ತಗ್ಗೊದೇ ಇಲ್ಲ: ರಕ್ತಚಂದನ ಕಳ್ಳರನ್ನು ಹಿಡಿದು 'ಪುಷ್ಪರಾಜ್'ಗೆ ಸವಾಲ್ ಎಸೆದ ಬೆಂಗಳೂರು ಪೋಲಿಸರು!
ಸುಕುಮಾರ್ ನಿರ್ದೇಶನದ ತೆಲುಗಿನ 'ಪುಷ್ಪ' ಸಿನಿಮಾ 2 ವರ್ಷಗಳ ಹಿಂದೆ ಸಂಚಲನ ಸೃಷ್ಟಿಸಿತ್ತು. ರಕ್ತಚಂದನ ಸ್ಮಗ್ಲರ್ 'ಪುಷ್ಪರಾಜ್' ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಟೈಟಲ್ ರೋಲ್ನಲ್ಲಿ ಅಲ್ಲು ಅರ್ಜುನ್ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿದ್ದ ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.
'ಪುಷ್ಪ' ಸಿನಿಮಾ ನೋಡಿದ ಮೇಲೆ ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಯಾವ ಸಂದೇಶವನ್ನು ಸುಕುಮಾರ್ ಕೊಡೋಕೆ ಹೊರಟಿದ್ದಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಒಬ್ಬ ಸ್ಮಗ್ಲರ್ನ ಹೀರೊ ರೀತಿ ಬಿಂಬಿಸುವುದು ಎಷ್ಟು ಸರಿ ಎನ್ನುವ ಚರ್ಚೆ ನಡೆದಿತ್ತು. ಕರ್ನಾಟಕದಲ್ಲೂ ರಕ್ತಚಂದನ ಕಳ್ಳತನ, ಸಾಗಾಟ ಪ್ರಕರಣಗಳು ದಾಖಲಾಗುತ್ತಲೇ ಇವೆ. ಪೊಲೀಸರು ಇಂತಹ ಕಳ್ಳರನ್ನು ಬಂಧಿಸಿ ಜೈಲಿಗೆ ಅಟ್ಟುತ್ತಿರುತ್ತಾರೆ. ಇದೀಗ ಗಿರಿನಗರದ ಪೊಲೀಸರು ಅಕ್ರಮವಾಗಿ ರಕ್ತಚಂದನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ರಕ್ತಚಂದನವನ್ನು ಕಳ್ಳರು ಕದ್ದು ಮಾರಾಟ ಮಾಡುತ್ತಿದ್ದಾರೆ. ಆಫ್ರಿಕಾದ ಬ್ಲ್ಯಾಕ್ವುಡ್ ಬಿಟ್ಟರೆ ಏಷ್ಯಾದ ರಕ್ತಚಂದನಕ್ಕೆ ಭಾರೀ ಬೇಡಿಕೆಯಿದೆ. ಅದೇ ಕಾರಣಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸರ ಕಣ್ತಪ್ಪಿಸಿ ರಕ್ತಚಂದನ ತುಂಡುಗಳನ್ನು ಸಾಗಾಟ ಮಾಡಲಾಗುತ್ತಿದೆ. ಸದ್ಯ ಗಿರಿ ನಗರ ಪೊಲೀಸರು ಇಬ್ಬರನ್ನು ಬಂಧಿಸಿ 126 ಕೆಜಿ ರಕ್ತಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದಾರೆ.
ಸದ್ಯ ಬೆಂಗಳೂರು ನಗರ ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಕಳ್ಳರಿಂದ ವಶಪಡಿಸಿಕೊಂಡ ರಕ್ತಚಂದನ ತುಂಡುಗಳು ಹಾಗೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ಫೋಟೊ ಶೇರ್ ಮಾಡಿ "ನಮ್ಮ ಊರಲ್ಲಿ 'ಪುಷ್ಪರಾಜ್' ಕೋಟೆ ಬೆಳೆಯೋಕೆ ಬಿಡುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗ್ತಿದೆ. ಅದರಲ್ಲೂ ಪೋಸ್ಟ್ಗೆ ಕೊಟ್ಟಿರುವ ಕ್ಯಾಪ್ಷನ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಬಂಗಾರದ ಬೆಲೆಯಿರುವ ರಕ್ತಚಂದನವನ್ನು ಕಳ್ಳರು ಹೇಗೆ ಕದ್ದಿಯುತ್ತಾರೆ. ಅದನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೇಗೆ ಸಾಗಾಟ ಮಾಡುತ್ತಾರೆ ಅನ್ನೋದನ್ನು ಸಿನಿಮೀಯ ಸ್ಟೈಲ್ನಲ್ಲಿ ಸುಕುಮಾರ್ ತೆರೆಗೆ ತಂದಿದ್ದರು. ತಂದೆಯಿಲ್ಲದ 'ಪುಷ್ಪ'ರಾಜ್ ರಕ್ತಚಂದನ ಕಳ್ಳ ಸಾಗಾಟಗಾರನಾಗೋದು, ಅದಕ್ಕಾಗಿ ರೂಪಗೊಂಡ ಸಿಂಡಿಕೇಟ್ನ ಬುಡ ಅಲ್ಲಾಡಿಸಿ, ಅದನ್ನು ತನ್ನ ಹತೋಟಿಗೆ ತೆಗೆದುಕೊಳ್ತಾನೆ. ಈ ಹಾದಿಯಲ್ಲಿ ದೊಡ್ಡ ದೊಡ್ಡವರನ್ನು ಎದುರು ಹಾಕಿಕೊಳ್ಳುತ್ತಾನೆ. ಕೊನೆಗೆ ಎಸ್ಐ ಭನ್ವರ್ ಸಿಂಗ್ ಶೇಖಾವತ್ಗೂ ಸವಾಲ್ ಹಾಕಿದ್ದಾನೆ. ಅಲ್ಲಿಗೆ ಫಸ್ಟ್ ಪಾರ್ಟ್ ಕಥೆ ಮುಗಿದಿದೆ.

'ಪುಷ್ಪ- 2' ಚಿತ್ರದಲ್ಲಿ 'ಪುಷ್ಪ'ರಾಜ್ ಅಂತರಾಷ್ಟ್ರೀಯಮಟ್ಟದಲ್ಲಿ ಹೇಗೆ ದೊಡ್ಡ ಸ್ಮಗ್ಲರ್ ಆಗ್ತಾನೆ? ಇದರಿಂದ ಬಂದ ಹಣವನ್ನು ಏನು ಮಾಡ್ತಾನೆ? ಭನ್ವರ್ ಸಿಂಗ್ ಶೇಖಾವತ್ ಹಾಗೂ 'ಪುಷ್ಪ' ಏಟು ಎದಿರೇಟು ಹೇಗಿರುತ್ತದೆ ಅನ್ನುವುದನ್ನು ಸೀಕ್ವೆಲ್ನಲ್ಲಿ ಹೇಳಲಾಗ್ತಿದೆ. ಸದ್ಯ 2ನೇ ಭಾಗದ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಫಸ್ಟ್ ಗ್ಲಿಂಪ್ಸ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚಿತ್ರದ ಮೊದಲ ಭಾಗ ಬಾಕ್ಸಾಫೀಸ್ನಲ್ಲಿ ಆ ಮಟ್ಟಿಗೆ ಸದ್ದು ಮಾಡುತ್ತದೆ ಅನ್ನೋದನ್ನು ಚಿತ್ರತಂಡ ಕೂಡ ಊಹಿಸಿರಲಿಲ್ಲ. ಹಿಂದಿ ಬೆಲ್ಟ್ನಲ್ಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಇಟ್ಟುಕೊಂಡು ಚಿತ್ರದ 2ನೇ ಭಾಗ ತೆರೆಗೆ ತರಲಾಗುತ್ತಿದೆ. ಮೊದಲ ಭಾಗಕ್ಕಿಂತ ಎಲ್ಲಾ ವಿಭಾಗದಲ್ಲೂ ಈ ಸಿನಿಮಾ ಹಲವು ಪಟ್ಟು ದೊಡ್ಡದಾಗಿ ಇರಲಿದೆ. ಅಭಿಮಾನಿಗಳಂತೂ ಮತ್ತೆ ತೆರೆಮೇಲೆ 'ಪುಷ್ಪ'ರಾಜ್ ಆರ್ಭಟ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











