'ಅಂಜನಿಪುತ್ರ' ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ ಆದೇಶ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರದ ಪ್ರದರ್ಶನವನ್ನ ನಿಲ್ಲಿಸುವಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯ ಈ ಹಿಂದೆಯೆ ಪ್ರದರ್ಶನ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದ್ದರು ಕೂಡ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆದಿದೆ. ಹೀಗಾಗಿ, ಚಿತ್ರತಂಡದ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ವಕೀಲ ಜಿ. ನಾರಾಯಣಸ್ವಾಮಿ ಮತ್ತೊಮ್ಮೆ ದೂರು ದಾಖಲಿಸಿದ್ದರು.
'ಅಂಜನಿಪುತ್ರ' ಚಿತ್ರದಲ್ಲಿ ವಕೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ಸಂಭಾಷಣೆ ಇದೆ. ಹೀಗಾಗಿ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಸಂಭಾಷಣೆಯನ್ನ ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಅರ್ಜಿಯನ್ನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಜನವರಿ 2ನೇ ತಾರೀಖಿನವರೆಗೂ ಚಿತ್ರದ ಪ್ರದರ್ಶನ ರದ್ದು ಮಾಡಿ ಎಂದು ತಡೆಯಾಜ್ಞೆ ನೀಡಿತ್ತು. ಆದ್ರೆ, ಕೋರ್ಟ್ ಆದೇಶ ನಮ್ಮ ಕೈಗೆ ಸಿಕ್ಕಿಲ್ಲ ಎಂಬ ಕಾರಣ ನೀಡಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು. ಹೀಗಾಗಿ, ದೂರುದಾರರು ನ್ಯಾಯಾಂಗ ನಿಂದನೆಯಾಗಿದೆ ಎಂದು ಮತ್ತೆ ಅರ್ಜಿ ಸಲ್ಲಿಸಿ ಕೋರ್ಟ್ ಗಮನಕ್ಕೆ ತಂದಿದ್ದರು. ಇದರಿಂದ ನ್ಯಾಯಾಲಯ ಡಿಜಿಐಜಿಗೆ ಪ್ರದರ್ಶನ ನಿಲ್ಲಿಸುವಂತೆ ನೋಟಿಸ್ ನೀಡಿದೆ.
ಕಾರಣವೇನು?
''ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ" ಎಂದು ಇನ್ಸ್ ಪೆಕ್ಟರ್ ರವಿ ಶಂಕರ್, ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಚಿತ್ರದ ನಿರ್ದೇಶಕ ಎ.ಹರ್ಷ, ನಿರ್ಮಾಪಕ ಎಂ.ಎನ್.ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿ ವಿರುದ್ಧ ಅರ್ಜಿ ಸಲ್ಲಿಸಿದ್ದರು.


Click it and Unblock the Notifications











