'ಬಹುರೂಪಿ' ಚಲನಚಿತ್ರೋತ್ಸವಕ್ಕೆ ಹಿರಿಯ ನಟ ದೊಡ್ಡಣ್ಣ ಚಾಲನೆ
ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಅಂಗವಾಗಿ ಮೈಸೂರಿನ ರಂಗಾಯಣದಲ್ಲಿ ನಡೆದ ಚಲನಚಿತ್ರೋತ್ಸವಕ್ಕೆ ಹಿರಿಯ ನಟ ದೊಡ್ಡಣ್ಣ ಚಾಲನೆ ನೀಡಿದರು.
ರಂಗಾಯಣದ ಭೂಮಿಗೀತದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಮೈಸೂರು ಅರಸರು ದೇವರಿದ್ದಂತೆ. ಬೆಳಕು, ನೀರು, ವಿದ್ಯೆ ಕೊಟ್ಟ ಪುಣ್ಯಾತ್ಮರು ಅವರು ಎಂದು ಶ್ಲಾಘಿಸಿದರು.
ನನ್ನ ಅಣ್ಣನಿಂದ ನಟನೆ ಕಲಿತೆ, ಬಹುರೂಪಿ ಎಂಬ ಶಬ್ಧವೆ ಚೆಂದ. ಓದು ಬಾರದವರಿಗೂ ನಾಟಕ ಮನರಂಜನೆ ಒದಗಿಸುತ್ತದೆ. ನಾಟಕದ ನಟನೆಗೆ ಸಾವಿಲ್ಲ. ಅವನು ಎಲ್ಲಿ ಬೇಕಾದರೂ ಬದುಕುತ್ತಾನೆ. ಪ್ರತಿ ಜಿಲ್ಲೆಗಳಲ್ಲಿ ರಂಗಾಯಣ ಆಗಬೇಕು. ನಮ್ಮ ಸಂಸ್ಕೃತಿ ಪರಿಸಬೇಕು. ಸರಕಾರ ಜಾಗ ಕೊಡಬೇಕು. ರಂಗಾಯಣ ಗ್ರಂಥ ಭಂಡಾರ ಇದು ಎಂದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಮಲ್ಲಿಕಾರ್ಜುನ ಸ್ವಾಮಿ, ಬಹುರೂಪಿ ಸಂಚಾಲಕರಾದ ಜಗದೀಶ್ ಮನವಾರ್ತೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್, ಚಲನಚಿತ್ರೋತ್ಸವದ ಸಂಚಾಲಕರಾದ ಮನು ಕೆ., ಶಶಿಕಲಾ ಸೇರಿದಂತೆ ಇತರರು ಇದ್ದರು.
ಯಾವ ಸಿನಿಮಾಗಳನ್ನು ನೋಡಬಹುದು?
ಡಿಸೆಂಬರ್ 9ರಂದು ಜೈ ಹೋ-ಎ ಫಿಲ್ಮ್ ಆನ್ ಎ.ಆರ್.ರೆಹಮಾನ್, ಕರ್ಮ(ನೇಪಾಳಿ) ಸಿನಿಮಾಗಳು ಪ್ರದರ್ಶನಗೊಂಡಿವೆ. ಇಂದು ಡಿಸೆಂಬರ್ 10ರಂದು ಹಿಮಾಲಯ ವಿತ್ ಮೈಕಲ್ ಪಾಲಿನ್-ಲೀಪಿಂಗ್ ಟೈಗರ್ಸ್ ಆಂಡ್ ನೇಕೆಡ್ ನಾಗಾಸ್ (ಇಂಗ್ಲಿಷ್), ಇಂಡೋ-ಪಾಕ್ ಕಾನ್ಫ್ಲಿಕ್ಟ್-1971, ಮುಕ್ತಿ (ಇಂಗ್ಲಿಷ್), 1971 (ಹಿಂದಿ), 11ರಂದು ರಾಂಚಿ ಪಖಾರ (ಹಿಂದಿ), ದಿ ಪ್ರೈಸ್ ಆಫ್ ಫ್ರೀ (ಇಂಗ್ಲಿಷ್), ಟೇಕ್ ಆಫ್(ಮಲಯಾಳಂ), 12ರಂದು ಕಾವಿ (ಹಿಂದಿ), ಮಿಟ್ಟಿ ಮಾನಸ್ (ಹಿಂದಿ), ಉಲ್ಗುಲನ್ ಏಕ್ ಕ್ರಾಂತಿ (ಹಿಂದಿ), 13ರಂದು ಗೌರ್ ಇನ್ ಮೈ ಗಾರ್ಡನ್ (ಇಂಗ್ಲಿಷ್), ಝರಿಯಾ(ಹಿಂದಿ), ದಿ ಸ್ಟೋರಿ ಆಫ್ ಜೆಲ್ಲಿ ಕಟ್ಟು (ಇಂಗ್ಲಿಷ್), ಸೀಡ್ಸ್ ಆಫ್ ಲ್ಫ್ (ಇಂಗ್ಲಿಷ್), ಮೆರ್ಕು ತೊಡರ್ಚಿ ಮಲೈ (ತಮಿಳು), 14ರಂದು ಫಿಡ್ಲರ್ ಆನ್ ದಿ ತ್ಯಾಚ್ (ಇಂಗ್ಲಿಷ್), ಮೈಸೂರು ಮಂಜುನಾಥ್ (ಕನ್ನಡ), ರಾಷ್ಟ್ರಕವಿ ಕುವೆಂಪು: ಬದುಕು ಬರಹ(ಕನ್ನಡ), ಉಸ್ತಾದ್ ಬಿಸ್ಮಿಲ್ಲಾ ಖಾನ್(ಹಿಂದಿ), ದೋ ಆಂಖೇ ಬಾರಾ ಹಾತ್(ಹಿಂದಿ), 15ರಂದು ಕೊರಲ್ ವುಮೆನ್(ಇಂಗ್ಲಿಸ್), ದಿ ಸ್ಟಾರ್ಕ್ ಸೇವಿಯರ್ಸ್(ಇಂಗ್ಲಿಷ್), ಟಿಂಬಕ್ಟು (ಇಂಗ್ಲಿಷ್), ಗಂಧಗುಡಿ(ಕನ್ನಡ) ಸಿನಿಮಾಗಳು ಪ್ರದರ್ಶಿತಗೊಳ್ಳಲಿವೆ.
60 ಮಳಿಗೆ ನಿರ್ಮಾಣ
ಕರಕುಶಲ ವಸ್ತುಗಳು, ಪುಸ್ತಕಗಳ ಪ್ರದರ್ಶನ, ಆಹಾರ, ತಿನಿಸು ಮತ್ತು ಮಾರಾಟಕ್ಕಾಗಿ 60 ಮಳಿಗೆ ನಿರ್ಮಿಸಲಾಗಿದೆ. ಕರಕುಶಲ ವಸ್ತುಗಳು ಮತ್ತು ಬಟ್ಟೆಗಳಿಗಾಗಿ 15 ಮಳಿಗೆ, ದೇಸಿ ಆಹಾರಕ್ಕಾಗಿ 15ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಸಹಜ ಕೃಷಿ ಆಹಾರಗಳು, ಮೈಸೂರು ಶೈಲಿ, ಕೊಡಗು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಬಗೆ ಬಗೆಯ ವಿಶೇಷ ಆಹಾರ ಪದಾರ್ಥಗಳ ಘಮಲು ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ,'' ಎಂದು ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು.
ವನರಂಗದಲ್ಲಿ ಡಿ.9ರಂದು ಚಾಮರಾಜನಗರದ ಶಿವಮಲ್ಲೇಗೌಡ ಮತ್ತು ತಂಡದಿಂದ ಗೊರವರ ನೃತ್ಯ, ಡಾ.ಮನೋನ್ಮಣಿ ಮತ್ತು ತಂಡದಿಂದ ಸಂಪ್ರದಾಯದ ಹಾಡು, 10ರಂದು ಮೈಸೂರಿನ ಸುಂದರೇಶ್ ಮತ್ತು ತಂಡದಿಂದ ಡೊಳ್ಳು ಕುಣಿತ, ಯದುಕುಮಾರ್ ಮತ್ತು ತಂಡದಿಂದ ನಾದಸ್ವರ, 11 ಮಂಡ್ಯದ ಸವಿತಾ ಚಿರಕುನ್ನಯ್ಯ ತಂಡದಿಂದ ಪೂಜಾ ಕುಣಿತ, ಮೈಸೂರಿನ ಡಾ.ಮೈಸೂರು ಗುರುರಾಜ್ ಮತ್ತು ತಂಡದಿಂದ ನೀಲಗಾರರ ಮೇಳ, 12 ರಂದು ಚಿಕ್ಕಮಗಳೂರಿನ ರಂಗನಾಥ ಮತ್ತು ತಂಡದಿಂದ ಸೋಮನ ಕುಣಿತ, ಉಡುಪಿಯ ಶ್ರೀರಾಮ ಜನಪದ ಕಲಾ ತಂಡದಿಂದ ಕರಗ ಕೋಲಾಟ, 13ರಂದು ದಕ್ಷಿಣ ಕನ್ನಡದ ಮಂಜುನಾಥ ಮತ್ತು ತಂಡದಿಂದ ಕಂಗೀಲು, ಡಾ. ಮಳವಳ್ಳಿ ಮಹದೇವಸ್ವಾಮಿ ಅವರಿಂದ ಮಂಟೇಸ್ವಾಮಿ ಹಾಡು, 14ರಂದು ಹಾಸನದ ಓಂಕಾರ್ ಮೂರ್ತಿ ತಂಡದಿಂದ ಚಿಟ್ ಮೇಳ, ಶುಭಾ ರಾಘವೇಂದ್ರ ತಂಡದಿಂದ ಜಾನಪದ ಗೀತೆ, 15ರಂದು ಕೆ.ಎನ್.ಮಹೇಶ್ ಅವರಿಂದ ವೀರಗಾಸೆ, ಕೊಡಗಿನ ಸೂರಜ್ ಮತ್ತು ತಂಡದಿಂದ ಬೊಳಕಾಟ್ ನಡೆಯಲಿದೆ.


Click it and Unblock the Notifications











