'ಲವ್ ಯು ರಚ್ಚು' ಅವಘಡ: ಎಲ್ಲ ಆರೋಪಿಗಳಿಗೆ ಜಾಮೀನು
ಅಜಯ್ ರಾವ್, ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಲವ್ ಯು ರಚ್ಚು' ಚಿತ್ರೀಕರಣ ಸಂದರ್ಭದಲ್ಲಿ ಅವಘಡ ನಡೆದು ಸಾಹಸ ಕಲಾವಿದನೊಬ್ಬ ನಿಧನ ಹೊಂದಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲರಿಗೂ ಜಾಮೀನು ದೊರೆತಿದೆ.
ಬಿಡದಿ ಸಮೀಪದ ಜೋಗಿಪಾಳ್ಯ ಗ್ರಾಮದಲ್ಲಿ ಆಗಸ್ಟ್ 9 ರಂದು 'ಲವ್ ಯು ರಚ್ಚು' ಚಿತ್ರೀಕರಣ ನಡೆವ ವೇಳೆ ಸಾಹಸ ಕಲಾವಿದ ವಿವೇಕ್ ವಿದ್ಯುತ್ ಶಾಕ್ಗೆ ಒಳಪಟ್ಟು ನಿಧನ ಹೊಂದಿದ್ದರು. ರಂಜಿತ್ ಎಂಬ ಮತ್ತೊಬ್ಬ ಸಾಹಸ ಕಲಾವಿದ ತೀವ್ರ ಗಾಯಗಳೊಟ್ಟಿಗೆ ಆಸ್ಪತ್ರೆ ಸೇರಿದ್ದರು. ಈ ಘಟನೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಬಿಡದಿ ಪೊಲೀಸರು ತನಿಖೆ ನಡೆಸಿ ಕೆಲವರನ್ನು ಬಂಧಿಸಿದ್ದರು.
ಸಿನಿಮಾದ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್ ಅವರುಗಳನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು ಆದರೆ ಅವರು ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದರು.

ನಾಳೆ ಬಿಡುಗಡೆ ಆಗುವ ಸಾಧ್ಯತೆ
ಇದೀಗ ರಾಮನಗರ ಸೆಷನ್ಸ್ ನ್ಯಾಯಾಲಯದಲ್ಲಿ ಸಿನಿಮಾದ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್ ಅವರುಗಳಿಗೆ ಜಾಮೀನು ನೀಡಲಾಗಿದೆ. ಪೊಲೀಸರ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ ನಿರ್ಮಾಪಕ ಗುರು ದೇಶಪಾಂಡೆ ಅವರಿಗೂ ಜಾಮೀನು ದೊರೆತಿದೆ. ರಾಮನಗರ ಜಿಲ್ಲಾ ಕಾರಾಗೃಹದಲ್ಲಿರುವ ನಾಲ್ವರು ನಾಲ್ವರು ನಾಳೆ (ಆಗಸ್ಟ್ 27) ಬಿಡುಗಡೆ ಹೊಂದುವ ಸಾಧ್ಯತೆ ಇದೆ.

ಅಜಯ್ ರಾವ್ಗೆ ನಿರೀಕ್ಷಣಾ ಜಾಮೀನು ಮಂಜೂರು
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಜಯ್ ರಾವ್ಗೆ ಬಿಡದಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಅದರ ಬೆನ್ನಲ್ಲೆ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗಾಗಿ ರಾಮನಗರ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಅವರಿಗೂ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ. ಆದೇಶ ಹೊರಬೀಳುವ ಮೊದಲೇ ನಟ ಅಜಯ್ ರಾವ್ ಬಿಡದಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ಎದುರಿಸಿ ಹೋಗಿದ್ದಾರೆ.

ಘಟನೆ ನಡೆದಿದ್ದು ಹೇಗೆ?
ಜೋಗಿಪಾಳ್ಯದ ಪುಟ್ಟರಾಜು ಎಂಬುವರ ತೋಟದಲ್ಲಿ ಫೈಟ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ಸಮಯ ಕ್ರೇನ್ ಒಂದನ್ನು ಬಳಸಿ ರೋಪ್ ಮೂಲಕ ಸಾಹಸ ಕಲವಿದರನ್ನು ಕಟ್ಟಿ ತೊಟ್ಟಿಗೆ ಹಾರುವ ದೃಶ್ಯದ ಚಿತ್ರಕರಣ ಮಾಡಲಾಗುತ್ತಿತ್ತು. ಫೈಟರ್ ರಂಜಿತ್ಗೆ ಕಬ್ಬಿಣದ ರೋಪ್ ಕಟ್ಟಿ ಅದನ್ನು ಕ್ರೇನ್ಗೆ ಕಟ್ಟಲಾಗಿತ್ತು. ರೋಪ್ನ ಮತ್ತೊಂದು ತುದಿಯನ್ನು ಫೈಟರ್ ವಿವೇಕ್ ಹಿಡಿದುಕೊಂಡಿದ್ದರು. ಕ್ರೇನ್ ಚಾಲಕ ಮಹದೇವ್ ಕ್ರೇನ್ ಅನ್ನು ಮೇಲಕ್ಕೆ ಎತ್ತಿದಾಗ ಅಲ್ಲಿಯೇ ಇದ್ದ ವಿದ್ಯುತ್ ಹೈಕೆನ್ಷನ್ ವೈಯರ್ಗೆ ಕ್ರೇನ್ ತಾಗಿ ಕಬ್ಬಿಣದ ರೋಪ್ ಮೂಲಕ ವಿದ್ಯುತ್ ಪ್ರವಹಿಸಿ ರೋಪ್ ಅನ್ನು ಹಿಡಿದಿದ್ದ ವಿವೇಕ್ ಮೃತಪಟ್ಟರು. ರೋಪ್ ಕಟ್ಟಿಕೊಳ್ಳುವಾಗ ಜಾಕೆಟ್ ಧರಿಸಿದ್ದ ಕಾರಣ ರಂಜಿತ್ ಗಾಯಗಳಾಗಿ ಬದುಕಿ ಉಳಿದರು.

ಅಜಯ್ ರಾವ್, ರಚಿತಾ ರಾಮ್ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಸಿನಿಮಾದ ನಾಯಕ ಅಜಯ್ ರಾವ್, ನಾಯಕಿ ರಚಿತಾ ರಾಮ್, ತೋಟದ ಮಾಲೀಕ ಪುಟ್ಟರಾಜು, ಚಿತ್ರೀಕರಣ ಸಮಯದಲ್ಲಿ ಹಾಜರಿದ್ದ ಕೆಲವರನ್ನು ವಿಚಾರಣೆ ನಡೆಸಿದ್ದಾರೆ. ಈ ನಡುವೆ ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಚಿತ್ರ ನಿರ್ಮಾಣ ಸಂಸ್ಥೆಯ ವತಿಯಿಂದ ಮೃತ ವಿವೇಕ್ ಕುಟುಂಬಕ್ಕೆ ಹತ್ತು ಲಕ್ಷ ಹಣ ಪರಿಹಾರ ಘೋಷಿಸಿದ್ದಾರೆ. ಐದು ಲಕ್ಷ ಹಣವನ್ನು ಈಗಲೇ ನೀಡುವುದಾಗಿ ಇನ್ನುಳಿದ ಹಣವನ್ನು ಆರೋಪಿಗಳಿಗೆ ಜಾಮೀನು ಸಿಕ್ಕ ಬಳಿಕ ನೀಡುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.


Click it and Unblock the Notifications











