ಕಥೆಯೇ ನಾಯಕ, ರಾಕ್ಲೈನ್ ಉಪನಾಯಕ
ಅವರಿವರನ್ನು ನಾಯಕನಾಗಿಸುವುದಕ್ಕಿಂಥ ತಾವೇ ನಾಯಕನಾಗುವುದು ವಾಸಿ ಎಂದು ರಾಕ್ಲೈನ್ ವೆಂಕಟೇಶ್ಗೆ ಎಂದಾದರು ಅನ್ನಿಸಿತ್ತೋ ಇಲ್ಲವೋ, ರಾಕ್ಲೈನ್ರನ್ನು ನಾಯಕನಾಗಿಸಲು ನಿರ್ಮಾಪಕರಂತೂ ಉತ್ಸಾಹದಲ್ಲಿದ್ದಾರೆ. ಈ ಕಾರಣದಿಂದಾಗಿಯೇ ರಾಕ್ಲೈನ್ ನಟರಾಗಿಯೂ ಈಗ ಬಿಜಿ.
ರಮೇಶ್ ಯಾದವ್ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಾಕ್ಲೈನ್ ನಾಯಕ. ಯಥಾ ಪ್ರಕಾರ ಹೊಸಬರನ್ನು ಪರಿಚಯಿಸುವಲ್ಲಿ ಎತ್ತಿದ ಕೈ ಎನಿಸಿದ ಎಸ್.ಮಹೇಂದರ್ ಚಿತ್ರದ ನಿರ್ದೇಶಕ. ರಾಕ್ಲೈನ್ಗೆ ಪ್ರೇಮಾ ನಾಯಕಿಯಾಗಿರುವ ಈ ಚಿತ್ರಕ್ಕೆ 'ಬಲರಾಮ" ಎಂದು ಹೆಸರಿಟ್ಟಿದ್ದಾರೆ ರಮೇಶ್ ಯಾದವ್.
ಬಲರಾಮ ಮೂಲಕ ರಾಕ್ಲೈನ್ ಮಿಂಚುತ್ತಾರೆಯೇ? ಅವರನ್ನು ಕೇಳಿ: 'ನಾನು ಮಿಂಚುತ್ತೇನೋ ಇಲ್ಲವೋ ಗೊತ್ತಿಲ್ಲ . ಆದರೆ ಸಿನಿಮಾ ಮಿಂಚುತ್ತದೆ" ಎನ್ನುತ್ತಾರೆ. ಏಕೆಂದರೆ ಬಲರಾಮದಲ್ಲಿ ಕಥೆಯೇ ನಾಯಕ. ಕಥೆ ಬಹಳ ಚೆನ್ನಾಗಿದೆ ಎನ್ನುವ ರಾಕ್ಲೈನ್ ಸಿನಿಮಾದ ಪೂರಾ ಕ್ರೆಡಿಟ್ಟನ್ನು ಕಥೆಗೆ ಒಪ್ಪಿಸಲಿಕ್ಕೆ ಹಿಂದುಮುಂದು ನೋಡುವುದಿಲ್ಲ .
ಕಥೆಯನ್ನು ಬಿಟ್ಟರೆ ಹಾಡುಗಳಿಗೆ ಬಲರಾಮನಲ್ಲಿ ಎರಡನೇ ಸ್ಥಾನ. ಒಂದಕ್ಕಿಂಥ ಒಂದು ಚೆನ್ನ ಅನ್ನುವಂಥ ಎಂಟು ಹಾಡುಗಳು ಇರುತ್ತವಂತೆ. ಹಂಸಲೇಖಾ ಮನಸ್ಸಿಟ್ಟು ಬರೆದಿದ್ದಾರೆ ಎನ್ನುತ್ತಾರೆ ನಿರ್ಮಾಪಕರು. ಹಂಸಲೇಖಾ ಅವರ ಸ್ಟುಡಿಯೋಕ್ಕೆ ಬಲರಾಮ ಬೋಣಿಗೆ ಮಾಡುತ್ತಿರುವ ಮೊದಲ ಚಿತ್ರವಾದ್ದರಿಂದ, ಹಂಸ್ ತುಸು ಹೆಚ್ಚು ಶ್ರಮಿಸಿ ಹಾಡು ಬರೆದಿದ್ದಾರೆ ಎನ್ನಲಿಕ್ಕಡ್ಡಿಯಿಲ್ಲ . ಅಕ್ಟೋಬರ್ನಿಂದ ಹಾಡುಗಳ ಧ್ವನಿಮುದ್ರಣ ಹಾಗೂ ಬಲರಾಮನ ಚಿತ್ರೀಕರಣ ಶುರು.
ಬಲರಾಮ ಬಳಗ-
ಛಾಯಾಗ್ರಹಣ : ಕೃಷ್ಣಕುಮಾರ್
ಸಾಹಸ : ಕೌರವ್ ಮತ್ತು ಕೆ.ಡಿ.ವೆಂಕಟೇಶ್
ಕಥೆ : ಬಿ.ಎ.ಮಧು


Click it and Unblock the Notifications