Bank Janardhan: ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಘಾತ, ಐಸಿಯುನಲ್ಲಿ ಚಿಕಿತ್ಸೆ
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಘಾತ ಆಗಿದೆ. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟರನ್ನು ಸೋಮವಾರದಿಂದ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬ್ಯಾಂಕ್ ಜನಾರ್ದನ್ ಅವರಿಗೆ 74 ವರ್ಷ ವಯಸ್ಸಾಗಿದೆ.

ಸೋಮವಾರ ಸಂಜೆ ಆರೋಗ್ಯದಲ್ಲಿ ಏರುಪೇರಾಗಿದ್ದು ಸಂಜೆಯೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಂಕ್ ಜನಾರ್ದನ್ ಅವರ ಆರೋಗ್ಯದ ಬಗ್ಗೆ ವರ ಪುತ್ರ ಗುರುಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. " ಬ್ಯಾಂಕ್ ಜನಾರ್ದನ್ ಅವರು ಆರೋಗ್ಯವಾಗಿದ್ದಾರೆ. ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆಂಜಿಯೋಗ್ರಾಮ್ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದ ಬ್ಯಾಂಕ್ ಜನಾರ್ದನ್ ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಕಳೆದ 40 ವರ್ಷಗಳಿಂದ ಕನ್ನಡ ಸಿನಿ ರಸಿಕರನ್ನು ರಂಜಿಸುತ್ತಿದ್ದಾರೆ. ಕನ್ನಡದ ಎಲ್ಲಾ ಹೆಸರಾಂತ ನಟರೊಂದಿಗೆ ತೆರೆ ಹಂಚಿಕೊಂಡಿರುವ ಇವರು, ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಲನಚಿತ್ರಗಳು, ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಹಿರಿಯ ನಟ ಬ್ಯಾಂಕ್ ಜನಾರ್ದನ್. ಹಾಸ್ಯ ನಟರಾಗಿ, ಖಳ ನಟ ಮತ್ತು ಪೋಷಕ ಪಾತ್ರಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.
ನಟ ಬ್ಯಾಂಕ್ ಜನಾರ್ದನ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ 1949ರಲ್ಲಿ ಜನಿಸಿದವರು. ಅಜಗಜಾಂತರ ಸಿನಿಮಾ ಮೂಲಕ 1991ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ರಿಯಲ್ ಸ್ಟಾರ್ ಉಪೇಂದ್ರ ಅವರ ತರ್ಲೆ ನನ್ಮಗ, ಶ್ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದವರು. ಹಳೆಯ ಎಲ್ಲಾ ಸಿನಿಮಾಗಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು, ಇತ್ತೀಚೆಗೆ ಸಿನಿಮಾ ರಂಗದಿಂದ ದೂರವಾಗಿದ್ದರು.


Click it and Unblock the Notifications











