶಸ್ತ್ಯವಿಲ್ಲವಾದರೂ ನಿರೂಪಕಿ ಅನುಶ್ರೀ, ನಾಯಕಿ ಶಾನ್ವಿ ಶ್ರೀವತ್ಸ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಸಂಸದೆ ಸುಮಲತಾ, ಯುವ ನಾಯಕರಾದ ಅಭಿಶೇಕ್, ಧ್ರುವ ಸರ್ಜಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಸಹ ಇದ್ದಾರೆ
ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಹಾಗೂ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಸಹ ಆರೋಗ್ಯ ಯೋಧರಿಗೆ ಕೈ ಮುಗಿದಿದ್ದಾರೆ. ಸಿಎಂ ಯಡಿಯೂರಪ್ಪ, ವೈದ್ಯಕೀಯ ಸಚಿವ ಸುಧಾಕರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 'ಬದಲಾಗುವ, ಬದಲಾಯಿಸುವ' ಕುರಿತು ಮಾತನಾಡಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಸಹ ಕಾಣಿಸಿಕೊಳ್ಳುತ್ತಾರೆ.


Click it and Unblock the Notifications











