ಹೆತ್ತ ತಂದೆಯ ಕೊಲೆಗೆ ಸುಪಾರಿ ನೀಡಿದ ಚೈತ್ರಾ ಕುಂದಾಪುರ ? ಪೊಲೀಸರ ಮೊರೆ ಹೋದ ಬಾಲಕೃಷ್ಣ ನಾಯಕ್..!
ಹಿಂದೂತ್ವವನ್ನು ಕಣ ಕಣದಲ್ಲಿ ತುಂಬಿಕೊಂಡು, ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದವರು ಚೈತ್ರಾ ಕುಂದಾಪುರ. ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಆ ನಂತರ ನಿರೂಪಕಿಯಾಗಿಯೂ ಕೆಲಸವನ್ನು ಮಾಡಿದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮತಿಯ ಸದಸ್ಯೆ ಕೂಡ ಆಗಿದ್ದವರು. ಇನ್ನೂ ಪ್ರೇಮ ಪಾಶ ಎಂದ ಕೃತಿಯ ಲೇಖಕಿ ಕೂಡ ಹೌದು ಚೈತ್ರಾ ಕುಂದಾಪುರ.
ಇಂಥಾ ಚೈತ್ರಾ ಕುಂದಾಪುರ ಮತ್ತು ಇವರ ತಂದೆ ಬಾಲಕೃಷ್ಣ ನಾಯಕ್ ನಡುವೆ ಕಳೆದ ಕೆಲ ದಿನಗಳಿಂದ ಬೀದಿ ಜಗಳ ನಡೆಯುತ್ತಿದೆ. ಶ್ರೀಕಾಂತ್ ಜೊತೆ ಚೈತ್ರಾ ಕುಂದಾಪುರ ಮದುವೆಯಾದ ಬೆನ್ನಲ್ಲಿಯೇ ತಮ್ಮ ಮಗಳ ಮೇಲೆ ಬಾಲಕೃಷ್ಣ ನಾಯಕ್ ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ಹೆತ್ತ ತಂದೆಯನ್ನೇ ನೋಡಿಕೊಳ್ಳದ ಮಗಳು ಅದ್ಯಾವ ಸೀಮೆ ದೇಶ ಪ್ರೇಮಿ ಎಂದು ಹೇಳಿದ್ದಾರೆ. ನನ್ನ ಮಗಳು ಕಳ್ಳಿ ಅವಳಿಗೆ ಮನ್ನಣೆ ನೀಡಬೇಡಿ ಎಂದು ಕೂಡ ಹೇಳಿದ್ದಾರೆ.

ಬಾಲಕೃಷ್ಣ ನಾಯಕ್ ಅವರ ಈ ಮಾತುಗಳಿಗೆ ಚೈತ್ರಾ ಕೂಡ ಪ್ರತ್ಯುತ್ತರವನ್ನು ನೀಡಿದ್ದು ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರು ಅವರು ಎಂದು ಈ ಹಿಂದೆ ಹೇಳಿದ್ದಾರೆ. ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ.. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ ಎಂದು ಕಿಡಿ ಕಾರಿದ್ದಾರೆ.
ಇದರ ನಡುವೆ ಇದೀಗ ತಂದೆ-ಮಗಳ ಜಗಳ ಮತ್ತೊಂದು ಹಂತಕ್ಕೆ ತಲುಪಿದ್ದು ಮಗಳ ವಿರುದ್ದ ಬಾಲಕೃಷ್ಣ ನಾಯಕ್ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದಾರೆ. ಆಕೆಗೆ ಅಂಡರ್ವರ್ಲ್ಡ್ ಡಾನ್ಗಳ ಸಂಪರ್ಕ ಇದ್ದು ನನಗೆ ರಕ್ಷಣೆ ನೀಡಿ ಎಂದು ಮನವಿಯನ್ನು ಮಾಡಿದ್ದಾರೆ.
ಬಾಲಕೃಷ್ಣ ನಾಯಕ್ ದೂರಿನಲ್ಲೇನಿದೆ ?
ಶ್ರೀಕಾಂತ್ ಜೊತೆ ನನ್ನ ಮಗಳು ಮದುವೆಯಾಗುತ್ತಿರುವ ವಿಚಾರ ಗೊತ್ತಾಯ್ತು, ಆಗ ನಾನು ನನ್ನ ಮಗಳ ಬಳಿ ಆತನನ್ನು ಮದುವೆ ಆಗಬೇಡ ಆತ ಸರಿ ಇಲ್ಲ ಎಂದು ಹೇಳಿದಾಗ ನನ್ನ ಮಗಳು ಚೈತ್ರಾ ಮತ್ತು ನನ್ನ ಹೆಂಡತಿ ರೋಹಿಣಿ ಇಬ್ಬರು ಹಣ ನೀಡುವಂತೆ ಪೀಡಿಸಿದರು. ಶ್ರೀಕಾಂತ್ ಬಿಟ್ಟು ಒಂದು ವೇಳೆ ಬೇರೆ ಹುಡುಗನನ್ನು ಮದುವೆಯಾಗಬೇಕು ಅಂದರೆ ರೂ.5,00,000/- ನಗದು ನೀಡಬೇಕೆಂದು ಇಬ್ಬರು ಒತ್ತಡ ಹೇರಿದರು. ಇದಲ್ಲದೇ ಶ್ರೀಕಾಂತ್ ಜೊತೆ ಮದುವೆಗೆ ಒಪ್ಪದೇ ಇದಲ್ಲಿ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾಳೆ. ಅದಕ್ಕೆ ನಾನು ಒಪ್ಪಲಿಲ್ಲ ಎಂದು ಬಾಲಕೃಷ್ಣ ನಾಯಕ್ ದೂರು ಸಲ್ಲಿಸಿದ್ದಾರೆ.
ಮನೆಯಲ್ಲಿ ಹಣ ಎಣಿಸುತ್ತಿದ್ದಳು
ಅದೊಂದು ದಿನ ರಾತ್ರಿ ಕೋಟ್ಯಂತರ ರೂಪಾಯಿ ಹಣ ತಂದು ಎಣಿಸಿದ್ದನ್ನು ಕಂಡು ನಾನು ಭಯಗೊಡೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಅವರು ಹೆದರಿಸಿದರು. ಹೀಗಾಗಿ ನಾನು ಆ ನಂತರ ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದೆ. ಆ ನಂತರ ನನಗೆ ಆ ಹಣ ಗೋವಿಂದ ಪೂಜಾರಿಗೆ ಸೇರಿದ್ದು ಎನ್ನುವುದು ಗೊತ್ತಾಯ್ತು. ಈ ವಿಚಾರ ನಾನು ಯಾರ ಮುಂದೆಯಾದರು ಹೇಳಬಹುದೆಂದು ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು ಎಂದು ಬಾಲಕೃಷ್ಣ ನಾಯಕ್ ದೂರಿನಲ್ಲಿ ಹೇಳಿದ್ದಾರೆ.
ಆಸ್ತಿಗಾಗಿ ಬೆದರಿಕೆ
ಇನ್ನು ನನಗೆ ಸೇರಿದ ಕುಂದಾಪುರದಲ್ಲಿರುವ ಆಸ್ತಿಯನ್ನು ಯಾವ ರೀತಿಯಲ್ಲಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂದು ಗೊತ್ತಿದೆ. ಹಾಗೆಯೇ ತನ್ನ ಹೆಸರಿಗೆ ಸದರಿ ಆಸ್ತಿಯನ್ನು ಮಾಡಿಕೊಳ್ಳುತ್ತೇನೆಂದು ಆಕೆ ಬೆದರಿಕೆ ಹಾಕಿದ್ದಾಳೆ, ಭೂಗತ ಲೋಕದ ಜೊತೆ ಆಕೆಗೆ ಸಂಪರ್ಕವಿದ್ದು, ಆಸ್ತಿಗಾಗಿ ಆಕೆ ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ. ಈಗಾಗಲೇ ನಾನು ಸತ್ತು ಹೋಗಿದ್ದೇನೆ ಎಂದು ಎಲ್ಲೆಡೆ ಹೇಳಿಕೊಂಡು ಬರುತ್ತಿದ್ದಾಳೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವ ಬಾಲಕೃಷ್ಣ ನಾಯಕ್, ತಮಗೆ ಮತ್ತು ತಮ್ಮ ಹಿರಿಯ ಮಗಳು ಗಾಯತ್ರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.


Click it and Unblock the Notifications










