ಪ್ರೊ.ಬರಗೂರು ರಾಮಚಂದ್ರಪ್ಪ ರವರಿಗೆ ಪತ್ನಿ ವಿಯೋಗ
ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಪತ್ನಿ ಎಸ್.ರಾಜಲಕ್ಷ್ಮಿ ಅನಾರೋಗ್ಯದಿಂದ ಇಂದು ನಿಧನರಾದರು.
ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ 66 ವರ್ಷದ ಎಸ್.ರಾಜಲಕ್ಷ್ಮಿ, ಕಳೆದ 50 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಇಂದು ಕೊನೆಯುಸಿರೆಳೆದರು.
ಡಾ.ರಾಜ್ ಕುಮಾರ್ ಅವರ ಪ್ರಭಾವದಿಂದ ಎಸ್.ರಾಜಲಕ್ಷ್ಮಿ ನೇತ್ರದಾನ ಮಾಡಲು ನಿರ್ಧರಿಸಿದ್ದರು. ಈ ಹಿನ್ನಲೆಯಲ್ಲಿ ಅವರ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ. ನಾಳೆ ಎಸ್.ರಾಜಲಕ್ಷ್ಮಿ ಅವರ ಪಾರ್ಥೀವ ಶರೀರವನ್ನ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಳಿಕ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ ಎಸ್.ರಾಜಲಕ್ಷ್ಮಿ ಯವರು ಬಿ.ಎ. ಮತ್ತು ಹಿಂದಿ ವಿದ್ವಾನ್ ಪದವೀಧರರಾಗಿದ್ದರು. ಕನ್ನಡ ಸಾಹಿತ್ಯ ಪ್ರೇಮಿಯಾದ ಅವರು ನಾಲ್ಕು ದಶಕಗಳ ಹಿಂದೆಯೇ ಸಾಹಿತಿ ಬರಗೂರು ರಾಮಚಂದ್ರಪ್ಪ ರವರೊಂದಿಗೆ ಅಂತರ್ ಜಾತಿಯ ವಿವಾಹವಾಗಿ ದಿಟ್ಟತನ ತೋರಿದ್ದರು. ಬದುಕಿನುದ್ದಕ್ಕೂ ಬರಗೂರರ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಕ್ರಿಯಾಶೀಲತೆಗೆ ಬೆಂಬಲವಾಗಿ ನಿಂತಿದ್ದರು. ಎಸ್.ರಾಜಲಕ್ಷ್ಮಿ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.


Click it and Unblock the Notifications











