ಬನಾರಸ್ ಪೋಸ್ಟರ್ ರಿಲೀಸ್ ಮಾಡಬೇಕಿದ್ದ ಅಪ್ಪು- ಮುಂದೂಡಿಕೆ
ಪುನೀತ್ ರಾಜ್ಕುಮಾರ್ ಇಲ್ಲವಾದ ಮೇಲೆ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅನಿವಾರ್ಯ ಬದಲಾವಣೆಗಳು ಆಗುತ್ತಿದೆ. ಅಪ್ಪು ಅವರನ್ನು ನಂಬಿಕೊಂಡಿದ್ದ ಎಷ್ಟೋ ಚಿತ್ರಗಳು ಬದಲಾವಣೆಯಾಗುವ ಅನಿವಾರ್ಯತೆ ಎದುರಿಸುತ್ತಿವೆ. ಅಪ್ಪು ಸದಾ ಹೊಸಬರಿಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಿದ್ದಂತಹ ವ್ಯಕ್ತಿ. ಅಂತೆಯೇ ಕನ್ನಡದ ಬನಾರಸ್ ಚಿತ್ರಕ್ಕೂ ಅಪ್ಪು ಸಹಕಾರ ನೀಡಲು ಮುಂದಾಗಿದ್ದರು. ಬನಾರಸ್ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಪುನೀತ್ ರಾಜಕುಮಾರ್ ಕೈಯಲ್ಲಿ ರಿಲೀಸ್ ಮಾಡಿಸಬೇಕು ಎನ್ನುವುದು ಚಿತ್ರತಂಡದ ಮಹತ್ತರ ಆಸೆಯಾಗಿತ್ತು.
ಈ ವಿಚಾರದ ಬಗ್ಗೆ ಚಿತ್ರದ ನಟ ಝುಯೀದ್ ಖಾನ್ ಪುನೀತ್ ರಾಜಕುಮಾರ್ ಜೊತೆಗೆ ನಡೆಸಿದ ಸಂಭಾಷಣೆ ಕೂಡ ವೈರಲ್ ಆಗಿದೆ. ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಸಲುವಾಗಿ ಅಪ್ಪು ಜೊತೆಗೆ ಝುಯೀದ್ ಖಾನ್ ಮಾತನಾಡಿ ಸಮಯವನ್ನು ತೆಗೆದುಕೊಂಡಿದ್ದರು. ಅಪ್ಪು ಕೂಡ ಚಿತ್ರತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಸ್ಟರ್ ರಿಲೀಸ್ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು. ಈ ವಿಚಾರವಾಗಿ ಮನೆಗೆ ಬರಲು ಚಿತ್ರತಂಡಕ್ಕೆ ಅಪ್ಪು ಹೇಳಿದ್ದರು. ಪುನೀತ್ ರಾಜ್ಕುಮಾರ್ ಅವರಿಂದ ಮೋಷನ್ ಪೋಸ್ಟರ್ ರಿಲೀಸ್ ಮಾಡಿಸಿ, ಅದನ್ನು ನವೆಂಬರ್ 1ರಂದು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡ ಹಾಕಿಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಅಷ್ಟರೊಳಗೆ ದೊಡ್ಡ ಅನಾಹುತವೇ ನಡೆದುಹೋಗಿದೆ.
ಬನಾಸರ್ ಚಿತ್ರದ ಪೋಸ್ಟರ್ ಬಿಡುಗಡೆ ಮುಂದೂಡಿಕೆ!
ಇವತ್ತು ಅಂದರೆ ನವೆಂಬರ್ 1 ಬನಾರಸ್ ಚಿತ್ರದ ಮೊದಲ ಮೋಷನ್ ಪೋಸ್ಟರ್ ರಿಲೀಸ್ ಆಗಬೇಕಿತ್ತು. ಅದನ್ನು ಸ್ವತಃ ಪುನೀತ್ ರಾಜಕುಮಾರ್ ಲಾಂಚ್ ಮಾಡಬೇಕಿತ್ತು. ಚಿತ್ರತಂಡ ಮತ್ತು ಪುನೀತ್ ಅವರ ಯೋಚನೆ ಇದಾದರೆ ವಿಧಿಯ ಆಟವೇ ಬೇರೆ ಇತ್ತು. ಅಪ್ಪು ಈಗ ಬಾರದೂರಿಗೆ ಹೋಗಿದ್ದಾರೆ. ಹಾಗಾಗಿ ಚಿತ್ರತಂಡ ಇಂದು ಪೋಸ್ಟರ್ ರಿಲೀಸ್ ಮಾಡುತ್ತಿಲ್ಲ. ಪೋಸ್ಟರ್ ರಿಲೀಸ್ ಮುಂದೂಡಿದೆ. ಅಪ್ಪುಗೆ ಗೌರವ ಸಲ್ಲಿಸೋ ನಿಟ್ಟಿನಲ್ಲಿ ಪೋಸ್ಟರ್ ರಿಲೀಸ್ ಮಾಡುತ್ತಿಲ್ಲ ಚಿತ್ರತಂಡ.

ಬನಾರಸ್ ಚಿತ್ರದ ಈ ಪೋಸ್ಟರನ್ನು ನವೆಂಬರ್ 17ಕ್ಕೆ ಮುಂದೂಡಲಾಗಿದೆ. ಅಪ್ಪು ಇಲ್ಲ ಅನ್ನುವ ನೋವನ್ನೇ ತೀರಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸದ್ಯಕ್ಕೆ ಪೋಸ್ಟರ್ ರಿಲೀಸ್ ಮಾಡದೇ ಇರಲು ಚಿತ್ರತಂಡ ನಿರ್ಧರಿಸಿದೆ.
ಕೇವಲ ಪೋಸ್ಟರ್ ರಿಲೀಸ್ ಮಾಡುವುದಷ್ಟೇ ಅಲ್ಲ. ಚಿತ್ರತಂಡಕ್ಕೆ ಅಪ್ಪು ಸಿನಿಮಾವನ್ನು ತೋರಿಸಿ ನಿಮ್ಮ ಸಿನಿಮಾ ನಾನು ನೋಡಲೇ ಬೇಕು ಅಂದಿದ್ದರಂತೆ. ಅಪ್ಪು ಮಾತು ಕೇಳಿ ಚಿತ್ರತಂಡಕ್ಕೆ ಒಂದು ರೀತಿಯ ಧೈರ್ಯವೇ ಬಂದುಬಿಟ್ಟಿತ್ತು. ಅಪ್ಪು ಆಡಿದ ಮಾತುಗಳು ಚಿತ್ರತಂಕ್ಕೆ ಭರವಸೆಯಾಗಿದ್ದವು. ಈ ವಿಚಾರವನ್ನು ನೆನೆಯುತ್ತಾ ನಿರ್ದೇಶಕ ಜಯತೀರ್ಥ ಭಾವುಕರಾದರು. ಅಪ್ಪು ಎರಡು ಮಾತಿಲ್ಲದೆ ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಲು ಮುಂದೆ ಬಂದಿದ್ದರು. ನಮ್ಮ ಚಿತ್ರದ ನಾಯಕನಟ ನೊಂದಿಗೆ ಮಾತನಾಡಿದ್ದರು. ನಿಮ್ಮ ಜೊತೆಗೆ ಇರುತ್ತೇನೆ ಎಂದಿದ್ದರು ಎನ್ನುತ್ತಾ ನಿರ್ದೇಶಕ ಜಯತೀರ್ಥ ಭಾವುಕರಾದರು.

ಬನಾರಸ್ ಕನ್ನಡದ ಹೊಸ ಲವ್ ಸ್ಟೋರಿ. ಈ ಚಿತ್ರದ ಮೂಲಕ ಶಾಸಕ ಜಮೀರ್ ಅಹಮದ್ ಪುತ್ರ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಸೋನಲ್ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಡಿಯೋ ಹಕ್ಕು ಮಾರಾಟದ ವಿಚಾರವಾಗಿ ಬನಾರಸ್ ಸುದ್ದಿಯಾಗಿತ್ತು. ಬನಾರಸ್ ಚಿತ್ರದ ಎಲ್ಲಾ ಭಾಷೆಗಳ ಆಡಿಯೋ ಹಕ್ಕಿನ ಲಹರಿ ಮತ್ತು ಟೀ-ಸೀರೀಸ್ ಸಂಸ್ಥೆ ಜೊತೆಯಾಗಿ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಗಳು ನಾಯಕನೊಬ್ಬನ ಚಿತ್ರದ ಆಡಿಯೋ ಹಕ್ಕನ್ನು ದುಬಾರಿ ಮೊತ್ತಕ್ಕೆ ಖರೀದಿಸಿದೆ. ಬನಾರಸ್ ಚಿತ್ರವನ್ನು ನಿರ್ದೇಶಕ ಜಯತೀರ್ಥ ನಿರ್ದೇಶನ ಮಾಡಿದ್ದು, ಇದೊಂದು ಪರಿಶುದ್ಧ ಪ್ರೇಮಕಥೆ. ಸದ್ಯ ಚಿತ್ರದ ಕೆಲಸಗಳು ಬಹುತೇಕ ಸಂಪೂರ್ಣಗೊಂಡಿದೆ. ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಚಿತ್ರತಂಡ ಭಾಗಿಯಾಗಲು ಮುಂದಾಗಿದೆ. ಇನ್ನು ನಂಬರ್ 17ಕ್ಕೆ ಚಿತ್ರದ ಮೊದಲ ಮೋಷನ್ ಪೋಸ್ಟರ್ ರಿಲೀಸ್ ಆಗಲಿದ್ದು ಹೇಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ.


Click it and Unblock the Notifications











