ದರ್ಶನ್ಗೆ ಬೇಲ್ ಸಿಗಲು ಕಾನೂನಾತ್ಮಕವಾಗಿ ಈ ಅಂಶಗಳನ್ನು ರುಜುವಾತು ಮಾಡಬೇಕು!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 19 ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು ಎ2 ಆಗಿ ವಿಚಾರಣಾಧೀನ ಖೈದಿಯಾಗಿ ನಟ ದರ್ಶನ್ ಸಹ ಸೆರೆವಾಸ ಅನುಭವಿಸುತ್ತಿದ್ದಾರೆ. ಕೊಲೆ ಪ್ರಕರಣವಾಗಿರುವುದರಿಂದ ಅಷ್ಟು ಸುಲಭವಾಗಿ ಜಾಮೀನು ಸಿಗಲ್ಲ ಎನ್ನಲಾಗ್ತಿದೆ.
ಪೊಲೀಸರು ಶಾರ್ಜ್ಶೀಟ್ ಸಲ್ಲಿಸುವವರಿಗೂ ಬೇಲ್ ಸಿಗಲ್ಲ ಎಂದು ಚರ್ಚೆ ನಡೆಯುತ್ತಿದೆ. ಅಂದಹಾಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ಸಿಗಬೇಕು, ಅವರು ಹೊರ ಬರಬೇಕು ಅಂದ್ರೆ ಒಂದಷ್ಟು ಅಂಶಗಳನ್ನು ರುಜುವಾತು ಮಾಡಬೇಕಿದೆ. ಸಾಕಷ್ಟು ಜನ ವಕೀಲರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

1. ಮೊದಲನೆಯದಾಗಿ ಅಪರಾಧ ಕೃತ್ಯ ನಡೆದಾಗ ಅಪರಾಧ ಮಾಡುವ ಮಾನಸಿಕ ಉದ್ದೇಶ ಅವರಿಗೆ ಇರಲಿಲ್ಲ. ಅಂದರೆ ಕ್ರಿಮಿನಲ್ ಉದ್ದೇಶ ಇರಲಿಲ್ಲ. ಅರ್ಥಾತ್ ಮರ್ಡರ್ ಮಾಡುವ ಮನಸ್ಸು ಇರಲಿಲ್ಲ. ಆಕಸ್ಮಿಕವಾಗಿ ಅಚಾತುರ್ಯದಿಂದ ನಡೆದ ಘಟನೆ ಇದು ಎಂದು ಸಾಬೀತುಪಡಿಸಬೇಕು.
2. ಕೊಲೆ ಯಾವ ಪೆಟ್ಟಿನಿಂದ ಯಾವ ಸಮಯದಲ್ಲಿ ಆಯಿತು. ಆತ ಯಾವಾಗ ಕೊನೆಯುಸಿರಳೆದ. ಆ ಸಮಯದಲ್ಲಿ ನಟ ದರ್ಶನ್ ಸ್ಥಳದಲ್ಲಿ ಇರಲಿಲ್ಲ ಎನ್ನುವುದನ್ನು ರುಜುವಾತು ಮಾಡಬೇಕಾಗುತ್ತದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿಗೆ ಎರಡು ಏಟು ಹಾಕಿ, ಬುದ್ದಿ ಹೇಳಿ ಕಳುಹಿಸುವ ಉದ್ದೇಶ ಇತ್ತು. ತೀರ ಕೊಲ್ಲುವ ಉದ್ದೇಶ ಇರಲಿಲ್ಲ, ದರ್ಶನ್ ಆ ಸಮಯದಲ್ಲಿ ಅಲ್ಲಿರಲಿಲ್ಲ. ದರ್ಶನ್ ಅವರನ್ನು ಇಂಪ್ರೆಸ್ ಮಾಡುವ ಕಾರಣಕ್ಕೆ ಗ್ಯಾಂಗ್ನವರು ಥಳಿಸುವ ಭರಾಟೆಯಲ್ಲಿ ಆತನ ಜೀವ ಹೋಗಿರಬಹುದು. ಆತ ಅಷ್ಟೇನು ಬಲಾಢ್ಯನಾಗಿ ಇರಲಿಲ್ಲ. ಹಾಗಾಗಿ ಏಳೆಂಟು ಜನ ಥಳಿಸುವ ವೇಳೆ ಮೃತಪಟ್ಟಿದ್ದಾನೆ. ಹಾಗಾಗಿ ದರ್ಶನ್ ಗ್ಯಾಂಗ್ನವರಿಗೂ ಕೊಲೆ ಮಾಡುವ ಉದ್ದೇಶ ಇರಲೇ ಇಲ್ಲ, ಇದು ಅಚಾತುರ್ಯದಿಂದ ಆಗಿದೆ ಎಂದು ಸಾಬೀತು ಮಾಡಬೇಕಾಗುತ್ತದೆ.

3. ಪೊಲೀಸರು ಆರೋಪಿಗಳನ್ನು ಬಂಧಿಸುವ ವೇಳೆ, ತನಿಖೆ ವೇಳೆ ಪೊಲೀಸರು ಸರಿಯಾಗಿ ಪ್ರಕ್ರಿಯೆಗಳನ್ನು(CRPC) ಪಾಲನೆ ಮಾಡದೇ ಇರುವುದು. ಅಂದ್ರೆ ಕುಟುಂಬ ಸದಸ್ಯರಿಗೆ ವಕೀಲರಿಗೆ ಯಾವುದೇ ಮಾಹಿತಿ ಕೊಡದೇ ಅಜ್ಞಾತ ಸ್ಥಳದಲ್ಲಿಟ್ಟಿಕೊಳ್ಳುವುದು, ಬೇರೆ ಕಡೆ ತನಿಖೆ ಮಾಡುವುದು, ಕಸ್ಟಡಿಗೆ ನೀಡುವ ಸಮಯದಲ್ಲಿ ವಕೀಲರಿಗೆ ಆ ಬಗ್ಗೆ ತಿಳಿಸದೇ ಇದ್ದದ್ದು. ಆರೋಪಿಗಳಿಗೆ ಸತ್ಯವನ್ನು ರುಜುವಾತು ಮಾಡಿಕೊಳ್ಳಲು ಅವಕಾಶ ಕೊಡದೇ ಇದ್ದದ್ದು ರೀತಿಯ ಪ್ರಕ್ರಿಯೆಗಳಲ್ಲಿ ಒಂದು ವೇಳೆ ತಪ್ಪುಗಳು ಆಗಿದ್ದರೆ ಅದರ ಬಗ್ಗೆ ಪರಿಶೀಲಿಸಬೇಕು.
ಬರೀ ಮಾಧ್ಯಮಗಳಲ್ಲಿ ಬರುವ ವಿಚಾರಗಳನ್ನು ಬಿಟ್ಟು ನಿಜವಾಗಿ ತನಿಖೆ ವೇಳೆ ಏನೆಲ್ಲಾ ಆಗಿದೆ. ಪೊಲೀಸರು ಏನೆಲ್ಲಾ ಸಾಕ್ಷ್ಯಾಧಾರ ಸಂಗ್ರಹಿಸಿದ್ದಾರೆ? ಆರೋಪಪಟ್ಟಿಯಲ್ಲಿ ಏನೆಲ್ಲಾ ಇರುತ್ತದೆ. ಎನ್ನುವುದನ್ನು ನೋಡಬೇಕು. ತನಿಖೆಯ ಸಂಪೂರ್ಣ ಮಾಹಿತಿ ವಕೀಲರಿಗೆ ಸಿಕ್ಕ ಬಳಿಕ ತನಿಖೆ ಪ್ರಕ್ರಿಯೆಯಲ್ಲಿ ಏನಾದರೂ ದೋಷಗಳು ಕಂಡುಬಂದಿದ್ದರೆ, ಕಾನೂನು ಪ್ರಕ್ರಿಯೆ ಸರಿಯಾಗಿ ಆಗಿಲ್ಲ, ಉದ್ದೇಶಪೂರ್ವಕವಾಗಿ ಆ ವ್ಯಕ್ತಿಯನ್ನು ಟಾರ್ಗೆಟ್ ಮಾಡಿದ್ದಾರೆ ಎನ್ನುವ ಅಂಶಗಳನ್ನು ನ್ಯಾಯಾಲಯದಲ್ಲಿ ರುಜುವಾತು ಮಾಡಿದರೆ ಮಾತ್ರ ದರ್ಶನ್ಗೆ ಬೇಲ್ ಸಿಗುವ ಸಾಧ್ಯತೆಯಿದೆ. ಇಲ್ಲದಿದ್ದರೆ ಕಷ್ಟ ಎಂದು ವಕೀಲರು ಹೇಳುತ್ತಿದ್ದಾರೆ.
ದರ್ಶನ್ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ವಕೀಲರ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಈವರೆಗೆ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.


Click it and Unblock the Notifications











