Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯನ ಲೋಕದ ದಾದಾ ಮನ್ನಾ ಡೇ ವಿಧಿವಶ
ಬೆಂಗಳೂರು, ಅ.24: ಕುಹೂ ಕುಹೂ ಎಂದು ಹಾಡಿದ್ದ ಕೋಗಿಲೆ ಇನ್ನಿಲ್ಲ. ತನ್ನ ಸುಶ್ರಾವ್ಯ ಕಂಠದಿಂದ ಅಪಾರ ಅಭಿಮಾನಿಗಳನ್ನು ಮೋಡಿ ಮಾಡಿದ್ದ ಖ್ಯಾತ ಗಾಯಕ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನ್ನಾ ಡೇ ಅವರು ನಗರದಲ್ಲಿ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಮನ್ನಾ ಎಂದೇ ಜನಜನಿತರಾದ 94 ವರ್ಷದ Prabodh Chandra Dey ಮೂಲತಃ ಕೋಲ್ಕೊತ್ತಾದವರು. ಆದರೂ ಬೆಂಗಳೂರು ಅವರಿಗೆ ಆಪ್ಯಾಯಮಾನವಾಗಿತ್ತು. ಹಾಗಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದ ಮನ್ನಾ ಡೇಗೆ ಇತ್ತೀಚೆಗೆ ವಯೋಸಹಜ ಅನಾರೋಗ್ಯ ಕಾಡುತ್ತಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನ್ನಾ ಡೇ ಇಂದು ಬೆಳಗಿನ ಜಾವ 4 ಗಂಟೆಯಲ್ಲಿ ಅಸುನೀಗಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10ರಿಂದ 12 ಗಂಟೆ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಲಿಸಲಾಗಿದ್ದು ಮಧ್ಯಾಹ್ನ 1 ಗಂಟೆಗೆ ಹೆಬ್ಬಾಳ ಚಿತಾಗಾರದಲ್ಲಿ ಮನ್ನಾ ಡೆ ಅಂತಿಮ ಸಂಸ್ಕಾರ ನೆರವೇರಲಿದೆ. ಕನ್ನಡದಲ್ಲಿ ಉದಯ್ ಕುಮಾರ್ ನಟಿಸಿದ್ದ ಕಲಾವತಿ ಚಿತ್ರದಲ್ಲಿ ಕುಹೂ ಕುಹೂ ಎನ್ನುತ ಹಾಡುವಾ ಕೋಗಿಲೆ... ಜಯತೆ ಜಯತೆ ಸತ್ಯಮೇವ ಜಯತೆ...ಹಾಡುಗಳು ಅವರ ಕಂಠಸಿರಿಯಿಂದ ಹೊಮ್ಮಿವೆ.
ಹಿಂದಿಯಲ್ಲಿ ವಖ್ತ್ ಚಿತ್ರದ ಏ ಮೇರೆ ಜೋಹೊರ್ ಜಭೀನ್... ಆನಂದ್ ಚಿತ್ರದ ಜಿಂದಗಿ ಕೈಸೆ ಹೈ ಪಹೇಲಿ ಹಾಯ್...ಮುಂತಾದ ಜನಪ್ರಿಯ ಗೀತೆಗಳಿಂದ ಜನಮನ ಸೂರೆಗೊಂಡಿದ್ದಾರೆ. ಎಸ್ ಡಿ ಬರ್ಮನ್, ಶಂಕರ್ ಜೈ ಕಿಶನ್ , ರವಿ, ಲಕ್ಷ್ಮಿಕಾಂತ್ ಪ್ಯಾರೆಲಾಲ್ ಸೇರಿದಂತೆ ಎಲ್ಲಾ ಖ್ಯಾತ ಸಂಗೀತ ನಿರ್ದೇಶಕರ ರಾಗಸಂಯೋಜನೆಗೆ ತಮ್ಮ ಕಂಠ ಒದಗಿಸಿದ್ದಾರೆ.
1953ರ ಡಿಸೆಂಬರ್ 18ರಂದು ಕೇರಳ ಮೂಲದ ಸುಲೋಚನಾ ಕುಮಾರನ್ ಅವರೊಡನೆ ವಿವಾಹ. ಶೌರುಮಾ, ಸುಮಿತಾ ಇಬ್ಬರು ಪುತ್ರಿಯರು. ಮುಂಬೈನಲ್ಲಿ 50 ವರ್ಷ ಕಾಲ ವಾಸ. ಬೆಂಗಳೂರಿನ ಕಲ್ಯಾಣ ನಗರದಲ್ಲಿ ವಾಸವಾಗಿದ್ದರು.
ವೃತ್ತಿ ಜೀವನ: *ಮಾವ ಕೆಸಿ ಡೇ ಮೂಲಕ ಸಚಿನ್ ದೇವ್ ಬರ್ಮನ್ ಪರಿಚಯ. ಉಸ್ತಾದ್ ಅಮಾನ್ ಅಲಿಖಾನ್ ಹಾಗೂ ಉಸ್ತಾದ್ ಅಬ್ದುಲ್ ರಹಮಾನ್ ಖಾನ್ ಬಳಿ ಹಿಂದೂಸ್ತಾನಿ ಸಂಗೀತ ಪಾಠ. *1943 ತಮನ್ನಾ ಚಿತ್ರದ ಮೂಲಕ ಹಿನ್ನೆಲೆ ಗಾಯಕರಾದರು. ನಂತರ ಸಂಗೀತ ನಿರ್ದೇಶಕರಾದ ಶಂಕರ್ ಜೈ ಕಿಷನ್, ಆರ್ ಡಿ ಬರ್ಮನ್, ಸಲೀಲ್ ಚೌಧರಿ, ರವಿ, ಜೈದೇವ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಹೇಮಂತ್ ಕುಮಾರ್, ಕಲ್ಯಾಣ್ ಜಿ ಆನಂದ್ ಜಿ ಮುಂತಾದವರ ಸಂಯೋಜನೆಗೆ ಗಾಯನ. * ಕಿಶೋರ್ ಕುಮಾರ್, ಮುಖೇಶ್, ಹೇಮಂತ್ ಕುಮಾರ್, ಮಹಮದ್ ರಫಿ, ಲತಾ ಮಂಗೇಷ್ಕರ್, ಸೈರೈಯಾ ಜತೆ ಗಾಯನ.
ಪ್ರಶಸ್ತಿ, ಗೌರವಗಳು: *1971ರಲ್ಲಿ ಪದ್ಮಶ್ರೀ, 2005ರಲ್ಲಿ ಪದ್ಮ ಭೂಷಣ ಪ್ರಶಸ್ತಿ *1969, 1971 ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ * ಮಧ್ಯಪ್ರದೇಶ ಸರ್ಕಾರದಿಂದ ಲತಾ ಮಂಗೇಷ್ಕರ್ ಪ್ರಶಸ್ತಿ * 2009ರಲ್ಲಿ 2007 ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ * ಜಾದವ್ ಪುರ್ ವಿವಿ, ಬುರ್ದ್ವನ್ ವಿವಿ, ರವೀಂದ್ರ ಭಾರತಿ ವಿವಿಗಳಿಂದ ಗೌರವ ಡಾಕ್ಟರೇಟ್ * ಒರಿಸ್ಸಾ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ್ ಸರ್ಕಾರಗಳಿಂದ ಗೌರವಾದರ. * ಅನಂದ್ ಬಜಾರ್, ಕಮಲಾದೇವಿ ಗ್ರೂಪ್, ಪಿಸಿ ಚಂದ್ರ ಗ್ರೂಪ್, ಮಿಥುನ್ ಅಭಿಮಾನಿಗಳ ಸಂಘ, ಢಾಕಾ ಹಾಗೂ ಪುರಿಯ ಸಂಘಟನೆಗಳಿಂದ ಗೌರವ. (ಚಿತ್ರ: ದಿ ಹಿಂದೂ)