ಅಣ್ಣಾವ್ರ ಪುತ್ಥಳಿಯುಳ್ಳ 'ಬಂಗಾರದ ಮನುಷ್ಯ' ಉದ್ಯಾನ ಉದ್ಘಾಟಿಸಿದ ದುನಿಯಾ ವಿಜಯ್
ಚಿತ್ರದುರ್ಗದ ಹಿರಿಯೂರಿಗೆ ಗುರುವಾರ ಭೇಟಿ ನೀಡಿದ್ದ ನಟ ದುನಿಯಾ ವಿಜಯ್ ಅವರು ಅಲ್ಲಿ ಡಾ.ರಾಜ್ಕುಮಾರ್ ಅವರು ರೈತವೇಷದಲ್ಲಿರುವ ಪುತ್ಥಳಿ ಇರುವ 'ಬಂಗಾರದ ಮನುಷ್ಯ' ಉದ್ಯಾನವನ್ನು ಉದ್ಘಾಟನೆ ಮಾಡಿದ್ದಾರೆ.
ಹಿರಿಯೂರಿನ ಎಪಿಎಂಸಿ ಆವರಣದ ಮುಖ್ಯದ್ವಾರದಲ್ಲಿ ಈ ನವೀಕೃತ ಪುತ್ಥಳಿ ಇದ್ದು ಇದಕ್ಕೆ 'ಬಂಗಾರದ ಮನುಷ್ಯ' ಉದ್ಯಾನವೆಂದು ನಾಮಕರಣ ಮಾಡಲಾಗಿದೆ. ಈ ನವೀಕೃತ ಉದ್ಯಾನ ಹಾಗೂ ಪುತ್ಥಳಿಯನ್ನು ದುನಿಯಾ ವಿಜಯ್ ಅವರು ಇಂದು ಉದ್ಘಾಟನೆ ಮಾಡಿದ್ದಾರೆ.
ಡಾ.ರಾಜ್ಕುಮಾರ್ ಅವರನ್ನು ಹೋಲುವ ರೈತ ಪುತ್ಥಳಿಯೊಂದು ಅದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಇತ್ತು. ರೈತ ವೇಷಧಾರಿ ಡಾ.ರಾಜ್ಕುಮಾರ್ ಅವರು ಬಂಡಿ ಓಡಿಸುತ್ತಿರುವ ಪುತ್ಥಳಿ ಜೊತೆಗೆ ನಾಯಿ ಜೊತೆಗೆ ಹಾಲು ಕುಡಿಯುತ್ತಿರುವ ಹಸುವಿನ ಪುತ್ಥಳಿ ಇತ್ತು. ಆದರೆ ಕಾಲಾಂತರದಲ್ಲಿ ಬಿಸಿಲು-ಗಾಳಿ-ಮಳೆಯಿಂದಾಗಿ ವಿಗ್ರಗಳು ಶಿಥಿಲಗೊಂಡು ಬೀಳುವ ಹಂತಕ್ಕೆ ಬಂದಿದ್ದವು. ಅವಕ್ಕೆ ಡಾ.ರಾಜ್ಕುಮಾರ್ ಅಭಿಮಾನಿ ಸಂಘದ ತಾಲ್ಲೂಕು ಅಧ್ಯಕ್ಷ ಹುಚ್ಚವ್ವನಹಳ್ಳಿ ಪ್ರಸನ್ನ ಅವರು ಕಾಯಕಲ್ಪ ನೀಡಿದ್ದಾರೆ.

ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಲಾಗಿದೆ: ದುನಿಯಾ
ಉದ್ಯಾನ ಉದ್ಘಾಟಿಸಿ ಮಾತನಾಡಿದ ದುನಿಯಾ ವಿಜಯ್, 'ಈ ಪುತ್ಥಳಿಗಳಿಗೆ ಮೂಲರೂಪ ಕೊಡಿಸಿರುವ ಪ್ರಸನ್ನ ಅವರು ಡಾ.ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ರೈತನ ಬದುಕು ಮುರಿಯದಂತೆ ರಕ್ಷಣೆ ನೀಡಬೇಕು ಎಂಬ ಸಂದೇಶವನ್ನೂ ಸಾರಿದ್ದಾರೆ' ಎಂದಿದ್ದಾರೆ.

ಕಲಾವಿದ ಸಂಗಮೇಶ್ಗೆ ಧನ್ಯವಾದ ಹೇಳಿದ ದುನಿಯಾ ವಿಜಯ್
ಪುತ್ತಳಿಗಳನ್ನು ಪುನರ್ ನವೀಕರಣ ಮಾಡಿದ ಚಿತ್ರದುರ್ಗದ ಮುರುಘಾ ಮಠ ವನದ ಕಲಾವಿದ ಸಂಗಮೇಶ್ ಅವರಿಗೆ ಧನ್ಯವಾದ ಸಲ್ಲಿಸಿದ ದುನಿಯಾ ವಿಜಯ್. 'ಯುವಕರು, ಇಂಥಹಾ ಜನಪರ ಕಾರ್ಯಕ್ರಮಗಳಲ್ಲಿ ಹೆಚ್ಚು-ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಜೊತೆಗೆ 'ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ನೋಡಿ ಕಲಾವಿದರ ಬೆನ್ನು ತಟ್ಟಿ' ಎಂದು ಮನವಿ ಮಾಡಿದರು.

ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು
ಚಿತ್ರದುರ್ಗದಲ್ಲಿ 'ಸಲಗ' ಚಿತ್ರತಂಡವು ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. 'ಸಲಗ' ಪ್ರಚಾರ ನಿಮಿತ್ತ ಪತ್ರಕರ್ತರು ಹಾಗೂ ಚಿತ್ರತಂಡದ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ದುನಿಯಾ ವಿಜಯ್ ಅವರು ಫೀಲ್ಡ್ನಲ್ಲಿಯೇ ಕುಣಿದು ಕುಪ್ಪಳಿಸಿದರು. ಜೊತೆಗೆ ಪಂದ್ಯದಲ್ಲಿ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಸಹ ನೀಡಿದರು.
Recommended Video

ಏಪ್ರಿಲ್ 15 ಕ್ಕೆ ಸಿನಿಮಾ ಬಿಡುಗಡೆ
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಸಹ ಮಾಡಿರುವ 'ಸಲಗ' ಸಿನಿಮಾವು ಏಪ್ರಿಲ್ 15 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್, ಸಂಜನಾ ಆನಂದ್, ಅಚ್ಯುತ್ ಕುಮಾರ್, ರಂಗಾಯಣ ರಘು ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











